ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಎಂದರೆ ಹೆದರಬೇಕಿಲ್ಲ

ವಿಶ್ವ ಕ್ಯಾನ್ಸರ್‌ ದಿನ ಫೆ. 4
Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವೈದ್ಯಕೀಯ ಅವಿಷ್ಕಾರಗಳು ಚಿಕಿತ್ಸೆಯಲ್ಲಿ ಭರವಸೆ ಮೂಡಿಸುತ್ತಿರುವ ಇಂದಿನ ಆಧುನಿಕಯುಗದಲ್ಲೂ ಕ್ಯಾನ್ಸರ್ ಎಂದರೆ ಎಲ್ಲರೂ ಎದೆಗುಂದುವಂತಹ ವಿಷಯವೇ ಸರಿ. ಕ್ಯಾನ್ಸರ್ ಎಂದರೆ ಎಂಥವರ ಮನದಾಳದಲ್ಲೂ ಕಾಯಿಲೆ ಬಗ್ಗೆ, ಚಿಕಿತ್ಸೆಯ ಬಗ್ಗೆ, ಭಯಾನಕ ಕಲ್ಪನೆಗಳು ಒಡಮೂಡುತ್ತವೆ. ಆಧುನಿಕ ವೈದ್ಯಕೀಯಸೌಲಭ್ಯಗಳ ನಡುವೆಯೂ ಇಂದು ಜಗತ್ತಿನಲ್ಲಿ ಕೋಟ್ಯಂತರ ಜನರು ವಾರ್ಷಿಕವಾಗಿ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಜನರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ (30–60 ವರ್ಷದೊಳಗಿನವರು). ಹಲವಾರು ವರ್ಷಗಳಿಂದ ಸಾವಿಗೆ ಆರನೇ ಕಾರಣವಾಗಿದ್ದ ಕ್ಯಾನ್ಸರ್ ಮುಂದುವರೆದ ದೇಶಗಳಲ್ಲಂತೂ ಈಗ ಎರಡನೇ ಸ್ಥಾನಕ್ಕೇರಿದೆ. ಲಿಂಗಬೇಧವಿಲ್ಲದೆ, ವಯೋಬೇಧವಿಲ್ಲದೆ ನಿರ್ದಿಷ್ಟ ಕಾರಣಗಳಿಲ್ಲದೆ ಯಾವುದೇ ಅಂಗವನ್ನು ಬಾಧಿಸಬಹುದಾದ ಕಾಯಿಲೆ ಯಾವುದೆಂದು ಕೇಳಿದರೆ ಥಟ್‌ ಎಂದು ಹೊಳೆಯುವ ಉತ್ತರವೇ ಕ್ಯಾನ್ಸರ್.

ಕ್ಯಾನ್ಸರ್‌ನಲ್ಲಿ ಜೀವಕೋಶಗಳ ವಿಭಜನೆ ಹಾಗೂ ಬೆಳವಣಿಗೆಗಳು ಸಹಜವಾಗಿ ಆಗದೇ ಅಸಹಜ ಹಾಗೂ ಅನಿಯಂತ್ರಿತವಾಗಿ ಆಗುತ್ತವೆ. ಯಾವುದೇ ಕ್ರಮಬದ್ಧತೆಗೊಳಗಾಗದೆ ವೇಗವಾಗಿ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ಪೋಷಕಾಂಶಗಳನ್ನುಹೀರಿ ಸಹಜಕೋಶಗಳ ಕಾರ್ಯಚಟುವಟಿಕೆಗಳಿಗೆ ಭಂಗವನ್ನುಂಟುಮಾಡುತ್ತದೆ. ಅಷ್ಟೇ ಅಲ್ಲ, ಗಂಥಿಕೋಶಗಳು ಮೂಲ ಅಂಗದಿಂದ ಕಳಚಲ್ಪಟ್ಟು ರಕ್ತ ಅಥವಾ ದುಗ್ದರಸದ ಮೂಲಕ ಬೇರೆ ಅಂಗಗಳಿಗೆ ದಾಳಿಮಾಡಿ (ಉದಾ: ಮೂಳೆ, ಮೆದುಳು, ಶ್ವಾಸಕೋಶ, ಲಿಂಫ್ ನೋಡ್ ಇತ್ಯಾದಿ) ಅಲ್ಲಿನ ಸಹಜ ಕೋಶಗಳನ್ನು ನಾಶಮಾಡುತ್ತದೆ. ಕ್ಯಾನ್ಸರ್ ದೇಹದ ಯಾವುದೇ ಭಾಗದಿಂದ ಬರಬಹುದಾದರೂ ಮುಖ್ಯವಾಗಿ ಶ್ವಾಸಕೋಶ, ಜೀರ್ಣಾಂಗವ್ಯೂಹ, ರಕ್ತ, ದುಗ್ದಗ್ರಂಥಿ, ತ್ಯಾಜ್ಯ ವ್ಯವಸ್ಥೆ, ಪುರುಷರಲ್ಲಿ ಪ್ರಾಸ್ಟೇಟ್, ಸ್ತ್ರೀಯರಲ್ಲಿ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತವೆ.

