ಕಮತಗಿ(ಅಮೀನಗಡ): ನೇಕಾರರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ಯೋಜನೆ ಸದುಪಯೋಗಪಡಿಸಿಕೊಳ್ಳಿ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
ಪಟ್ಟಣದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಉಪ ಕೇಂದ್ರಕ್ಕೆ ಭೇಟಿ ನೀಡಿ ನೇಕಾರರ ಸಮಸ್ಯೆ ಆಲಿಸಿ ಮಾತನಾಡಿದರು.
1972ರಲ್ಲಿ ಕೆ.ಎಚ್.ಡಿ.ಸಿ ನಿಗಮದಲ್ಲಿ ಅಂದು 60 ಸಾವಿರ ನೇಕಾರರು. 1600 ಸಿಬ್ಬಂದಿಯಿದ್ದರು. ಈಗ 10 ಸಾವಿರ ನೇಕಾರರು, 500 ಸಿಬ್ಬಂದಿ ಇದ್ದಾರೆ. ಈಗ ಪ್ರತಿ ತಿಂಗಳು ₹ 2.50 ಕೋಟಿ ವೇತನ ನೀಡಬೇಕಾಗಿದೆ. ಇದರಿಂದ ನಿಗಮಕ್ಕೆ ₹ 1.15 ಕೋಟಿ ನಷ್ಟದಲ್ಲಿದೆ ಎಂದರು.
ವಿದ್ಯಾ ವಿಕಾಸ ಯೋಜನೆ ಅಡಿ ಹಾಗೂ ಬೆಡ್ ಶೀಟ್ ಮತ್ತು ಟಾವೆಲ್ಗಳಂಥ ಉತ್ಪಾದನೆಯಲ್ಲಿ ಸರಿದೂಗಿಸಲಾಗುತ್ತಿದೆ. ಮುಖ್ಯಮಂತ್ರಿ ವಿದ್ಯಾ ವಿಕಾಸ್ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನೇಕಾರರ ಪುನಃಶ್ಚೇತನಕ್ಕೆ ಸರಕಾರ ₹ 150 ಕೋಟಿ ಮಂಜೂರು ಮಾಡಿದೆ. ನೇಕಾರರಿಗೆ ಶ್ರಮ ಕಡಿಮೆಯಾಗಬೇಕು ಎಂದರು.
ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಮಗ್ಗಗಳಿಗೆ ಮೋಟಾರು ಅಳವಡಿಸುವ ಉದ್ದೇಶ ಹೊಂದಲಾಗಿದೆ. ಪ್ರತಿ ಮಗ್ಗಕ್ಕೆ ₹ 50 ಸಾವಿರ ವೆಚ್ಚವಾಗಲಿದೆ. ಇದೇ ವಾರದಲ್ಲಿ ಆಂಧ್ರಪ್ರದೇಶದಿಂದ ಅಂತಹ ಮಗ್ಗ ತರಿಸಿ ನೇಕಾರರಿಗೆ ಪರಿಚಯಿಸಲಾಗುವುದು ಎಂದರು.
ಸಹಕಾರಿ ಸಂಘಕ್ಕೆ ನೀಡುತ್ತಿದ್ದ ಶೇ 20 ರಿಯಾಯಿತಿ ಬದಲಾಗಿ ಶೇ 40ಕ್ಕೇರಿಸಲು ಒಪ್ಪಿಗೆ ಸಿಕ್ಕಿದೆ. ರೈತರಿಗೆ ನೀಡುವ ಮಾದರಿಯಲ್ಲಿ ನೇಕಾರರಿಗೂ ಬಡ್ಡಿ ರಹಿತ ಸಾಲವನ್ನು ನೀಡುವಂತೆ ಮನವಿ ಮಾಡಲಾಗಿದೆ. ಅಲ್ಲದೇ ನೇಕಾರರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಬಾಗಲಕೋಟೆಯಲ್ಲಿ ನೇಕಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾವೇಶಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು. ನೇಕಾರರು ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾಂತೇಶ ಅಂಗಡಿ, ಪ್ರಮುಖರಾದ ಶ್ರೀಕಾಂತ ಧೂಪದ, ರಾಜು ಕುಂಬಳಾವತಿ, ಯಲ್ಲಪ್ಪ ವಡ್ಡರ, ರವೀಂದ್ರ ಶಿನ್ನೂರ, ಚಿದಾನಂದಪ್ಪ ಹೋಟಿ, ಪಟ್ಟಣ ಪಂಚಾಯಿತಿ ಸದಸ್ಯ ಮೈಬೂಬ್ ಡಲಾಯತ, ನಾಗರಾಜ ಧೂಪದ ಉಪಸ್ಥಿತರಿದ್ದರು.