ಹಾಸನ: ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಕೈಗೊಳ್ಳುತ್ತಿರುವ ನಗರ ದ ಬಸಟ್ಟಿಕೊಪ್ಪಲು ರಸ್ತೆ ವಿಸ್ತರಣೆಗೆ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತ ವಾಗಿದೆ. ಕಾಮಗಾರಿ ಸ್ಥಗಿತಗೊಳಿಸ ದಿದ್ದರೆ ಬೀದಿಗಿಳಿದು ಹೋರಾಟ ನಡೆಸ ಲು ಕಟ್ಟಡ ಮಾಲೀಕರು ನಿರ್ಧರಿ ಸಿದ್ದಾರೆ.
ಸಹ್ಯಾದ್ರಿ ವೃತ್ತದಿಂದ ಎಂ.ಜಿ. ರಸ್ತೆಯ ಮಹಾತ್ಮ ಗಾಂಧಿ ಪುತ್ಥಳಿವರೆಗೆ ರಸ್ತೆ 50 ಅಡಿ ವಿಸ್ತರಣೆಗೊಳ್ಳಲಿದೆ. ಇದರಲ್ಲಿ ರಸ್ತೆ ಮಧ್ಯೆ 2 ಅಡಿ ವಿದ್ಯುತ್ ದೀಪಗಳ ಅಳವಡಿಕೆ ಅಲ್ಲಿಂದ ಎರಡು ಬದಿಯಲ್ಲಿ 20 ಅಡಿಗಳ ರಸ್ತೆ ಮತ್ತು ತಲಾ ನಾಲ್ಕು ಅಡಿ ಪಾದಚಾರಿ ಮಾರ್ಗ ರಚಿಸ ಲಾಗುವುದು.
ಅಂಡರ್ಗ್ರೌಂಡ್ ವಿದ್ಯುತ್ ಕೇಬಲ್ಗಳ ಅಳವಡಿಕೆಗೆ ಯೋಚಿಸ ಲಾಗುತ್ತಿದೆ. ಪಾದಚಾರಿಗಳಿಗೆ ನಿರ್ಮಿ ಸುವ ಪಾಥ್ ವೇ ಕೆಳಗೆ ಚರಂಡಿ ನಿರ್ಮಾಣವಾಗಲಿದೆ. ಕಾಮಗಾರಿಗೆ ಈಗಾಗಲೇ ₹ 3 ಕೋಟಿ ಅನುದಾನ ಮೀಸಲಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
‘ಬಸಟ್ಟಿಕೊಪ್ಪಲು ಗ್ರಾಮವನ್ನು ಹಾಸನ ನಗರದ ಅಭಿವೃದ್ಧಿಗಾಗಿ ನೀಡಿದ್ದೇವೆ. 1965–70ರ ಸುಮಾರಿನಲ್ಲಿ ಪೂರ್ವಿಕರು ಇಲ್ಲಿನ ಜಮೀನನ್ನು ಅಂದು ಸಿಕ್ಕ ಅಲ್ಪ ಪರಿಹಾರ ಪಡೆದು ನೀಡಿದರು. ಈಗ ಜಮೀನು ಮಾಲೀಕರ ಮನೆಗಳು ಮಾತ್ರ ಇವೆ. ಅವುಗಳನ್ನು ನೆಲಸಮ ಮಾಡಿಸಲು ನಿರ್ಧರಿಸಲಾಗಿದೆ. ಸ್ವಂತ ಮನೆಗಳಲ್ಲೂ ವಾಸಿಸುವ ಹಕ್ಕು ಇಲ್ಲವೇ.
ಭೂಮಿ ಕಳೆದುಕೊಂಡ ಪರಿಣಾಮ ವಾಗಿ ಎಲ್ಲರೂ ಬೇರೆ ಕಡೆಗೆ ಸ್ಥಳಾಂತರ ಆಗಬೇಕಾಯಿತು. ಇನ್ನು ಕೆಲವರು ಬೇಕರಿ, ಬಟ್ಟೆ ಅಂಗಡಿ, ಹೋಟೆಲ್ ತೆರೆದು ಬದುಕು ಸಾಗಿಸುತ್ತಿದ್ದೇವೆ. ಈಗ ಅದಕ್ಕೂ ಕೊಡಲಿ ಏಟು ಹಾಕುತ್ತಿರು ವುದು ಏಕೆ’ ಎಂದು ನಿವಾಸಿ ರಾಜಣ್ಣ ಪ್ರಶ್ನಿಸುತ್ತಾರೆ.