ಕ್ಯಾನ್ಸರ್‌ಗೆ ಕಾರಣಗಳೇನು?
ನಿರ್ದಿಷ್ಟ ಕಾರಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಹಲವು ಕಾರಣಗಳು ಸೇರಿ ಕ್ಯಾನ್ಸರ್ ಸಂಭವಿಸುತ್ತವೆ. (ಮಲ್ಟಿಫ್ಯಾಕ್ಟೋರಿಯಲ್) ಜೊತೆಗೆ ಪರಿಸರದಲ್ಲಿನ ಪರಿಸ್ಥಿತಿಗಳು (ಎನ್ವಿರಾನ್ಮೆಂಟಲ್ ಫ್ಯಾಕ್ಟರ್) ಮುಖ್ಯ ಕಾರಣ. ವಿಕಿರಣ, ಕೆಲವು ವೈರಸ್‌–ಸೋಂಕುಗಳು (ಹೆಪಟೈಟಿಸ್ ಸಿ.ಬಿ ವೈರಸ್, ಲಿವರ್ ಕ್ಯಾನ್ಸರ್ ಸಂಭವ ಹೆಚ್ಚಿಸಿದರೆ ಎಚ್.ಪಿ.ವಿ. ಸೋಂಕಿನಲ್ಲಿ ಗರ್ಭಕೊರಳಿನಕ್ಯಾನ್ಸರ್, ಎಚ್.ಐ.ವಿ. ಸೋಂಕಿನಲ್ಲಿ ಬರ್ಕಿಟ್ಸ್ ಲಿಮ್‌ಫೋಮಾ, ಇತ್ಯಾದಿ) ಜೀವಕೋಶಗಳ ಕಾರ್ಯಪ್ರವೃತ್ತಿಯನ್ನು ಬದಲಿಸಿ ಕ್ಯಾನ್ಸರ್–ಕಾರಕಗಳನ್ನಾಗಿ ಮಾಡುತ್ತದೆ. ಇದರೊಂದಿಗೆ ವಯಸ್ಸು, ಲಿಂಗ, ಪರಿಸರ, ವಂಶಾವಳಿ– ಮುಂತಾದವು ಕೂಡ ಕ್ಯಾನ್ಸರ್ ಕಾರಕವಾಗಿ ಪರಿಣಮಿಸಬಹುದು.

ತಂಬಾಕಿನ ಸೇವನೆಯಿಂದ ಹಿಡಿದು ಧೂಮಪಾನ, ಮದ್ಯಪಾನ, ತಪ್ಪು ಆಹಾರಪದ್ಧತಿಗಳು, ಎ ಹಾಗೂ ಸಿ ವಿಟಮಿನ್ ಕೊರತೆ, ಆಹಾರದಲ್ಲಿ ಕೃತಕ ರಾಸಾಯನಿಕಗಳ ಹೆಚ್ಚುಹೆಚ್ಚು ಬಳಕೆ, ಬದಲಾದ ಜೀವನಶೈಲಿಯಿಂದ ಹೆಚ್ಚುತ್ತಿರುವ ಬೊಜ್ಜು, ಹಾಗೂ ಹೆಚ್ಚಾಗುತ್ತಿರುವ ಹಾರ್ಮೋನು ಅಸಮತೋಲನ, ಹೆಚ್ಚುತ್ತಿರುವ ರಾಸಾಯನಿಕ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಸೂರ್ಯನ ಅತಿಯಾದ ಅಲ್ಟ್ರಾವೈಲೆಟ್‌ಕಿರಣಗಳಿಗೆ ಹಾಗೂ ಇತರ ವಿಕಿರಣ ವಸ್ತುಗಳಿಗೆ ತೆರೆದುಕೊಳ್ಳುವುದರವರೆಗೆ ಕ್ಯಾನ್ಸರ್‌ಗೆ ಹತ್ತುಹಲವು ಕಾರಣಗಳಿವೆ.

