ಏನಿದು ನಾಟಕ?
ಜಿಲ್ಲೆಯ ಸಿದ್ಧರಬೆಟ್ಟವನ್ನು ಕೇಂದ್ರವಾಗಿಟ್ಟುಕೊಂಡು ಕುರುಂ ಕೋಟೆ ಕಟ್ಟಿಕೊಂಡು ದಲಿತ ಸಮುದಾಯದ ಕುರಂಗ ಎಂಬುವನು 16ನೇ ಶತಮಾನದಲ್ಲಿ ರಾಜ್ಯಭಾರ ಮಾಡುತ್ತಿದ್ದನು. ಮಧುಗಿರಿಯ ಮಹಾನಾಡ ಪ್ರಭುಗಳ ಸಾಮಂತ ರಾಜ ಆಗಿದ್ದನು.
ಕುರಂಗರಾಜನ ಕುರಿತು ಅನೇಕ ಮೌಖಿಕ ಕಥನಗಳಿವೆ. ರಾಜನ ಆಡಳಿತದ ಮೇಲೆ ಬೆಳಕು ಚೆಲ್ಲುವ ಅನೇಕ ಕುರುಹುಗಳು, ಅರಮನೆ, ಲದ್ದಿಕಟ್ಟೆ, ಸೂಳೆಕಲ್ಲು, ಸಿದ್ದೇಶ್ವರ ಗದ್ದುಗೆ ಸೇರಿ ಅನೇಕ ಐತಿಹ್ಯಗಳಿವೆ.
ಈತನ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲುವ ಕೆಲಸ ಮಾಡಿಲ್ಲ. ದಲಿತನಾಗಿದ್ದ ಕಾರಣ ಇತಿಹಾಸಕಾರರು ಈ ರಾಜನ ಕುರಿತು ಏನನ್ನು ಬರೆದಿಲ್ಲ, ಸಂಶೋಧನೆ ಮಾಡಲು ಪ್ರಯತ್ನಪಟ್ಟಿಲ್ಲ ಎಂಬ ಆರೋಪಗಳಿವೆ.
ಈ ರಾಜನ ಕುರಿತಾದ ಮೌಖಿಕ ಕಥನಗಳು, ಐತಿಹ್ಯ ಹಾಗೂ ಕುರಂಕೋಟೆ ಸುತ್ತಮುತ್ತ ಸಿಕ್ಕಿರುವ ಕುರುಹುಗಳು, ಲಾವಣಿಗಳನ್ನು ಬಳಸಿಕೊಂಡು ಡಾ. ಓ. ನಾಗರಾಜ್ ಅವರು ಕುರಂಗರಾಜ ವೈಭವ ಕೃತಿ ರಚಿಸಿದ್ದರು. ಈ ಕೃತಿಯನ್ನು ನಾಟಕಕ್ಕೆ ನಾಗರಾಜ್ ಅವರೇ ತಂದಿದ್ದಾರೆ.