ಗದಗ: ಅಂಗವಿಕಲ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಸಾಧಿಸುವ ಮನೋಭಾವ ಇದ್ದವರಿಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂದು ನಗರಸಭೆ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಅಭಿಪ್ರಾಯಪಟ್ಟರು.
ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶನಿವಾರ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ, ಬಾಲಕಿಯರ ಜಿಲ್ಲಾ ಮಟ್ಟದ ವಿಶೇಷ ಮಕ್ಕಳ ಕ್ರೀಡಾಕೂಟ ಮತ್ತು ಜಂಪ್ ರೋಪ್ ಸ್ಪರ್ಧೆ–2017ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ತೊಳಲಾಟಗಳಿಂದ ದೂರವಾಗಲು ಸಾಧ್ಯವಾಗುತ್ತದೆ ಎಂದು ಬಿಇಒ ಐ.ಬಿ.ಬೆನಕೊಪ್ಪ ತಿಳಿಸಿದರು.
ಮುಖ್ಯಶಿಕ್ಷಕ ಎಸ್.ಎನ್.ಬಳ್ಳಾರಿ, ಬಿ.ಬಿ.ವಿಶ್ವನಾಥ, ಡಿ.ಎಸ್.ತಳವಾರ, ದೈಹಿಕ ಶಿಕ್ಷಣಾಧಿಕಾರಿ ಬಿ.ಎಚ್. ಚಕ್ರಣ್ಣವರ, ಎನ್.ಎಸ್.ಅಂಗಡಿ, ವಿ.ಎ.ಸಜ್ಜನರ ಇದ್ದರು. ಎ.ಎಂ.ಕುಂಟೊಜಿ ಮಾತನಾಡಿ ದರು. ವೈ.ಕೆ.ಚೌಡಾಪೂರ ಸ್ವಾಗತಿಸಿ ದರು, ಎಸ್.ಬಿ.ಪೂಜಾರ ನಿರೂ ಪಿಸಿ ದರು, ಎಂ.ಎಸ್.ಕುಚಬಾಳ ವಂದಿಸಿದರು.