ಮುಧೋಳ: ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಬರುತ್ತಾರೆ. 3 ತಿಂಗಳಿಂದ ಒಂದೇ ಒಂದು ಸಿಸೇರಿಯನ್ ಸರ್ಕಾರಿ ಆಸ್ಪತ್ರೆಯಲ್ಲಿ ಆಗಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವಂತಾಗಿದೆ. ಸಭೆಗೆ ಮುನ್ನ ನೀಡುವ ಮಾಹಿತಿ ಬೇರೆ ಈಗ ಹೇಳುತ್ತಿರುವ ಮಾಹಿತಿ ಬೇರೆ ಈ ಬೇಜವಾಬ್ದಾರಿ ನಡುವಳಿಕೆ ಸರಿ ಅಲ್ಲ ಎಂದು ಶಾಸಕ ಗೋವಿಂದ ಕಾರಜೋಳ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಅವರು ಶುಕ್ರವಾರ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ನಡೆದ 3 ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ ನಗರಸಭೆಯಿಂದ ಎದ್ದು ಕಾಣುವ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ನೀರು ಸಾಕಷ್ಟು ಇದ್ದರೂ ನಗರಸಭೆಯ ಅಸಮರ್ಪಕ ನಿರ್ವಹಣೆಯಿಂದ ಜನರಿಗೆ ನೀರು ಸಿಗುತ್ತಿಲ್ಲ. ಆಕ್ರಮವಾಗಿ ನೀರಿನ ಸಂಪರ್ಕ ಪಡೆದವರನ್ನು ಪತ್ತೆ ಹಚ್ಚಿ ಸ್ಥಗಿತಗೋಳಿಸಿ. ವಾಣಿಜ್ಯ ಉದ್ದೇಶಕ್ಕೆ ಬಳಿಸುವವರಿಗೆ ಮೀಟರ್ ಅಳವಡಿಸಲು ಸೂಚಿಸಿದರು.
ಜನ ಜಾನುವಾರುಗಳಿಗೆ ನೀರು, ಮೇವು ಕೊರತೆಯಾಗದಂತೆ ಕ್ರೀಯಾ ಯೋಜನೆ ರೂಪಿಸಿ ಬರವನ್ನು ಸಮರ್ಥವಾಗಿ ಏದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದ ರೈತರಿಗೆ ಆನ್ಲೈನ್ ಅಂದರೆ ಎನು ಎಂದು ಇನ್ನೂ ತಿಳಿದಿಲ್ಲ. ಕೃಷಿ ಇಲಾಖೆ ಆನ್ ಲೈನ್ ಮೂಲಕ ಅರ್ಜಿಸಲ್ಲಿಸಲು ಹೇಳುತ್ತಿರುವುದರಿಂದ ಮಧ್ಯವರ್ತಿಗಳು ಹುಟ್ಟುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಾಲ್ಲೂಕಿನಲ್ಲಿ 1595 ಹೇಕ್ಟೇರ್ ಮುಂಗಾರು ಬೆಳೆ ಹಾಗೂ 11200 ಹೇಕ್ಟೇರ್ ಹಿಂಗಾರು ಬೆಳೆ ನಾಶವಾಗಿದೆ ಎಂದು ಸಭೆಗೆ ವಿವರಿಸಿದರು.
‘ಯುಜಿಡಿ ಕಾಮಗಾರಿಯಿಂದ ಜನರು ರೋಸಿ ಹೋಗಿದ್ದಾರೆ. ಕೇವಲ ಎಲ್ಲದಕ್ಕೂ ಹೋ ಎನ್ನುವ ಕೆಯುಡಿ ಎಇಇ ಕಾಸಿವಿಶ್ವನಾಥ ನಿಮ್ಮ ಮಾತಿನ ಮೇಲೆ ನನಗೆ ವಿಶ್ವಾಸವಿಲ್ಲ. ನೀವು ಕಲಸವನ್ನು ಸಮರ್ಥವಾಗಿ ನಿರ್ವಹಿಸಬೇಕು’ ಎಂದು ಸೂಚಿಸಿದರು.
