ಆನವಟ್ಟಿ: ರಾಜ್ಯ ಮತ್ತು ಕೇಂದ್ರ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿವೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ದಲ್ಲಿ ಪ್ರಾದೇಶಿಕ ಪಕ್ಷಗಳು ಜನರ ವಿಶ್ವಾಸ ಗಳಿಸಿವೆ. ಬರುವ ಚುನಾವಣೆಯಲ್ಲಿ ರಾಜ್ಯದ ಜನ ಪ್ರಾದೇಶಿಕ ಪಕ್ಷ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಗಳವಾರ ಕುಬಟೂರು ಗ್ರಾಮದ ಬಂಗಾರ ನಿವಾಸದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
‘ಉತ್ತರ ಪ್ರದೇಶದಲ್ಲಿ ಗೆದ್ದರೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಸುಳ್ಳು ಆಶ್ವಾಸನೆ ನೀಡುತ್ತಿದೆ. ದೇಶದಲ್ಲೇ ರೈತರು ಬರಗಾಲದಿಂದ ತತ್ತರಿಸಿರುವಾಗ ಉತ್ತರ ಪ್ರದೇಶದಲ್ಲಿ ಮಾತ್ರ ಈ ರೀತಿ ಘೋಷಣೆ ಮಾಡುವುದು ಖಂಡನೀಯ’ ಎಂದ ಅವರು, ‘ರೈತರ ಬಗ್ಗೆ ಕನಿಕರವಿದ್ದರೆ ಈ ಸಾರಿಯ ಅಯವ್ಯಯ ದಲ್ಲಿ ರೈತರ ಸಾಲ ಮನ್ನಾ ಮಾಡಲಿ’ ಎಂದರು.
ಎಸ್.ಎಂ. ಕೃಷ್ಣ ಬಿಜೆಪಿ ಸೇರುತ್ತಾರೆ ಎಂಬ ವಂದತಿ ಬಗ್ಗೆ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷಕ್ಕೆ ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಇದರ ಬಗ್ಗೆ ಹೆಚ್ಚಿಗೆ ಹೇಳಲಾರೆ’ ಎಂದು ಹೇಳಿದರು.
ಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಅವರ ಪಾತ್ರ ಮುಖ್ಯವಾಗಿ ರುತ್ತದೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗ ಳನ್ನು ಸ್ಪರ್ಧೆಗೆ ಇಳಿಸುತ್ತೇವೆ ಎಂದರು.
ತಾಲ್ಲೂಕಿನ ರೈತರ ಬೇಡಿಕೆಯ ನೀರಾವರಿ ಯೋಜನೆಗಳಾದ ಮೂಡಿ–ಕುಣ್ಣೆತೇಪ್ಪ, ಜಂಗಿನಕೊಪ್ಪ, ಮೂಗೂರು ಏತ ನೀರಾವರಿಗೆ ಹಣ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಭರಮಗೌಡ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.
ಶಾಸಕ ಮಧು ಬಂಗಾರಪ್ಪ ಮಾತನಾಡಿ, ನಂಜನಗೂಡು ಸೇರಿದಂತೆ ಏಳು ಉಪಚುನಾವಣೆಗೆ ಮಾತ್ರ ಬೇರೆ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆ ಪಕ್ಷದವರು ನಮ್ಮನ್ನು ಕೇಳಿದ್ದರಿಂದ ಈ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಮುಂದೆ ದೊಡ್ಡ ಚುನಾವಣೆ ಇರುವುದರಿಂದ ಪಕ್ಷಕ್ಕೆ ಆರ್ಥಿಕ ನಷ್ಟ ತಪ್ಪಿಸುವ ಸಲುವಾಗಿ, ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಯಾವ ತಿರ್ಮಾನ ಕೈಗೊಂಡರೂ ಆದಕ್ಕೆ ನಾವು ಬದ್ಧ . ಒಂದು ವೇಳೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲೇಬೇಕು ಎಂದಾದರೆ ಕಾರ್ಯಕರ್ತರು ಸೂಚಿಸಿದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪಕ್ಷ ಸಿದ್ಧ ಎಂದರು.
ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ್ ಶಿವಮೊಗ್ಗಿ ಹಾಗೂ ತಾಲ್ಲೂಕು ಅಧ್ಯಕ್ಷ ಎಸ್.ಎಂ.ನೀಲೇಶ್, ಪದವಿ ಕಾಲೇಜು ಅತಿಥಿ ಉಪನ್ಯಾಸಕರನ್ನೇ ಕಾಯಂಗೊಳಿಸ ಬೇಕೆಂದು ಅಧಿವೇಶನ ದಲ್ಲಿ ಚರ್ಚಿಸಲು ಮನವಿ ಮಾಡಿದರು.
ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಶಿವಲಿಂಗೇಗೌಡ, ತಾ.ಪಂ ಉಪಾಧ್ಯಕ್ಷ ಸುರೇಶ ಹಾವಣ್ಣನವರ್ ಬ್ಲಾಕ್ ಅಧ್ಯಕ್ಷರಾದ ಕೆ.ಪಿ. ರುದ್ರೇಗೌಡ,ಗಣಪತಿ, ಎಚ್.ಟಿ. ಬಳಿಗಾರ್, ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಲ್ತಾಫ್, ತುಕಾರಾಂ ಕಾರವಾರ, ಭೋಜೆಗೌಡ್ರು, ಕೇಶವಮೂರ್ತಿ, ಜರ್ಮಲೆ ಚಂದ್ರಶೇಖರ್, ಇತರರು ಉಪಸ್ಥಿತರಿದ್ದರು