ಆನೇಕಲ್: ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ಆಗುತ್ತಿಲ್ಲ ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ. ತಹಶೀಲ್ದಾರ್ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ (ಸ್ವಾಭಿಮಾನಿ) ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್ ಮಾತನಾಡಿ, ಆನೇಕಲ್ ತಹಶೀಲ್ದಾರ್ ಆಶಾ ಪರ್ವೀನ್ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಶಾಸಕರಿಗೆ ಹಣ ನೀಡಬೇಕು ಎಂದು ಹೇಳಿ ರೈತರ ಬಳಿ ಹೇಳಿ ಲಂಚ ಪಡೆಯುವುದರಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು. ಶಾಸಕರ ಹೆಸರು ಹೇಳಿದರೂ ಶಾಸಕರು ಈ ಬಗ್ಗೆ ಚಕಾರವೆತ್ತಿಲ್ಲ ಎಂದರು.
ತಹಶೀಲ್ದಾರರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಲಂಚಕ್ಕೆ ಕಡಿವಾಣ ಹಾಕದಿದ್ದರೆ ಶಾಸಕರಿಗೂ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.
ಗ್ರಾನೈಟ್, ಮರಳು ಮಾಫಿಯಾ ಜೊತೆಗೆ ತಾಲ್ಲೂಕು ಆಡಳಿತ ಶಾಮೀಲಾಗಿದೆ ಎಂದು ಆರೋಪಿಸಿದರು. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಂಪಲಘಟ್ಟ ರವಿ, ಮುಖಂಡರಾದ ಆನೇಕಲ್ ಶಂಕರ್, ದ್ಯಾವಸಂದ್ರ ಸಂಪಂಗಿ, ಸಿ.ಕೃಷ್ಣ, ಮರಿಯಪ್ಪ, ಯಲ್ಲಪ್ಪ, ವಸಂತ್ ಹಾಜರಿದ್ದರು.