ಶಿರಹಟ್ಟಿ: ಸರ್ಕಾರಿ ಶಾಲೆಗಳಿಗೆ ಆಧುನಿಕತೆಯ ಸ್ಪರ್ಶ ನೀಡಿ ಶಾಲಾ ವಾತಾವರಣಗಳಲ್ಲಿ ವಿನೂತನ ಪ್ರಯೋಗಗಳನ್ನು ಮಾಡಿ ಯಶಸ್ವಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಅವರ ಸಾಧನೆ ಅನನ್ಯವಾದದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಾ ಘಟಕ ಅಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ಪಟ್ಟಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಾಲ್ಲೂಕಿನ ಬಹುತೇಕ ಶಾಲೆಗಳಲ್ಲಿ ಆಡಳಿತ ತಂತ್ರಜ್ಞಾನ ಬಳಕೆಗಾಗಿ ಸರ್ಕಾರೇತರ ಸಂಸ್ಥೆ ಹಾಗೂ ದಾನಿಗಳಿಂದ ಇಂಟ್ರ್ಯಾಕ್ಟ ಬೋರ್ಡ್ ಲ್ಯಾಪಟಾಪ್ ಗಣಕಯಂತ್ರ ಹಾಗೂ ಟಿವಿಗಳನ್ನು ದಾನವಾಗಿ ಪಡೆದು ಬಹುತೇಕ ಶಾಲೆಗಳಲ್ಲಿ ಅಳವಡಿಸಲಾಗಿದೆ. ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಏಕರೂಪ ಸಮವಸ್ತ್ರ ವ್ಯವಸ್ಥೆ, ಟೈ, ಬೆಲ್ಟ್ ಹಾಗೂ ವಿಶೇಷವಾಗಿ ಸಿಸ್ತುಬದ್ದ ಶಿಕ್ಷಣ ನೀತಿಯನ್ನು ಸರ್ಕಾರಿ ಶಾಲೆಗಳಲ್ಲಿ ಕಟ್ಟಿನಿಟ್ಟಾಗಿ ಜಾರಿಗೆ ತರಲು ಅವರ ಕೊಡುಗೆ ವಿಶೇಷವಾಗಿದೆ.
ಮ್ಯಾಟ್ರಿಕ್ನಲ್ಲಿ ಉತ್ತಮ ಫಲಿತಾಂಶ ಹೊರಬರಲು ಶಿಕ್ಷಕರಿಗೆ ತರಬೇತಿ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಮಾಡುತ್ತಿರುವ ಬಿಇಓ ಅವರಿಗೆ ತಾಲ್ಲೂಕಾ ಆಡಳಿತ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳು ಅವರಿಗೆ ಮಾಡುತ್ತಿರುವ ಸನ್ಮಾನ ಸ್ತುತ್ಯಾರ್ಹ ವಾದದು ಎಂದು ಹೇಳಿದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚುವದು. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಸೇವೆ ಸಲ್ಲಿಸಬೇಕು. ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಸೌಲಭ್ಯಗಳನ್ನು ಪರಿಣಾತ್ಮಕಾರಿಯಾಗಿ ಅನುಷ್ಠಾನಕ್ಕೆ ನಮ್ಮ ನಿಮ್ಮೆಲ್ಲರ ಮುಖ್ಯ ಕರ್ತವ್ಯ ಎಂದರು.
ತಹಶೀಲ್ದಾರ್ ಎ.ಎಂ. ಅಮರಾವದಗಿ, ಪಟ್ಟಣ ಪಂಚಾಯತ ಅಧ್ಯಕ್ಷ ಬುಡನಶ್ಯಾ ಮಕಾಂದರ, ವೈ.ಎಸ್. ಪಾಟೀಲ, ಸಂತೋಷ ಕುರಿ, ಗುರುರಾಜ ಸರ್ಜಾಪೂರ, ಎಸ್.ಬಿ. ಹೊಸೂರ, ಎಚ್.ಡಿ. ಮಾಗಡಿ, ಎಚ್.ಆರ್. ಬೆನಹಾಳ ತಾಪಂ ಇಓ ಆರ್.ವೈ. ಗುರಿಕಾರ, ಎಂ.ಎ. ಮಕಾಂದರ, ಎಚ್.ಎಂ. ದೇವಗಿರಿ ಉಪಸ್ಥಿತರಿದ್ದರು.