ಒಟ್ಟಾರೆ ಹೆಚ್ಚುತ್ತಿರುವ ಜಾಗತೀಕರಣ ಹಾಗೂ ಕೈಗಾರೀಕರಣದಿಂದ ಶರೀರ ಹೆಚ್ಚುಹೆಚ್ಚು ದುರ್ಬಲವಾಗಿ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತಾ ಅದರೊಂದಿಗೆ ಹೆಚ್ಚುತ್ತಿರುವ ಮಾನಸಿಕ ಒತ್ತಡ ಎಲ್ಲವೂ ಇಂದು ಕ್ಯಾನ್ಸರ್‌ಗೆ ಪ್ರಚೋದನೆ ಉಂಟುಮಾಡಿ ಯಾರಿಗೆ ಯಾವಾಗಬೇಕಾದರೂ ಆರೋಗ್ಯವಂತರಾಗಿಯೇ ಕಾಣಿಸಿಕೊಳ್ಳುವವರಿಗೂ ಈ ಕ್ಯಾನ್ಸರ್ ಅಕ್ರಮಿಸಬಹುದು. ಆದ್ದರಿಂದ ಬೇಗನೆ ಪತ್ತೆಹಚ್ಚಿ ಚಿಕಿತ್ಸೆ ಪಡೆದು ಪರಿಸ್ಥಿತಿಯನ್ನು ಸಕಾಲಿಕವಾಗಿ ಎದುರಿಸುವ ಅನಿವಾರ್ಯತೆ ಎಂದಿಗಿಂತಲೂ ಇಂದು ಹೆಚ್ಚಾಗಿದೆ.

ನಮ್ಮ ಭಾರತದಲ್ಲಂತೂ ಶೇ. 70ರಷ್ಟು ಕ್ಯಾನ್ಸರ್ ರೋಗಿಗಳು ಸರಿಯಾದ ಚಿಕಿತ್ಸೆಯಿಲ್ಲದೆ ಮರಣ ಹೊಂದಿದರೆ ಶೇ.80ರಷ್ಟು ಜನರು ರೋಗ ಮುಂದುವರೆದ ಹಂತದಲ್ಲೇ ವೈದ್ಯರಲ್ಲಿಗೆ ಚಿಕಿತ್ಸೆ–ಸಲಹೆಗಳಿಗೆ ತೆರಳುತ್ತಾರೆ. ಶೇ.50ರಷ್ಟು ಜನರಿಗೆ ಜೀವನಶೈಲಿಗೆ ಸಂಬಂಧಿಸಿದ ಕಾರಣದಿಂದ ಕ್ಯಾನ್ಸರ್‌ ಬರುತ್ತಿದೆ. ಅತಿಬೊಜ್ಜು ಹಾಗೂ ಕಡಿಮೆ ದೈಹಿಕಚಟುವಟಿಕೆ ಮತ್ತು ತಪ್ಪು ಆಹಾರಸೇವನಾ ಕ್ರಮದಿಂದ 13ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್‌ಗೆ ಒಳಗಾಗುವ ಸಂಭವವಿದೆ. ಪ್ರಾರಂಭದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರುವುದು ಈ ಕಾಯಿಲೆಯ ಇನ್ನೊಂದು ದುರಂತ. ನಂತರ ಮುಂದುವರೆದ ಹಂತದಲ್ಲಿಯಷ್ಟೆ ರೋಗಲಕ್ಷಣಗಳು ಕಾಣಿಸುತ್ತವೆ.

