ಬನಹಟ್ಟಿ: ಸಮೀಪದ ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಮಹಾ ವಿದ್ಯಾಲಯದ ಸೂರ್ಯಭವನದ ಸಭಾಭವನದಲ್ಲಿ ಕಥಕ್ ನೃತ್ಯ ಶೈಲಿ ನೋಡುಗರ ಗಮನ ಸೆಳೆಯಿತು.
ನೃತ್ಯ ಮೂರು ಗಂಟೆಗಳ ಕಾಲ ಸತತವಾಗಿ ನಡೆಯಿತು. ಪುಣೆಯ ಕಥಕ್ ನೃತ್ಯಗಾರ್ತಿ ರುಜುತಾ ಸೋಮನ ಮತ್ತು ಸಂಗಡಿಗರು ನೃತ್ಯ ಪ್ರದರ್ಶಿಸಿದರು.
ಸಿಂಧೂರ ವಂದನಾ ಗಣೇಶ ಸ್ತೋತ್ರದೊಂದಿಗೆ ಪ್ರಾರಂಭವಾದ ನೃತ್ಯ, ನೀಲ ತಾಲ, ಶೇಷ ಮಹೇಶ, ಶಿವನ ಕುರಿತಾದ ದಕ್ಷ ಯಜ್ಞ, ಧಿಮ ಧಿಮ ಡಮರು ಬಾಜೆ, ಬಣ್ಣಗಳ ಹಬ್ಬ ಹೋರಿ ಕುರಿತು ವಿಶೇಷ ಕಥಕ್ ನೃತ್ಯ ಸಂಯೋಜನೆಯನ್ನು ನೃತ್ಯಗಾರ್ತಿಯರು ಪ್ರದರ್ಶನ ಮಾಡಿದರು. ರುಜುತಾ ಸೋಮನ ಅವರ ಕಥಕ್ ನೃತ್ಯದ ಶೈಲಿಯ ಹಾವ ಭಾವಗಳು ನೋಡುಗರನ್ನು ಆಕರ್ಷಿಸಿದವು. ಕೃಷ್ಣನ ಬಾಲಲೀಲೆಗಳು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಇಂತಹ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ನಡೆಸಿದ್ದರಿಂದ ಕಥಕ ನೃತ್ಯ ಪ್ರೇಕ್ಷಕರನ್ನು ಮಂತ್ರಮಗ್ದರನ್ನಾಗಿಸಿತ್ತು.
ಇದಕ್ಕೂ ಮುಂಚೆ ಸಮಾರಂಭವನ್ನು ಮಾಜಿ ಶಾಸಕ ಸಿದ್ದು ಸವದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ ಬಸವರಾಜ ಕೊಣ್ಣೂರ, ಭಾರತೀಯ ಸಂಪ್ರದಾಯದಲ್ಲಿ ಕಲೆ, ಸಂಗೀತ ಮತ್ತು ನೃತ್ಯಕ್ಕೆ ವಿಶಿಷ್ಟ ಮಹತ್ವ ಇದೆ. ನೃತ್ಯದ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬಹುದು. ಇದು ದೈವಿಕ, ಆಧ್ಯಾತ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಶಕ್ತಿಯುತವಾದುದು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಸಾಹಿತಿಗಳಾದ ಜಯವಂತ ಕಾಡದೇವರ, ಜಿ.ಎಸ್.ವಡಗಾವಿ, ಡಾ. ಶಾರದಾ ಮುಳ್ಳೂರ, ವಿಜಯ ಹೂಗಾರ, ಬಿ.ಆರ್. ಪೊಲೀಸ್ಪಾಟೀಲ, ಸಿದ್ರಾಮಪ್ಪ ಸವದತ್ತಿ, ಶಂಕರ ಜಾಲಿ ಗಿಡದ, ಎನ್.ಎಸ್.ದೇವರವರ, ಡಾ. ಉಮೇಶ ಮಹಾಬಳಶೆಟ್ಟಿ, ಡಾ.ಎಸ್.ಬಿ. ಮಾಟೋಳಿ, ಎಂ.ಬಿ. ನಾಶಿ, ಡಾ. ಯತೀಶ ಪೂಜಾರ, ಡಾ. ಎಸ್. ಎಸ್. ಖಾನಾಪೂರ, ಮಲ್ಲಿನಾಥ ಕಕಮರಿ, ಶ್ರೀಶೈಲ ಉಳ್ಳಾಗಡ್ಡಿ, ಗೋಪಾಲ ಭಟ್ಟಡ, ಬಸವರಾಜ ತೆಗ್ಗಿ, ಶಿವಜಾತ ಉಮದಿ, ವಿಜಯ ಕಟಗಿ, ಬಿ. ಪಿ. ಪುಟಾಣಿ, ಶಂಕರ ಬಟಕುರ್ಕಿ ಇದ್ದರು.