ದೇವನಹಳ್ಳಿ : ತಾಲ್ಲೂಕಿನಲ್ಲಿ ನಡೆಯುವ ಯಾವುದೇ ಇಲಾಖೆಯ ಅನುದಾನದ ಕಾಮಗಾರಿ ಗ್ರಾಮದ ಸರ್ವಾಂಗೀಣ ಪ್ರಗತಿಗೆ ಎಂಬುದನ್ನು ಅರಿತು ಪಕ್ಷಾತೀತವಾಗಿ ಸಹಕರಿಸಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ಅಭಿಪ್ರಾಯಪಟ್ಟರು. ದೇವನಹಳ್ಳಿ ತಾಲ್ಲೂಕು ಸಾದಹಳ್ಳಿಗ್ರಾಮ ಪಂಚಾಯಿತಿ ಅನುದಾನದಲ್ಲಿನ ಚರಂಡಿ ಕಾಮಗಾರಿ ಭೂಮಿ ಪೂಜೆಯಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿ ನೈರ್ಮಲ್ಯ ವ್ಯವಸ್ಥೆ ಕಾಯ್ದುಕೊಳ್ಳಲು ಚರಂಡಿ ನಿರ್ಮಾಣ ಮತ್ತು ಸ್ವಚ್ಛತೆ ಮುಖ್ಯವಾದರೂ ಕಸ ತ್ಯಾಜ್ಯವಿಲೇವಾರಿ ಸಮರ್ಪಕ ನಿರ್ವಹಣೆ ಮಾಡಬೇಕು ಎಂದರು. ಸಾದಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ಕನ್ನಮಂಗಲ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ ಮಂಜುನಾಥ್ ಮಾತನಾಡಿ, 2016–17ನೇ ಸಾಲಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಮಂಗಲ, ಪೂಜನಹಳ್ಳಿ, ಟಿ ಹೊಸಹಳ್ಳಿ, ಇಲತೊರೆ, ಚೌಡನಹಳ್ಳಿ, ಕನ್ನಮಂಗಲಪಾಳ್ಯ, ದೊಡ್ಡಪ್ಪನಹಳ್ಳಿ, ಉಗನವಾಡಿ, ಸಾದಹಳ್ಳಿ, ಜೋಗಹಳ್ಳಿ, ಕೆಂಪತಿಮ್ಮನಹಳ್ಳಿ ಒಟ್ಟು 12 ಗ್ರಾಮಗಳಲ್ಲಿ 1,64,71,000 ಅನುದಾನವನ್ನು ಚರಂಡಿ ಕಾಮಗಾರಿಗೆ ಮೀಸಲಿರಿಸಿ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.
ಪಂಚಾಯಿತಿ ಅನುದಾನ ವ್ಯಾಪ್ತಿಯಲ್ಲಿ ಸಾದಹಳ್ಳಿಗೆ 35 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಉಳಿದ ಅನುದಾನದ ಕಾಮಗಾರಿ ಬಹುತೇಕ ಮುಗಿದಿದೆ ಎಂದರು.
ಗುತ್ತಿಗೆದಾದರು ಕಳಪೆ ಕಾಮಗಾರಿ ನಡೆಸದೆ ಗುಣಮಟ್ಟ ಕಾಯ್ದುಕೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಕಾಮಗಾರಿ ಸಂದರ್ಭದಲ್ಲಿ ಖುದ್ದು ಹಾಜರಿದ್ದು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ ಸಿ ಮಂಜುನಾಥ್, ತಾಲೂಕು ಪಂಚಾಯಿತಿ ಸದಸ್ಯ ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಿಕಾಂತ್, ಜಯಂತಿ, ನಿಮಿತಾ, ಆಶಾದಾಸ್, ತಾ. ಪಂ. ಮಾಜಿ ಉಪಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ, ಮುಖಂಡ ದುಬೈ ಮಂಜುನಾಥ್, ಪಾರ್ಥಸಾರಥಿ ಇದ್ದರು.