ಪಿಡಬ್ಲ್ಯುಡಿ ಎಇಇ ಅವರನ್ನು ತರಾಟೆಗೆ ತಗೆದುಕೊಂಡ ಕಾರಜೋಳ ಅಭಿವೃದ್ಧಿ ಕೆಲಸ ಮಾಡುವಾಗ ತೊಂದರೆ ಮಾಡುವ ಜನರ ವಿರುದ್ಧ ಪೊಲೀಸ್ ದೂರು ನೀಡಿ. ಆದರೆ ಅಧಿಕಾರಿಗಳು ಅಸಹಾಯಕತೆ ಸಹಿಸುವುದಿಲ್ಲ. ಬೈಪಾಸ್ ರಸ್ತೆಗೆ ನಾಲ್ಕು ವರ್ಷಗಳಿಂದ 40 ಎಕರೆ ಭೂಸ್ವಾಧೀನ ಪಡಿಕೊಳ್ಳಲು ಆಗುತ್ತಿಲ್ಲ ಪ್ರತಿ ಬಾರಿ ಒಂದಲ್ಲ ಒಂದು ನೇಪಹೇಳಿ ಗಣೇಶ ಮುದುವೆಯಂತೆ ಮುಂದಕ್ಕೆ ಹಾಕುತ್ತಿದ್ದಿರಿ. ರೈತರು ಕೇಳುವ ಹಣ ನೀಡಿ ಸ್ವಾಧೀನ ಪಡಿಸಿಕೊಳ್ಳಿ ಎಂದು ಹೇಳಿದರು.
ಪಶು ಭಾಗ್ಯ ತಾಲ್ಲೂಕಿಗೆ ಶಾಪವಾಗಿದೆ. ಪ್ರತಿವರ್ಷ 7 ಫಲಾನುಭವಿಗಳಿ ಮಾತ್ರ ಗುರುತಿಸಿದರೆ ತಾಲ್ಲೂಕಿನ ಬಡವರು ಉದ್ಯೋಗವಂತರಾಗಲು ಎಷ್ಟು ಶತಮಾನಗಳ ಬೇಕು. ಪಶುಸಂಗೋಪನಾ ಇಲಾಖೆಯ ಪಶು ಭಾಗ್ಯ ಯೋಜನೆಯಲ್ಲಿ ಎಸ್ಸಿ ಜನಾಂಗಕ್ಕೆ ಹೈನುಗಾರಿಕೆಗೆ 4 ಫಲಾನುಭವಿಗಳಿಗೆ 540 ಅರ್ಜಿ ಬಂದಿವೆ. ಎಸ್ಟಿ ಹೈನುಗಾರಿಕೆಗೆ 1 ಫಲಾನುಭಗೆ 108 ಅರ್ಜಿ ಬಂದಿವೆ.
ಅಲ್ಪ ಸಂಖ್ಯಾತರಲ್ಲಿ ಹೈನುಗಾರಿಕೆಗೆ 2 ಫಲಾನುಭವಿಗೆ 33 ಅರ್ಜಿ ಬಂದಿವೆ. ಒಟ್ಟು 648 ಅರ್ಜಿಗಳಲ್ಲಿ 7 ಫಲಾನುಭವಿಗಳನ್ನು ಗುರುತಿಸುವುದು ಕಷ್ಟದ ಕೆಲಸ. ಬಡವರು ನಿತ್ಯ ಮನೆಗೆ ಬರುತ್ತಿದ್ದಾರೆ. ಎಲ್ಲ ಬಡವರಿಗೂ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ಲಾಟರಿ ಮೂಲಕ 7 ಫಲಾನುಭವಿಗಳನ್ನು ಗುರುತಿಸಿ ಎಂದು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಹೇಳಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮನಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ತಾಪಂ ಇಒ ಬಿ.ವಿ.ಅಡವಿಮಠ ಹಾಗೂ ತಾಲ್ಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.