ಶಂಕರಮಠ ರಸ್ತೆ ವಿಸ್ತರಿಸಿ: ‘ಬಿ.ಎಂ. ರಸ್ತೆಯಿಂದ ಎಂ.ಜಿ. ರಸ್ತೆವರೆಗೆ ಸಂಪರ್ಕ ಕಲ್ಪಿಸುವ ಶಂಕರಮಠ ರಸ್ತೆ ಏಕಪಥವಾಗಿದೆ. ಅದನ್ನು ದ್ವಿಪಥವಾಗಿ ಪರಿವರ್ತಿಸಿದರೆ ಬಸಟ್ಟಿಕೊಪ್ಪಲು ರಸ್ತೆ ವಿಸ್ತರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ತಪ್ಪು ತಿಳಿವಳಿಕೆಯಿಂದ ಈ ಕ್ರಮ ಕೈಗೊಂಡಿದ್ದಾರೆ. ಶಂಕರಮಠ ರಸ್ತೆಯನ್ನು ದ್ವಿಪಥವಾಗಿ ಮಾಡಿದರೆ ದಟ್ಟಣೆ ನಿಯಂತ್ರಣವಾಗುತ್ತದೆ. ಅದ ರಿಂದ ಸರ್ಕಾರಿ ಕಾಲೇಜು, ಆಸ್ಪತ್ರೆಗೆ ಹೋಗಲು ಅನುಕೂಲವಾಗುತ್ತದೆ’ ಎಂಬುದು ಜಾಗ ಕಳೆದುಕೊಳ್ಳುತ್ತಿರುವ ನಿವಾಸಿಗಳ ಸಲಹೆ.
‘ಬಸಟ್ಟಿಕೊಪ್ಪಲು ರಸ್ತೆಯನ್ನು ಏಕ ಪಥ ರಸ್ತೆ ಮಾಡಿದರೆ ವಾಹನ ದಟ್ಟಣೆ ತಡೆಗಟ್ಟಬಹುದು. ಶಂಕರಮಠ ರಸ್ತೆ ಯನ್ನು ದ್ವಿಪಥ ಮಾಡಿದರೆ ಈ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಜತೆಗೆ ಏಕಪಥ ಮಾಡಿದರೆ ಸಂಚಾರ ದಟ್ಟಣೆ ಪ್ರಸ್ತಾಪವೇ ಬರುವುದಿಲ್ಲ’ ಎಂದು ಅಭಿಪ್ರಾಯಪಡುತ್ತಾರೆ.
**
ಉಸ್ತುವಾರಿ ಸಚಿವ ಎ.ಮಂಜು ಅವರು ತಪ್ಪು ಮಾಹಿತಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಸೌಜನ್ಯಕ್ಕಾದರೂ ಇಲ್ಲಿನ ನಿವಾಸಿಗಳ ಅಳಲು ಕೇಳಬೇಕಿತ್ತು
-ಲೋಕೇಶ್
ಬಸಟ್ಟಿಕೊಪ್ಪಲು ನಿವಾಸಿ
**
ಈ ರಸ್ತೆ ವಿಸ್ತರಣೆ ಯೋಜನೆಗೆ ತಡೆ ನೀಡದಿದ್ದರೆ ಕೋರ್ಟ್ ಮೇಟ್ಟಿಲೇರಬೇಕಾಗುತ್ತದೆ. ನಗರ ಅಭಿವೃದ್ಧಿಗೆ ಭೂಮಿ ನೀಡಿದ್ದೇವೆ. ಈಗ ವಾಸದ ಮನೆಯನ್ನು ಕೇಳುತ್ತಿದ್ದಾರೆ
-ದೇವೇಗೌಡ
ಬಸಟ್ಟಿಕೊಪ್ಪಲು ನಿವಾಸಿ
**
-ಮಲ್ಲಿಕಾರ್ಜುನ ಕೊಚ್ಚರಗಿ