ಶ್ವಾಸಕೋಶದಲ್ಲಾದರೆ ಕೆಮ್ಮು, ಅನ್ನನಾಳದಲ್ಲಾರೆ ನುಂಗಲು ತೊಂದರೆ, ಗುದಧ್ವಾರದಲ್ಲಾದರೆ ಮಲಬದ್ಧತೆ, ಗರ್ಭಕೋರಳಲ್ಲಾದರೆ ವಾಸನೆಯುಳ್ಳ ಬಿಳಿಮುಟ್ಟು, ಮುಟ್ಟಿನ ಮಧ್ಯ ರಕ್ತಸ್ರಾವ ಇತ್ಯಾದಿ ಕಂಡುಬರಬಹುದು. ಕ್ಯಾನ್ಸರ್‌ನ ಎಚ್ಚರಿಕೆಯ ಚಿಹ್ನೆಗಳೆಂದರೆ ಸ್ತನ ಮತ್ತಿತರ ಭಾಗದಲ್ಲಿ ನೋವಿಲ್ಲದ ಗಂಟು, ನೈಸರ್ಗಿಕ ದ್ವಾರದಿಂದ ಅಕಾರಣ ರಕ್ತಸ್ರಾವ, ಚಿಕಿತ್ಸೆಗೆ ಬಗ್ಗದ ಕೆಮ್ಮು, ಜೀರ್ಣಕ್ರಿಯೆ ಮಲವಿಸರ್ಜನೆಯಲ್ಲಿ ಆಗುವ ಪದೇಪದೇ ವ್ಯತ್ಯಾಸ, ಕಾರಣವಿಲ್ಲದೆ ತೂಕ ಇಳಿಯುವಿಕೆ, ಕಾರಣವಿಲ್ಲದೆ ಉಸಿರಾಟದ ತೊಂದರೆ, ಆಹಾರವನ್ನು ನುಂಗಲು ತೊಂದರೆ, ಇವೆಲ್ಲವು ಇದ್ದರೆ ಸೂಕ್ತ ತಪಾಸಣೆಗೊಳಗಾಗಬೇಕು.

ಎಲ್ಲರಿಗೂ ಅನುಕೂಲವಾಗುವಂತಹ ಸಾರ್ವತ್ರಿಕವಾದ ಸ್ಕ್ರೀನಿಂಗ್‌–ಪರೀಕ್ಷೆ ಇಲ್ಲದಿದ್ದರೂ ನಿಯಮಿತ ಸ್ವಯಂ ಸ್ತನ ತಪಾಸಣೆ, ಹಾಗೂ ಮ್ಯಾಮೋಗ್ರಫಿ, ಸರ್ವಿಕಲ್‌ಪ್ಯಾಪ್‌ಸ್ಮಿಯರ್‌ಸ್ಕ್ರೀನಿಂಗ್ ಇವೆಲ್ಲವನ್ನು ಸೂಕ್ತವಾಗಿ ಮಾಡಿಸಬೇಕು. ಒಮ್ಮೆ ಕ್ಯಾನ್ಸರ್ ಇರುವುದು ಪತ್ತೆಯಾದರೆ ವೈದ್ಯರು ಸೂಕ್ತವಾದ ಶಸ್ತ್ರಚಿಕಿತ್ಸೆ, ರೇಡಿಯೋಥೆರಪಿ ಹಾಗೂ ಕೀಮೋಥೆರಪಿಗಳನ್ನು ಸೂಕ್ತವಾಗಿ ತೆಗೆದುಕೊಳ್ಳಲು ತಿಳಿಸುತ್ತಾರೆ.

