ರಾಣೆಬೆನ್ನೂರು: ‘ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಮಾಡುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂ ಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮದ್ಯದ ಅಂಗಡಿಯ ಎದುರು ವಿವಿಧ ಮಹಿಳಾ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.
‘ಐತಿಹಾಸಿಕ ತಾಣ ಹಾಗೂ ಧಾರ್ಮಿಕ ಹಿನ್ನೆಲೆ ಹೊಂದಿರುವ ಗ್ರಾಮಕ್ಕೆ ನಿತ್ಯ ನೂರಾರು ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಮದ್ಯ ವ್ಯಸನಿಗಳ ಕಿರುಚಾಟ, ಅಸಭ್ಯ ವರ್ತನೆಗಳಿಂದ ಇಲ್ಲಿ ಬರುವವರಿಗೆ ತೊಂದರೆ ಉಂಟಾಗುತ್ತದೆ’ ಎಂದು ಗ್ರಾಮಸ್ಥರು ದೂರಿದರು.
‘ಕೂಲಿ ಕಾರ್ಮಿಕರ ಕುಟುಂಬಗಳು ಕುಡಿತಕ್ಕೆ ದಾಸರಾಗಿ ಆದಾಯ ಕಳೆದು ಕೊಳ್ಳುತ್ತಿದ್ದಾರೆ. ಮನೆಗಳಲ್ಲೂ ನಿತ್ಯ ಕಿರುಕುಳ ಹೆಚ್ಚುತ್ತಿದೆ’ ಎಂದು ಮಹಿಳೆಯರು ಆರೋಪಿಸಿದರು.
‘ಸಣ್ಣ ಹುಡುಗರಿಂದ ಹಿಡಿದು ಯುವಕರು ಮದ್ಯದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಶಾಲಾ ಮಕ್ಕಳ ಭವಿಷ್ಯವೂ ಅಧೋಗತಿಗೆ ತಳ್ಳಿದಂತಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟ ತಡೆಯಬೇಕು. ಇಲ್ಲದಿದ್ದರೆ ಮದ್ಯ ಅಂಗಡಿಗಳನ್ನು ನಾಶಪಡಿಸಲಾಗುವುದು’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
‘ಗ್ರಾಮದಲ್ಲಿ ಯಾರೂ ಮದ್ಯ ಮಾರಾಟ ಮಾಡಬಾರದು. ಕಣ್ಣು ತಪ್ಪಿಸಿ ಮದ್ಯ ಮಾರಾಟ ಮಾಡಿದರೆ ಮಹಿಳೆ ಯರೇ ಹಿಡಿದು ಪೊಲೀಸರ ವಶಕ್ಕೆ ನೀಡುತ್ತಾರೆ’ ಎಂದು ಎಚ್ಚರಿಸಿ ಪ್ರತಭಟನೆ ಹಿಂಪಡೆದರು.
ಗೀತವ್ವ ಭಜಂತ್ರಿ, ಶೇಖವ್ವ ಬಸಾ ಪುರ, ಹೊನ್ನಮ್ಮ ಹೊನ್ನತ್ತಿ, ಆಲದವ್ವ ದಳವಾಯಿ,ನೀಲವ್ವ ಹೊನ್ನತ್ತಿ, ರೇಣು ಕವ್ವ ತಹಶೀಲ್ದಾರ, ಮಾಬೂಬಿ ಇಟಗಿ, ಗೌರಮ್ಮ ಭಜಂತ್ರಿ ಮತ್ತಿತರರಿದ್ದರು.