ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಅಡ್ಡಗಟ್ಟಿದ ಸಿಂಹಗಳು: ಆತಂಕ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಘಟನೆ
Last Updated 1 ಫೆಬ್ರುವರಿ 2017, 12:04 IST
ಅಕ್ಷರ ಗಾತ್ರ
ADVERTISEMENT

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಿಂಹ ಸಫಾರಿಗೆ ವಿಐಪಿ ಹಾಗೂ ವಿವಿಐಪಿ ವಾಹನಗಳಲ್ಲಿ ತೆರಳಿದ ಪ್ರವಾಸಿಗರ ವಾಹನವನ್ನು ಸಿಂಹಧಾಮದಲ್ಲಿನ ಎರಡು ಸಿಂಹಗಳು ಅಡ್ಡಗಟ್ಟಿ ವಾಹನಗಳ ಮೇಲೆ ಏರಿದ್ದರಿಂದ ಪ್ರವಾಸಿಗರು ಪ್ರಾಣವನ್ನು ಕೈಯಲ್ಲಿ ಇಟ್ಟುಕೊಂಡು ಪರದಾಡುವಂತಹ ಪರಿಸ್ಥಿತಿ ಇತ್ತೀಚೆಗೆ ನಿರ್ಮಾಣವಾಗಿತ್ತು.

ಸಫಾರಿಗೆ ತೆರಳಲು ಬಸ್‌ನ ವ್ಯವಸ್ಥೆಯಿದೆ. ಬಸ್‌ನ ಎಲ್ಲಾ ಭಾಗಗಳಲ್ಲೂ ಭದ್ರವಾದ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಬಯಲಿನಲ್ಲಿರುವ ಹುಲಿ, ಸಿಂಹಗಳನ್ನು ವೀಕ್ಷಿಸಿ ಸಂತಸ ಪಡುವ ಹಂಬಲದಿಂದ ಪ್ರವಾಸಿಗರು ಅವುಗಳಲ್ಲಿ ತೆರಳುತ್ತಾರೆ. ಇದಲ್ಲದೆ ಅತಿ ಗಣ್ಯರು (ವಿಐಪಿ) ಹಾಗೂ ಅತಿ ಹೆಚ್ಚು ಗಣ್ಯರಿಗೆ (ವಿವಿಐಪಿ) ಎಂಟು ಇನೋವಾ ಕಾರುಗಳೂ ಇವೆ. ಇಂಥ ಕಾರಿನಲ್ಲಿ ಪ್ರವಾಸಿಗರು ಸಿಂಹಧಾಮಕ್ಕೆ ತೆರಳಿದ್ದರು. ಆಗ ಹೆಣ್ಣು ಸಿಂಹವೊಂದು ಕಾರನ್ನು ಅಡ್ಡಗಟ್ಟಿ ಗರ್ಜಿಸಿತು. ಹಿಂದೆಯೇ ಇದ್ದ ಗಂಡು ಸಿಂಹ ಕಾರಿನ ಮೇಲೆ ನೆಗೆಯಿತು. ಗಾಜನ್ನು ಒಡೆಯಲು ಮುಂದಾಯಿತು. ಕಾರಿನಲ್ಲಿದ್ದರೂ ಈ ಸಿಂಹಗಳ ಘರ್ಜನೆಗೆ ಬೆವತು ಹೋದೆವು ಎಂದು ಪ್ರವಾಸಕ್ಕಾಗಿ ತೆರಳಿದವರು ಮಾಹಿತಿ ನೀಡಿದ್ದಾರೆ.

ಸಿಂಹಗಳ ಈ ರೀತಿಯ ವರ್ತನೆಯನ್ನು ಹಿಂದಿನ ಮತ್ತೊಂದು ವಾಹನದಲ್ಲಿದ್ದ ಪ್ರಯಾಣಿಕರು ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿದರು. ಅಲ್ಲದೆ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳನ್ನು ನೋಡಿದರೆ ಸಫಾರಿಯಲ್ಲಿನ ರಕ್ಷಣಾ ವ್ಯವಸ್ಥೆಯ ಬಗ್ಗೆ ಆತಂಕ ಉಂಟಾಗುತ್ತದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಯಂತೆ ಸಫಾರಿಗೆ ತೆರಳುವ ಎಲ್ಲಾ ವಾಹನಗಳಿಗೂ ಕಬ್ಬಿಣದ ಜಾಲರಿಗಳನ್ನು ಅಳವಡಿಸುವುದು ಕಡ್ಡಾಯ. ಆದರೆ ಈ ಕಾರುಗಳಿಗೆ ಸಂಪೂರ್ಣವಾಗಿ ಕಬ್ಬಿಣದ ಜಾಲರಿಗಳನ್ನು ಅಳವಡಿಸದೇ ಸಫಾರಿಯಲ್ಲಿ ಬಳಸುತ್ತಿರುವುದು ಆತಂಕ ಉಂಟಾಗಿದೆ.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರವಾಸಿಗರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಣ್ಣ ವಾಹನಗಳ ಸಫಾರಿ ರದ್ದು?
ಸಫಾರಿಯಲ್ಲಿ ಈ ರೀತಿಯ ಘಟನೆಗಳು ಎರಡು ಬಾರಿ ವರದಿಯಾಗಿವೆ. ಪ್ರವಾಸಿಗರ ರಕ್ಷಣೆಯ ದೃಷ್ಟಿಯಿಂದ ಸಣ್ಣ ವಾಹನಗಳ (ಇನ್ನೊವಾ ಕಾರು) ಸಂಚಾರವನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸಂತೋಷ್ ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಸಣ್ಣ ವಾಹನಗಳ ಎತ್ತರ ಕಡಿಮೆ ಇರುವುದರಿಂದ ಪ್ರಾಣಿಗಳಿಗೆ ನೆಗೆಯಲು ಸುಲಭ. ಇದರಿಂದಾಗಿ ಅಪಾಯಗಳು ಸಂಭವಿಸುತ್ತಿದೆ. ಹಾಗಾಗಿ ಬಸ್‌ಗಳಿಗೆ ಆದ್ಯತೆ ನೀಡಲಾಗುವುದು. ಸಣ್ಣ ವಾಹನಗಳಲ್ಲಿ ಹೆಚ್ಚು ಸುತ್ತುವುದರಿಂದ ಪ್ರಾಣಿಗಳಿಗೂ ಕಿರಿಕಿರಿ ಉಂಟಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT