ಅಜ್ಜಂಪುರ: ಅವ್ಯವಸ್ಥೆ ಮತ್ತು ಹಲವು ಸಮಸ್ಯೆಗಳಿಂದ ನರಳುತ್ತಿರುವ ಪಟ್ಟಣದ ಅಮೃತ್ಮಹಲ್ ತಳಿ ಸಂವರ್ಧನಾ ಕೇಂದ್ರಕ್ಕೆ ಶನಿವಾರ ಪಶುಪಾಲನಾ ಇಲಾಖೆ ನಿರ್ದೇಶಕ ಡಾ.ಜಫ್ರುಲ್ಲಾಖಾನ್ ಭೇಟಿ ನೀಡಿದ್ದರು.
ಕೇಂದ್ರದಲ್ಲಿನ ಮೇವು ಪೂರೈಕೆ-ಸಂಗ್ರಹ, ಡಿ ದರ್ಜೆ ನೌಕರರ ಕೊರತೆ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಈ ಮೊದಲು ಇಂತಹ ಸಮಸ್ಯೆಗಳ ಬಗ್ಗೆ ನಮಗೆ ನಿಖರ ಮಾಹಿತಿ ಏಕೆ ನೀಡಿಲ್ಲ? ಎಂದು ಕಿಡಿಕಾರಿದರು.
ಈ ಮಧ್ಯೆ ಕೇಂದ್ರದಲ್ಲಿ ಹಸಿ ಮೇವು ಬೆಳೆಯಲಾಗಿದೆ. ರಾಸುಗಳಿಗೆ ಮೇವಿನ ಕೊರತೆ ಇಲ್ಲ ಎಂದು ಪ್ರಭಾರ ನಿರ್ದೇಶಕ ಡಾ.ವೀರಭದ್ರಪ್ಪ ಸಮರ್ಥಿಸಿ ಕೊಂಡರು. ಆದರೆ ರಾಸುಗಳ ಸ್ಥಿತಿಗತಿ ವೀಕ್ಷಿಸಿದ್ದ ಪಶುಪಾಲನಾ ಇಲಾಖೆಯ ನಿರ್ದೇಶಕರು, ಒಣ ಹುಲ್ಲಿನ ಸಂಗ್ರಹ ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಇಲ್ಲಿನ ರಾಸುಗಳಿಗೆ ಮುಂದಿನ ಎರಡು ತಿಂಗಳಿಗೆ ಅಗತ್ಯವಿರುವ 50 ಟನ್ ಒಣ ಹುಲ್ಲನ್ನು ಸಂಗ್ರಹಿಸಿಟ್ಟು ಕೊಳ್ಳುವಂತೆ ಸೂಚಿಸಿದರು.
ಉಪನಿರ್ದೇಶಕ ಡಾ.ಅನ್ವರ್ ಪಾಷ, ಜಂಟಿ ನಿರ್ದೇಶಕ ಹಲಗಪ್ಪ, ಹೆಚ್ಚುವರಿ ನಿರ್ದೇಶಕ ಡಾ.ಎಂ.ಟಿ. ಮಂಜುನಾಥ್, ಜಿಲ್ಲಾ ಉಪ ನಿರ್ದೇಶಕ ಡಾ.ಪ್ರಭುಲಿಂಗ, ಡಾ.ಕೆಂಚಪ್ಪ ಮತ್ತಿತರರಿದ್ದರು.
ಭಾನುವಾರವೂ ನಿರ್ವಹಿಸಿದ ಸಿಬ್ಬಂದಿ
ಪಶುಪಾಲನಾ ಇಲಾಖಾ ನಿರ್ದೇಶಕರ ಖಡಕ್ ಎಚ್ಚರಿಕೆ ಯಿಂದಾಗಿ ಎಚ್ಚೆತ್ತು ಕೊಂಡಿರುವ ತಳಿ ಸಂವರ್ಧನಾ ಕೇಂದ್ರದ ಅಧಿಕಾರಿಗಳು ಭಾನುವಾರವೂ ಕಚೇರಿಯಲ್ಲಿ ಹಾಜರಿದ್ದು ಕಂಡು ಬಂದಿತು. ಕೇಂದ್ರದಲ್ಲಿ ಜಂಟಿ ನಿರ್ದೇಶಕ ಹಲಗಪ್ಪ, ಪ್ರಭಾರಿ ನಿರ್ದೇಶಕ ಡಾ.ವೀರಭದ್ರಪ್ಪ , ಅಧೀಕ್ಷಕ ಶೌಕತ್ ಅಲಿ ಇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಬೀರೂರು ಅಮೃತ್ ಮಹಲ್ ಕೇಂದ್ರದಿಂದ 3 ಲೋಡ್ ಅಂದರೆ ಸುಮಾರು 9 ಟನ್ ಹೊಗರು ಜೋಳದ ಸೆಪ್ಪೆಯನ್ನು ತರಿಸಿ, ಸಂಗ್ರಹಿಸಲಾಗಿದೆ.
ನಾಳೆಯೂ ಇನ್ನಷ್ಟು ಮೇವು ಬರಲಿದೆ. ಇನ್ನು ಇಲ್ಲಿನ ಸುತ್ತಮುತ್ತಲ ನಮ್ಮ ಕೇಂದ್ರಗಳು ಹಾಗೂ ಹೆಸರುಘಟ್ಟ, ಕುರಿಕೊಪ್ಪ ಫಾರಂಗಳಿಂದಲೂ ಮೇವು ತರಿಸಿಕೊಳ್ಳಲು ತೀರ್ಮಾ ನಿಸಲಾಗಿದೆ. ಅಲ್ಲದೇ ಪಾವಗಡ ಮೂಲದ ಸ್ವಾಮೀಜಿ ಯೊಬ್ಬರು ಒಂದು ಲೋಡ್ ಒಣ ಹುಲ್ಲನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ. ಒಟ್ಟಾರೆ ತುರ್ತಾಗಿ ಅಗತ್ಯ ದಷ್ಟು ಮೇವನ್ನು ಸಂಗ್ರಹಿಸ ಲಾಗು ವುದು ಎಂದು ಡಾ.ವೀರಭದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.