ದೇವನಹಳ್ಳಿ: ‘ದೇಶದ ಇತಿಹಾಸದಲ್ಲಿ ಸಾವಿರಾರು ವರ್ಷ ಆಳ್ವಿಕೆ ನಡೆಸಿದ ಅನೇಕ ರಾಜ ಮನೆತನಗಳು ಅಳಿದು ಹೋದರೂ ಕಳೆದ ಒಂದೂ ಕಾಲು ಶತಮಾನದ ನಂತರ ದೇಶದಲ್ಲಿ ಬದಲಾವಣೆಗೆ ಮುನ್ನುಡಿ ಪರ್ವವಾಯಿತು’ ಎಂದು ಸಾಮಾಜಿಕ ಚಿಂತಕ ರಾಜೇಶ್ ಪದ್ಮಾರ್ ತಿಳಿಸಿದರು.
ದೇವನಹಳ್ಳಿ ಬಸವೇಶ್ವರ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಸಾಹಿತಿ ಡಿವಿಜಿ ಯುವಕೂಟ ವತಿಯಿಂದ ನಡೆದ ‘ಬದಲಾವಣೆಯತ್ತ ಭಾರತ’ ವಿಷಯ ಕುರಿತು ನಡೆದ ಸದ್ಭಾವನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬದಲಾವಣೆ ಪ್ರಕೃತಿಯಲ್ಲಿನ ಸಹಜ ಪ್ರಕ್ರಿಯೆ, ಜಗತ್ತು ಎನ್ನುವುದು ಒಂದು ನಿರಂತರ ಪಯಣ ಎಂದರು.
ದೇಶದಲ್ಲಿ ಒಗ್ಗಟ್ಟಿನ ಕೊರತೆಯ ಜತೆಗೆ ಜಾತಿ ವ್ಯವಸ್ಥೆ ನೆಪದಿಂದ ಅನೇಕ ಯುವಶಕ್ತಿಯನ್ನು ಹೊರಗಿಟ್ಟ ಪರಿಣಾಮ ಬ್ರಿಟಿಷರ ದಾಸ್ಯದಿಂದ ಹೊರ ಬರಲು ವಿಳಂಬವಾಯಿತು, ನಾವು ನಮ್ಮವರು ಎಂಬ ಸದ್ಭಾವನೆ ಬಗ್ಗೆ ನಿರ್ಲಕ್ಷ್ಯವಹಿಸಿದ್ದು ಒಂದು ಪ್ರಮುಖ ಕಾರಣ ಎಂದರು.
ತಾಲ್ಲೂಕು ಕಸಾಪ ಉಪಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿ, 2014ರ ನಂತರ ಭಾರತ ದೇಶ ಬೃಹತ್ ಬದಲಾವಣೆಯ ಮೈಲಿಗಲ್ಲು ಸಾಧಿಸುತ್ತಿದೆ ಎಂಬುದಕ್ಕೆ ವಿಶ್ವಮಟ್ಟದ ಪ್ರಗತಿದಾಯಕ ದೇಶದ ಐದು ರಾಷ್ಟ್ರಗಳಲ್ಲಿ ಭಾರತ ಒಂದು ಎಂಬುದನ್ನು ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.
ಜಿ.ಪಂ. ಉಪಾಧ್ಯಕ್ಷೆ ಅನಂತ ಕುಮಾರಿ, ಬಿಜೆಪಿ ರಾಷ್ಟ್ರೀಯ ಪರಿಷದ್ ಸದಸ್ಯ ಗುರುಸ್ವಾಮಿ, ಮಿತ್ರಕೂಟ ಸದಸ್ಯ ಶಿವಪ್ರಸಾದ್, ಗಿರೀಶ್, ರಘು, ಮನೋಜ್ ಗೌಡ, ಅನಿಲ್ ಕುಮಾರ್, ಹರ್ಶಿಗೌಡ, ದಿನ್ನೂರು ಮಂಜುನಾಥ್, ಲೋಹಿತ್, ಕೇಶವ, ಸುನಿಲ್ ಕುಮಾರ್, ಮಧು, ಮಂಜೇಶ್, ಅಂಬರೀಶ್ ಉಪಸ್ಥಿತರಿದ್ದರು.