ಸೋಮವಾರಪೇಟೆ: ಮೆದುಳು ಜ್ವರದಿಂದ ಬಳಲುತ್ತಿರುವ ಕೂಲಿಕಾರ್ಮಿಕ ಕುಟುಂಬದ ಮಹಿಳೆಯ ಚಿಕಿತ್ಸೆಗಾಗಿ ನೆರವು ನೀಡುವಂತೆ ಆಕೆಯ ಪತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಮೀಪದ ಕಿಬ್ಬೆಟ್ಟ ಗ್ರಾಮದ ಸುರೇಶ್ ಅವರ ಪತ್ನಿ ಮೇನಕಾ ಎಂಬುವವರೇ ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದು, ಪ್ರಸ್ತುತ ಮಂಗಳೂರಿನ ಎ.ಜೆ.ಶೆಟ್ಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸೆಂಬರ್ 11ರಂದು ಜ್ವರ ಹಾಗೂ ಸಣ್ಣ ಪ್ರಮಾಣದ ತಲೆನೋವು ಕಾಣಿಸಿಕೊಂಡಿದ್ದು, ನಂತರ ಪಾರ್ಶ್ವವಾಯುನಿಂದ ಬಳಲುತ್ತಿದ್ದಾರೆ.
ಮಡಿಕೇರಿಯ ಜಿಲ್ಲಾಸ್ಪತ್ರೆ, ಮೈಸೂರಿನ ಕೆ.ಆರ್. ಆಸ್ಪತ್ರೆ ಹಾಗೂ ಜೆಎಸ್ಎಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದ್ದು, ಇದೀಗ ಮಂಗಳೂರಿಗೆ ಸಾಗಿಸಿದ್ದಾರೆ. ಮೇನಕಾ ಅವರ ಮೆದುಳಿಗೆ ಸಂಪರ್ಕ ಕಲ್ಪಿಸುವ ನರದಲ್ಲಿ ರಕ್ತ ಸಂಚಾರಕ್ಕೆ ತಡೆಯುಂಟಾಗಿದೆ. ಸಣ್ಣ ಪ್ರಮಾಣದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿದೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ತಗುಲುವುದು ಎಂದು ವೈದ್ಯರು ತಿಳಿಸಿದ್ದಾರೆ.
ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಗೊಳಗಾಗಿದ್ದು ಈಗಾಗಲೇ ₹ 2.5 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಕೂಲಿ ಕೆಲಸ ಮಾಡಿಜೀವನ ಸಾಗಿಸುತ್ತಿರುವ ಕುಟುಂಬ ಇದೀಗ ಬೀದಿಗೆ ಬರುವಂತಾಗಿದೆ.
ಚಿಕಿತ್ಸೆಗೆ ಸಹೃದಯಿ ದಾನಿಗಳ ನೆರವು ಅಗತ್ಯವಾಗಿದೆ. ಧನಸಹಾಯ ನೀಡಲಿಚ್ಛಿಸುವವರು ಸೋಮವಾರಪೇಟೆಯ ತ್ಯಾಗರಾಜ ರಸ್ತೆಯ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯ (ಹೆಸರು: ಸುರೇಶ್ ಕೆ.ಆರ್.) ಖಾತೆ ಸಂಖ್ಯೆ 20027206208ಗೆ (ಐಎಫ್ಎಸ್ಸಿ ಕೋಡ್: ಎಸ್ಬಿಐಎನ್ 0011261) ಸಲ್ಲಿಸಬಹುದಾಗಿದೆ. ಮಾಹಿತಿಗೆ ಸುರೇಶ್ (ಮೊ: 9663649848) ಅವರನ್ನು ಸಂಪರ್ಕಿಸಬಹುದು.