ಹುಳಿಯಾರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಪದಾಧಿಕಾರಿಗಳು ಲಂಚ ಮುಕ್ತ ಚಿಕ್ಕನಾಯಕನಹಳ್ಳಿ ಮುಂದುವರಿದ ಭಾಗವಾಗಿ ಹಂದನಕೆರೆ ಗ್ರಾಮದ ವಿವಿಧ ಸರ್ಕಾರಿ ಕಚೇರಿಗಳಿಗೆ ತೆರಳಿ ಸೋಮವಾರ ಸಾಮಾಜಿಕ ಪರಿವೀಕ್ಷಣೆ ನಡೆಸಿದರು.
ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿ ಯಿಂದ ಆರಂಭವಾದ ಪರಿ ವೀಕ್ಷಣೆ ರೈತ ಸಂಪರ್ಕ ಕೇಂದ್ರ, ಪೊಲೀಸ್ ಠಾಣೆ ಸೇರಿದಂತೆ ಇತರ ನಡೆಯಿತು.
ಕಚೇರಿಗಳಿಗೆ ಬಂದ ಪದಾಧಿಕಾರಿಗಳು ಕೆಲಸ ಮಾಡುವ ಒಟ್ಟು ಅಧಿಕಾರಿಗಳು ಮತ್ತು ಹಾಜರಿ ರುವ ಅಧಿಕಾರಿಗಳ ಬಗ್ಗೆ ಮಾಹಿತಿ ಪಡೆದರು. ಕೆಲ ಕಚೇರಿಗಳಲ್ಲಿ ಅಧಿಕಾರಿಗಳ ಪದನಾಮ, ಹುದ್ದೆ ಸೇರಿದಂತೆ ನಾಮಪದಕ ಹಾಕುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಹೇಳಲಾಯಿತು.
ಸಮಸ್ಯೆ ಬೇಡಿ ಬರುವ ಸಾರ್ವಜನಿಕರಿಗೆ ಸೂಕ್ತ ಉತ್ತರ ನೀಡಿ ಅವರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹಾರ ಮಾಡಬೇಕು. ಹಿರಿಯ ನಾಗರಿಕರು, ಆಶಕ್ತರು ಬಂದರೆ ಅವರನ್ನು ಗೌರವದಿಂದ ಕಾಣಬೇಕು. ಯಾವುದೇ ಕಾರಣಕ್ಕೂ ಅವರ ಹತ್ತಿರ ಲಂಚಕ್ಕೆ ಬೇಡಿಕೆ ಇಡದಂತೆ ತಿಳಿವಳಿಕೆ ನೀಡಿದರು.
ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದಾಗ ಸಮಸ್ಯೆಗಳ ಮಹಾಪೂರವೇ ಇರುವುದು ಕಂಡು ಬಂದಿತು. ನೂತನವಾಗಿ ಬಂದಿರುವ ಪಿಡಿಒ ಅವರಿಗೆ ಕಚೇರಿ ಕಡತಗಳ ವಿಲೆವಾರಿ ಸೇರಿದಂತೆ ಉತ್ತಮ ಆಡಳಿತ ನಡೆಸಲು ಹೇಳಿದರು.
ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭವಾಗಿರುವುದರಿಂದ ಹೆಚ್ಚಿನ ಅಧಿಕಾರಿಗಳು ಅಲ್ಲಿಗೆ ಹೋಗಿರುವ ಬಗ್ಗೆ ಮಾಹಿತಿ ಪಡೆದರು. ನಂತರ ಹುಳ್ಕಮ್ಮನ ಬೆಟ್ಟದಲ್ಲಿ ನಡೆಯುವ ಗೋಶಾಲೆಗೆ ಲಂಚಮುಕ್ತ ನಿರ್ಮಾಣ ವೇದಿಕೆಯ ಪದಾಧಿಕಾರಿಗಳು ಭೇಟಿ ನೀಡಿದರು.
ಜನಸಂಗ್ರಾಮ ಪರಿಷತ್ ಉಪಾಧ್ಯಕ್ಷ ಸಿ.ಯತಿರಾಜು, ಸುವರ್ಣ ವಿದ್ಯಾ ಚೇತನದ ಗುರು, ನಾಗರಾಜು , ರೈತಸಂಘದ ಕೆಂಕೆರೆ ನಾಗರಾಜು, ಮಹಮದ್ ಸಜ್ಜಾದ್ ಇತರರು ಇದ್ದರು.