ಸೋಮವಾರಪೇಟೆ: ಇಂದಿರಾಗಾಂಧಿ ಅಭಿಮಾನಿಗಳ ಸಂಘ ಹಾಗೂ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮುಕ್ತ ವಾಲಿಬಾಲ್ ಟೂರ್ನಿಯಲ್ಲಿ ಹೊಸತೋಟದ ರೈಸಿಂಗ್ ಸ್ಟಾರ್ ತಂಡ ಪ್ರಶಸ್ತಿ ಪಡೆಯಿತು.
ಭಾನುವಾರ ಇಲ್ಲಿನ ಆರ್ಎಂಸಿ ಮೈದಾನದಲ್ಲಿ ಜರುಗಿದ ಫೈನಲ್ ಪಂದ್ಯದಲ್ಲಿ ಹೊಸತೋಟದ ರೈಸಿಂಗ್ ಸ್ಟಾರ್ ತಂಡ ಗೆದ್ದರೆ, ಸಿದ್ಧಲಿಂಗಪುರದ ತಂಡ ಸೋಲನುಭವಿಸಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಸೆಮಿಫೈನಲ್ನಲ್ಲಿ ಪರಾಭವಗೊಂಡ ತಣ್ಣೀರುಹಳ್ಳ ತಂಡವು ಹಾನಗಲ್ಲು ಕಾನ್ವೆಂಟ್ಬಾಣೆ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆಯಿತು. ಟೂರ್ನಿಯಲ್ಲಿ ಜಿಲ್ಲೆಯ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.
ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಇದೇ ಪ್ರಥಮ ಬಾರಿಗೆ ಜಿಲ್ಲಾಮಟ್ಟದ ವಾಲಿಬಾಲ್ ಟೂರ್ನಿಯನ್ನು ಸಂಘ ಆಯೋಜಿಸಿತ್ತು.
ರಾಜ್ಯಮಟ್ಟದ ಕಬಡ್ಡಿ ಫೈನಲ್ಗೆ ಅರುಣ್ ಫ್ರೆಂಡ್ಸ್ ಹಾಗೂ ಜೆಬಿಎಸ್ಸಿ ತಂಡ ಪ್ರವೇಶ ಮಾಡಿದವು. ಆರ್ಎಂಸಿ ಮೈದಾನದಲ್ಲಿ ನಡೆಯುತ್ತಿರುವ 30ನೇ ವರ್ಷದ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯ ಫೈನಲ್ಗೆ ಸೋಮವಾರಪೇಟೆ ಅರುಣ್ ಫ್ರೆಂಡ್ಸ್ ಎ ಹಾಗೂ ಕುಶಾಲನಗರದ ಜೆಬಿಎಸ್ಸಿ ಸಲಾಂ ತಂಡ ಪ್ರವೇಶಿಸಿದವು.
ಭಾನುವಾರ ನಡೆದ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಸೋಮವಾರಪೇಟೆಯ ಅರುಣ್ ಫ್ರೆಂಡ್ಸ್ ‘ಎ’ ತಂಡವು ಇಂದಿರಾಗಾಂಧಿ ಅಭಿಮಾನಿಗಳ ತಂಡವನ್ನು ಸೋಲಿಸುವುದರೊಂದಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಎರಡನೇ ಪಂದ್ಯಾಟದಲ್ಲಿ ಅರುಣ್ ಫ್ರೆಂಡ್ಸ್ ‘ಬಿ’ ತಂಡವನ್ನು ಕುಶಾಲನಗರದ ಜೆಬಿಎಸ್ಸಿ ಸಲಾಂ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಎರಡನೇ ತಂಡವಾಗಿ ಪ್ರವೇಶಿಸಿತು.
ಅರುಣ್ ಫ್ರೆಂಡ್ಸ್ ‘ಬಿ’ ತಂಡವು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ತಂಡವನ್ನು ಮಣಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಕಬಡ್ಡಿ ಪಂದ್ಯಾಟಕ್ಕೆ ಒಟ್ಟು 14 ತಂಡಗಳು ಪಾಲ್ಗೊಂಡಿದ್ದವು.
ಟೂರ್ನಿಯಲ್ಲಿ ತೀರ್ಪುಗಾರರಾಗಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ನ ಆನಂದ, ಪ್ರವೀಣ, ಬಿದ್ದಪ್ಪ ಹಾಗೂ ಅಮೃತ್ ಕಾರ್ಯನಿರ್ವಹಿಸಿದರು.