ವಿಜಯಪುರ: ಕ್ಷಯ ರೋಗ ಸಂಪೂರ್ಣ ವಾಗಿ ಗುಣಪಡಿಸಬಹುದಾದ ರೋಗ ಎಂದು ಡಾ.ಪ್ರಕಾಶ ಬಿರಾದಾರ ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಎಲ್ಡಿಇ ವೈದ್ಯಕೀಯ ಮಹಾ ವಿದ್ಯಾಲಯದ ವತಿಯಿಂದ ರಾಣಿ ಬಗೀಚ ಸ್ಲಂನಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರದಲ್ಲಿ ಕ್ಷಯರೋಗದ ಕುರಿತು ಉಪನ್ಯಾಸ ನೀಡಿದ ಅವರು, ಸೂಕ್ತವಾದ ಚಿಕಿತ್ಸೆ ಮೂಲಕ ಕ್ಷಯರೋಗವನ್ನು ದೂರ ಮಾಡಬಹುದು ಎಂದರು.
ರೋಗ ಗುಣಪಡಿಸಲು ಸರ್ಕಾರ ಉಚಿತವಾಗಿ ಔಷಧಿ ವಿತರಿಸುತ್ತಿದೆ. ಆದರೆ ಕ್ಷಯ ರೋಗಿಗಳು ವೈದ್ಯರ ಸಲಹೆ ಯಂತೆ ಆರು ತಿಂಗಳು ನಿರಂತರವಾಗಿ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ರೋಗ ದಿಂದ ಸಂಪೂರ್ಣವಾಗಿ ಗುಣಮುಖ ರಾಗಬಹುದಾಗಿದೆ ಎಂದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಫಾ.ಜೆರಾಲ್ಡ್ ಡಿಸೋಜ ಮಾತನಾಡಿ ಪ್ರತಿಯೊಬ್ಬರು ಆರೋಗ್ಯ ಕಾಳಜಿ ಹೊಂದಿದ್ದಲ್ಲಿ, ನಮ್ಮ ಸಮಾಜ ಆರೋಗ್ಯವಾಗಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟ ಬಹುದಾಗಿದೆ. ರೋಗ ಬಂದಾಗ ಚಿಂತಿಸದೆ ರೋಗ ಬಾರದಂತೆ ತಡೆಗಟ್ಟುವುದು ಅತ್ಯಂತ ಮುಖ್ಯ. ಮುಂಜಾಗೃತಾ ಕ್ರಮಗಳು ರೋಗದಿಂದ ಪಾರು ಮಾಡುತ್ತವೆ ಎಂದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಸಂಯೋಜಕ ದಸ್ತಗೀರ ಉಕ್ಕಲಿ, ವಿಕ್ರಮ ಗಾಯಕವಾಡ ಮಾತನಾಡಿದರು. 20 ಜನ ವೈದ್ಯಕೀಯ ತಂಡ ಚಿಕಿತ್ಸೆ ಹಾಗೂ ಸಲಹೆ ನೀಡಿದರು. ಡಾ.ಸುಭಾಸಚಂದ್ರ, ಆಶಾ ಗಾಯಕವಾಡ, ಶಬ್ಬೀರ, ಜಯಶ್ರೀ ಚಲವಾದಿ, ಸುನಂದಾ ನಾಯಕ, ಸುನೀತಾ ಮೋರೆ ಉಪಸ್ಥಿತರಿದ್ದರು.