ಹಳಿಯಾಳ: ಮೂಡಬಿದರೆ ಆಳ್ವಾಸ್ನ ಮಮತಾ ಕೆಳೋಜಿ ಹಾಗೂ ಗದಗಿನ ಮೈತ್ರಾ ವ್ಯಾಪಾರಿ ನಡುವೆ ನಡೆದ 42 ಕೆ.ಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಆಳ್ವಾಸ್ನ ಮಮತಾ ಕೇಳೊಜಿ ಅವರು ಗದಗಿನ ಮೈತ್ರಾಳನ್ನು ಸೋಲಿಸಿ ಬಾಲಕಿಯರ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು.
ಸ್ಥಳಿಯ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಉತ್ಕರ್ಷ ಉತ್ತರಕನ್ನಡ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ರಾಜ್ಯ ಕುಸ್ತಿ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಭಾನುವಾರದಂದು ಸ್ಥಳೀಯ ಮೋತಿಕೆರೆ ಹತ್ತಿರ ಇರುವ ಜಿಲ್ಲಾ ಕುಸ್ತಿ ಅಖಾಡಾದಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯ 42 ಕೆ.ಜಿ ವಿಭಾಗದಲ್ಲಿ ಮೊದಲು 3 ನಿಮಿಷದ ಅವಧಿಯಲ್ಲಿ 2–0 ಅಂಕ ಗಳಿಸಿದ ಮಮತಾ ಕೇಳೊಜಿ ನಂತರದ ಮೂರು ನಿಮಿಷದ ಅವಧಿಯಲ್ಲಿ ಗದಗಿನ ಮೈತ್ರಾಳನ್ನು ಚಿತ್ ಮಾಡಿದರು.
32 ಕೆ.ಜಿ ವಿಭಾಗದಲ್ಲಿ ಕ್ರೀಡಾ ಶಾಲೆ ಹಳಿಯಾಳದ ಅಕ್ಷತಾ ಪ್ರಥಮ ಸ್ಥಾನ ಹಾಗೂ ಸಾನಿಯಾ ಸಿದ್ದಿ ದ್ವಿತೀಯ ಸ್ಥಾನ ಪಡೆದರು.
35 ಕೆ.ಜಿ ವಿಭಾಗದಲ್ಲಿ ಕ್ರೀಡಾ ಶಾಲೆ ಹಳಿಯಾಳದ ರೂಪಾ ಪ್ರಥಮ ಹಾಗೂ ಗದಗಿನ ಸಂಧ್ಯಾ ದ್ವಿತೀಯ ಸ್ಥಾನ ಪಡೆದರು.
29 ಕೆ.ಜಿ ಬಾಲಕರ ವಿಭಾಗದ ಕುಸ್ತಿ ಪಂದ್ಯದಲ್ಲಿ ನಿಂಗಪ್ಪ ಮುಧೋಳ ಹಾಗೂ ಶಿವಾನಂದ ನಡುವೆ ನಡೆದು 8–4 ಅಂಕಗಳ ಆಧಾರದಲ್ಲಿ ನಿಂಗಪ್ಪ ಮುಧೋಳ ಪ್ರಥಮ ಸ್ಥಾನ, ಶಿವಾನಂದ ದ್ವಿತೀಯ ಸ್ಥಾನ ಪಡೆದರು.
ನಾಮದೇವ ಹಾಗೂ ವಿಷ್ಣು ತೃತೀಯ ಸ್ಥಾನ ಪಡೆದರು.
32 ಕೆ.ಜಿ ವಿಭಾಗದಲ್ಲಿ ಕ್ರೀಡಾ ಶಾಲೆ ಹಳಿಯಾಳದ ಸೂರಜ ಗಂದಿಟ್ಕರ ಪ್ರಥಮ, ದಾವಣಗೆರೆಯ ಪಿ.ಎಸ್. ಬಸವರಾಜ ದ್ವಿತೀಯ ಸ್ಥಾನ ಪಡೆದರು.
