ಮದ್ದೂರು: ಗಾಂಧಿವಾದದ ಹೆಸರಿನಲ್ಲಿ ನಮಲ್ಲಿಯೇ ನಕಲಿ ಗಾಂಧಿ ಅನುಯಾ ಯಿಗಳು ಸೃಷ್ಟಿಯಾಗಿದ್ದು, ಇವರು ಗಾಂಧಿವಾದವನ್ನು ತಮ್ಮ ಸ್ವ ಹಿತಾಸಕ್ತಿಗೆ ಬಂಡವಾಳ ಮಾಡಿಕೊಂಡಿರುವುದು ದುರಂತದ ಸಂಗತಿ ಎಂದು ಶಾಸಕ ಡಿ.ಸಿ. ತಮ್ಮಣ್ಣ ಲೇವಡಿ ಮಾಡಿದರು.
ಪಟ್ಟಣದ ಎಚ್.ಕೆ. ವೀರಣ್ಣಗೌಡ ಕಾಲೇಜಿನಲ್ಲಿ ಶನಿವಾರ ಸಂಜೆ ನಡೆದ ಗಾಂಧಿ ವಿಚಾರ ಪ್ರಣೀತ ರಾಜ್ಯಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ 16ನೇ ವರ್ಷದ ವಿಶೇಷ ಕಾರ್ಯಾಗಾರದದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಭಾರತ 130 ಕೋಟಿ ಜನಸಂಖ್ಯೆ ಹೊಂದಿದ್ದು, ಇವರಲ್ಲಿ ಶೇ.70ರಷ್ಟು ಯುವಸಂಪತ್ತನ್ನು ಹೊಂದಿರುವ ಭಾರತ ಇಂದಿಗೂ ಬಲಿಷ್ಠ ದೇಶ. ಇತ್ತೀಚಿನ ದಿನಗಳಲ್ಲಿ ದೇಶವು 6ನೇ ಬಲಿಷ್ಠ ರಾಷ್ಟ್ರವಾಗಿ ರೂಪುಗೊಂಡಿರುವುದು ಉತ್ತಮ ಬೆಳವಣಿಗೆ ಎಂದರು.
ಮಾಜಿ ಶಾಸಕಿ ಮಲ್ಲಾಜಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯದ ಬಳಿಕವೂ ದೇಶದಲ್ಲಿ ಅಸಹಿಷ್ಣುತೆ, ಸಾಮಾಜಿಕ ಅಸಮಾನತೆ ಎಲ್ಲೆಮೀರಿದ್ದು, ಇದರ ನಿವಾರಣೆಗೆ ಗಾಂಧೀಜಿ ತತ್ವಾದರ್ಶಗಳ ಅನುಸರಿಸು ವುದು ಅನಿವಾರ್ಯವಾಗಿದೆ ಎಂದರು.
ಮೈಸೂರು ವಲಯ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾಂತ ಸಂಯೋಜನಾಧಿಕಾರಿ ದಿನೇಶ್ ಮಾತನಾಡಿದರು.
ಗೋಷ್ಠಿಗಳು: ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಎಸ್. ಶಿವರಾಜಪ್ಪ ಅಧ್ಯಕ್ಷತೆಯಲ್ಲಿ 'ಜಾಗತಿಕ ಯುಗದಲ್ಲಿ ಗಾಂಧೀಜಿ ಅವರ ಚಿಂತನೆ' ಕುರಿತು ಪ್ರಾಧ್ಯಾಪಕ ಡಾ. ಉಮೇಶ್ ವಿಚಾರ ಮಂಡಿಸಿದರು.
ಸರ್ವೋದಯ ಮಂಡಲದ ಕಾರ್ಯದರ್ಶಿ ಎಲ್. ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ 'ಬದಲಾಗುತ್ತಿರುವ ದಿನಮಾನಗಳಲ್ಲಿ ಗಾಂಧಿ ಮಾರ್ಗ ಅನಿವಾರ್ಯವೇ?' ಕುರಿತು ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಬಿ. ಚಂದ್ರಶೇಖರ್ ವಿಚಾರ ಮಂಡಿಸಿರು.
ಎಂ.ಎಚ್. ಚನ್ನೇಗೌಡ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಟಿ. ಚಂದು, ನಿರ್ದೇಶಕ ಸಿ. ಅಪೂರ್ವಚಂದ್ರು ಪ್ರಾಂಶುಪಾಲರಾದ ಪ್ರೊ. ಕಾಂತರಾಜು, ಯು.ಎಸ್. ಶಿವಕುಮಾರ್, ಪ್ರಾಧ್ಯಾಪಕರಾದ ಸೀನಪ್ಪ, ಎಚ್.ಎಸ್. ಪಂಚಲಿಂಗೇಗೌಡ, ಶ್ರೀಲತಾ, ಪ್ರಕಾಶ್ ಭಾಗವಹಿಸಿದ್ದರು.