ರೆಡ್ಗಾರ್ಡ್ಸ್ ತಂಡದ ಹದ್ದು ಮೀರಿದ ವರ್ತನೆ ತಡೆಯಲು ಚೌ ಸಲಹೆಗೆ ಮಾವೊ ಒಪ್ಪಿಗೆ
ಟೋಕಿಯೊ, ಜ. 31– ಮಾವೊ ಅವರು ಉದ್ದೇಶಿಸಿದ ಸಾಂಸ್ಕೃತಿಕ ಕ್ರಾಂತಿ ಚಳವಳಿಯ ಪ್ರಮುಖ ವಿಧಾನಗಳಲ್ಲೊಂದಾದ ರೆಡ್ಗಾರ್ಡ್ಸ್ ತಂಡದ ಹದ್ದು ಮೀರಿದ ವರ್ತನೆಗಳನ್ನು ಕೊನೆಗಾಣಿಸುವಂತೆ ಚೀನದ ಸೇನೆಗೆ ಕಡ್ಡಾಯ ಸೂಚನೆ ನೀಡಬೇಕೆಂದು ಚೀನದ ಪ್ರಧಾನಿ ಚೌಎನ್ ಲಾಯ್ ಮತ್ತು ಸಾಂಸ್ಕೃತಿಕ ಕ್ರಾಂತಿ ಸಮಿತಿಯ ಅಧ್ಯಕ್ಷ ಚೆನ್ಪೊಟ ಅವರು ಮೇಲಿಂದ ಮೇಲೆ ಮಾಡಿದ ಒತ್ತಾಯಕ್ಕೆ ಅಧ್ಯಕ್ಷ ಮಾವೊ ಅವರು ಕೊನೆಗೂ ಮಣಿದಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಮಿಲಿಟರಿ ಸಮಿತಿಯು ಇತ್ತೀಚೆಗೆ ಗೋಡೆಗಳ ಮೇಲೆ ಪ್ರದರ್ಶಿಸಿರುವ ಸಮಾಚಾರ ಭಿತ್ತಿಗಳಲ್ಲಿ ರೆಡ್ಗಾರ್ಡ್ಸ್ ತಂಡಗಳು ಸ್ವಚ್ಛಂದವಾಗಿ ನಡೆಸುತ್ತಿರುವ ದಸ್ತಗಿರಿ, ಶೋಧನೆಗಳು ಮತ್ತು ಬಂಧಿತರ ಅವಹೇಳನ ಕೃತ್ಯಗಳನ್ನು ನಿಲ್ಲಿಸಬೇಕೆಂದು ಸೂಚನೆ ನೀಡಲಾಗಿದೆಯೆಂದು ವರದಿಗಳು ತಿಳಿಸಿವೆ.
ಇತಿಹಾಸ, ಆಡಳಿತ, ಸಂಸ್ಕೃತಿ ದೃಷ್ಟಿಯಿಂದ ತಾಳವಾಡಿ ಫಿರ್ಕಾ ಮೈಸೂರಿಗೆ ಸೇರಲಿ: ರಾಚಯ್ಯ
ತಾಳವಾಡಿ, ಜ. 30– ‘ಶೇಕಡಾ 98 ರಷ್ಟು ಕನ್ನಡಿಗರಿರುವ ಈ ತಾಳವಾಡಿ ಫಿರ್ಕಾ ಮೈಸೂರು ರಾಜ್ಯಕ್ಕೆ ಸೇರುವುದು ಅತ್ಯಗತ್ಯ’ ಎಂದು ಮೈಸೂರು ರಾಜ್ಯದ ಅರಣ್ಯ ಮಂತ್ರಿ ಶ್ರೀ ಬಿ. ರಾಚಯ್ಯ ಅವರು ಭಾನುವಾರ ಇಲ್ಲಿ ‘ತಾಳವಾಡಿ ಫಿರ್ಕಾ ಕನ್ನಡಿಗರ ಸಮ್ಮೇಳನ’ ಉದ್ಘಾಟಿಸುತ್ತಾ ಹೇಳಿದರು.
ಮೈಸೂರು ವಿಧಾನಸಭಾ ಸದಸ್ಯ ಶ್ರೀ ಎಂ.ಸಿ. ಬಸಪ್ಪ ಅವರು ತಾಳವಾಡಿ ಫಿರ್ಕಾ ಕರ್ನಾಟಕ ಸಂಘದವರು ಏರ್ಪಡಿಸಿದ್ದ ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.