ಹೊನ್ನಾವರ: ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಸಂಘಟನೆಯಲ್ಲಿ ಗುಣವಂತೆಯ ಯಕ್ಷಾಂಗಣದಲ್ಲಿ 5 ದಿನಗಳ ಕಾಲ ನಡೆದು ವಿವಿಧ ಕಲಾಪ್ರಕಾರಗಳಿಗೆ ವೇದಿಕೆ ಒದಗಿಸಿ ಪ್ರೇಕ್ಷಕರನ್ನು ರಂಜಿಸಿದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸೋಮವಾರ ರಾತ್ರಿ ಸಂಪನ್ನಗೊಂಡಿತು.
ಸಮಾರೋಪ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಬಾಳಗಾರ ಮಠದ ರಘೂಭೂಷಣ ಸ್ವಾಮೀಜಿ ಮಾತನಾಡಿ, ಯಕ್ಷಗಾನ ತನ್ನ ಸಾಂಪ್ರ ದಾಯಿಕ ಚೌಕಟ್ಟಿನಿಂದ ಹೊರ ಬರುತ್ತಿರುವ ಕಾರಣಕ್ಕೆ ಈ ಕಲೆ ಪ್ರಬುದ್ಧ ಪ್ರೇಕ್ಷಕರನ್ನು ಕಳೆದುಕೊಳ್ಳುವ ಆತಂಕ ಎದುರಾಗಿದ್ದು ಯಕ್ಷಗಾನದ ಮೂಲತತ್ವ ಉಳಿಯುವ ಕಾರ್ಯವಾಗಬೇಕಿದೆ’ ಎಂದು ಹೇಳಿದರು.
‘ಕಲಾವಿದರ ಜೊತೆ ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರಿಗೂ ಈ ಕಲೆಯ ಕುರಿತಾದ ಸೂಕ್ಷ್ಮತೆಯ ಅರಿವು ಅಗತ್ಯ’ ಎಂದು ಸಮಾರೋಪ ನುಡಿಗಳನ್ನಾಡಿದ ಪತ್ರಕರ್ತ ಬಿ.ಗಣಪತಿ ಹೇಳಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯೆ ಡಾ.ವಿಜಯಾ ನಳಿನಿ ರಮೇಶ ಮಾತನಾಡಿ, ಯಕ್ಷಾಂ ಗಣದಲ್ಲಿ ನಡೆದ ಕಾರ್ಯಕ್ರಮಗಳ ಸಮರ್ಪಕ ದಾಖಲಾತಿ ನಡೆಯಲಿ’ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಆರ್ಥಿಕ ಸಹಾಯ ನೀಡುವ ಔದಾರ್ಯತೆ ಜನರಿಗೆ ಬೇಕು’ ಎಂದು ಹೇಳಿದರು.
ಸಿದ್ದಾಪುರದ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿದರು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ–ಯಕ್ಷಗಾನ ಕಲಾವಿದ ಗೋವಿಂದ ಶೇರಿಗಾರ ಮಾರ್ಗೋಳಿ ಅವರಿಗೆ ಪ್ರಸಿದ್ಧ ಯಕ್ಷಗಾನ ಸ್ತ್ರೀವೇಷ ಧಾರಿ ಗಜಾನನ ಹೆಗಡೆ ಹೆಸರಲ್ಲಿ ಪ್ರತಿ ಷ್ಠಾಪಿಸಲಾದ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ₹ 10 ಸಾವಿರ ನಗದು ಹಾಗೂ ಇತರ ಗೌರವಗಳನ್ನು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿದ ಗೋವಿಂದ ಶೇರಿಗಾರ ಮಾತನಾಡಿ,ಕೆರೆಮನೆ ಕುಟುಂಬ ಹಾಗೂ ತಮ್ಮ ನಡುವಿನ ಒಡನಾಟ ಸ್ಮರಿಸಿ ಪ್ರಶಸ್ತಿಗೆ ಕೃತಜ್ಞತೆ ಸಲ್ಲಿಸಿದರು. ಕೆ.ಎಂ.ಉಡುಪ ಮಂದಾರ್ತಿ ಹಾಗೂ ಡಾ. ಡಿ.ಕೆ.ಚೌಟ, ಬೆಂಗಳೂರು ಇವರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಎಸ್. ಜಿ. ಭಟ್ ಮತ್ತು ಆರ್. ಟಿ. ಹೆಬ್ಬಾರ ನಿರೂಪಿಸಿದರು. ಕೆರೆಮನೆ ಮೇಳದ ನಿರ್ದೇಶಕ ಶಿವಾನಂದ ಹೆಗಡೆ ವಂದಿಸಿದರು.