35 ಕೆ.ಜಿ ವಿಭಾಗದಲ್ಲಿ ಕ್ರೀಡಾ ಶಾಲೆ ಹಳಿಯಾಳದ ರೋಹನ ದೊಡ್ಡಮನಿ ಪ್ರಥಮ, ದಾವಣಗೆರೆಯ ಬಿ.ಸಂಜು ದ್ವಿತೀಯ, ಬನಹಟ್ಟಿಯ ಸಾಗರ, ಹಳಿಯಾಳದ ಸುಲೇಮಾನ ತೃತೀಯ ಸ್ಥಾನ ಪಡೆದರು.
70 ಕೆ.ಜಿ ಮೇಲ್ಪಟ್ಟು ವಿಭಾಗದ ಮೊದಲನೇಯ ಸುತ್ತಿನ ಕುಸ್ತಿ ಪಂದ್ಯದಲ್ಲಿ ಕ್ರೀಡಾ ಶಾಲೆ ಧಾರವಾಡದ ಸತೀಶ ಪಡತರೆ ಹಾಗೂ ನಿಪ್ಪಾಣಿಯ ವೃಷಭ ನಡುವೆ ನಡೆದು ಡಬಲ್ ಪಟ್ಟು ಡಾವಪೆಚ್ ಲೆಗ್ ಅಟ್ಯಾಕ್ ನಿಂದ ಸತೀಶ ಪಡತರೆ 10 ಅಂಕಗಳ ಆಧಾರದಿಂದ 2ನೇ ಸುತ್ತನ್ನು ಪ್ರವೇಶಿಸಿದರು.
70 ಕೆ.ಜಿ ವಿಭಾಗದಲ್ಲಿ ಜಮಖಂಡಿಯ ಸಂಜಯ ಸಿ ಹಾಗೂ ಎಂಇಜಿ ಯ ಸಿದ್ದಣ್ಣಾ ಪಾಟೀಲ ನಡುವೆ ಕುಸ್ತಿ ಪಂದ್ಯ ನಡೆದು ಜೋಡಿ ಪಟ್ಟು ತಾಂತ್ರಿಕ ಡಾವಪೆಚ್ ನಿಂದ 10 ಅಂಕ ಗಳಿಸಿ ಸಿದ್ದಣ್ಣಾ ಪಾಟೀಲ 2ನೇ ಸುತ್ತಿಗೆ ಪ್ರವೇಶಿಸಿದರು.
ಸೋಮವಾರದಂದು ನಡೆಯಲಿರುವ ಪೈನಲ್ ಕುಸ್ತಿ ಪಂದ್ಯದ ಪುರುಷರ ಮಹಾನ್ ಭಾರತ ಕೇಸರಿ ಹಾಗೂ ಮಹಿಳೆಯರ ವೀರ ಮಾತಾ ಕಿತ್ತೂರ ರಾಣಿ ಚೆನ್ನಮ್ಮ ಭಾರತ ಕೇಸರಿ, ಕರ್ನಾಟಕ ಕೇಸರಿ, ಕರ್ನಾಟಕ ಕಿಶೋರ, ಕರ್ನಾಟಕ ಕುಮಾರ, ಕರ್ನಾಟಕ ಚಾಂಪಿಯನ್ ಪ್ರಶಸ್ತಿಯ ಕುಸ್ತಿಗಳು ನಡೆಯಲಿದೆ.
ರಾಜ್ಯದ ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭಾನುವಾರದಂದು ನಡೆದ ಕುಸ್ತಿ ಪಂದ್ಯದಲ್ಲಿ ಪಾಲ್ಗೊಂಡು ಕುಸ್ತಿಪಟುಗಳನ್ನು ಹುರಿದುಂಬಿಸಿದರು.
ವಿ.ಆರ್.ಡಿ.ಎಮ್ ಟ್ರಸ್ಟನ ಪ್ರಸಾದ ದೇಶಪಾಂಡೆ,ಪ್ರಶಾಂತ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.