ಪ್ರತಿವರ್ಷವೂ – ಕಳೆದ 16 ವರ್ಷಗಳಿಂದ –  ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ನಿಯಂತ್ರಣಸಂಸ್ಥೆಯಿಂದ (ಡಬ್ಲ್ಯೂ.ಐ.ಸಿ.ಸಿ.) ವಿಶ್ವ ಕ್ಯಾನ್ಸರ್ ದಿನವನ್ನು ಒಂದೊಂದು ಘೋಷವಾಕ್ಯದಡಿ ಆಚರಿಸಲಾಗುತ್ತದೆ. 2016ರಿಂದ 2018 ರವರೆಗಿನ ಘೋಷವಾಕ್ಯ ‘ನಮಗೂ ಸಾಧ್ಯ, ನನಗೂ ಸಾಧ್ಯ’ ಎನ್ನುವುದು. ಅಂದರೆ ಪ್ರತಿವ್ಯಕ್ತಿಗೂ ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ಕ್ಯಾನ್ಸರ್‌ರೋಗದ ಬಗ್ಗೆ ಅರಿವನ್ನು ಮೂಡಿಸಿ, ಎಚ್ಚರಿಕೆಯ ಕಿಡಿಹಚ್ಚಿ, ಜಾಗತಿಕ ಸಮುದಾಯಕ್ಕೆ ಬೆಳಕು ಮೂಡಿಸಲು ಜೊತೆಗೆ ಕ್ಯಾನ್ಸರ್‌ ತಡೆಗಟ್ಟುವ ಬಗ್ಗೆ ಸಂಶೋಧನೆ ಮಾಡುವುದನ್ನು ಉತ್ತೇಜಿಸಿ, ಕ್ಯಾನ್ಸರ್ ಕಾರಕವಸ್ತುಗಳಿಂದ ಜನರಿಗೆ ರಕ್ಷಣೆಯನ್ನು ಒದಗಿಸುವುದಕ್ಕೆ ಇದು ಸಕಾಲ. 2020ರರೊಳಗಾಗಿ ಕ್ಯಾನ್ಸರ್‌ಸಂಭವವನ್ನು ಕಡಿಮೆಗೊಳಿಸಿ ಜಾಗತಿಕ ಸಮುದಾಯವನ್ನು ಕ್ಯಾನ್ಸರ್‌ನ ಕಬಂಧಬಾಹುಗಳಿಂದ ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಎಲ್ಲ ವರ್ಗದ ಜನರು ಸ್ಫೂರ್ತಿಗೊಂಡು ಕಾರ್ಯೋನ್ಮುಖರಾಗಲು ಕ್ಯಾನ್ಸರ್ ದಿನಾಚರಣೆ ಒಂದು ಸುಸಂದರ್ಭ.

ನಮಗೆಲ್ಲಾ ಸಾಧ್ಯವಾಗುವುದೇನೆಂದರೆ, ಕ್ಯಾನ್ಸರ್ ಬಗೆಗೆ ಸಂಘ–ಸಂಸ್ಥೆಗಳಲ್ಲಿ, ಶೈಕ್ಷಣಿಕಸಂಸ್ಥೆಗಳಲ್ಲಿ, ಕಾರ್ಯಸ್ಥಳಗಳಲ್ಲಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದು. ಮುಖ್ಯವಾಗಿ ಯುವಜನತೆಯನ್ನು ಗುರಿಯಾಗಿಟ್ಟುಕೊಂಡು, ಕೇವಲ ಧೂಮಪಾನದಿಂದಲೇ 50 ಲಕ್ಷಕ್ಕೂ ಹೆಚ್ಚು ಜನರುಸಾವು ಸಂಭವಿಸುತ್ತಿದೆಯಂಬುದನ್ನೂ, ಧೂಮಪಾನ ಯಾವ ರೀತಿಯಾಗಿ ಬಾಯಿ, ಗಂಟಲು, ಶ್ವಾಸಕೋಶದಿಂದ ಹಿಡಿದು ಹೊಟ್ಟೆಕ್ಯಾನ್ಸರ್ ಹಾಗೂ ಲುಕೀಮೀಯಾದವರೆಗೆ ಕಾರಣವಾಗಬಹುದೆಂದು ಒತ್ತಿಹೇಳಬೇಕು.

ಮದ್ಯಪಾನದಿಂದ ಬಾಯಿ, ಅನ್ನನಾಳ, ಲಿವರ್‌–ಕ್ಯಾನ್ಸರ್ ಆಗುವುದರ ಬಗ್ಗೆ ಅರಿವನ್ನು ಮೂಡಿಸಿ, ಅತಿಯಾದ ಬೊಜ್ಜಿನಿಂದ ಪಿತ್ತಕೋಶ, ಸ್ತನ, ಅನ್ನನಾಳ ಇನ್ನಿತರ ಕ್ಯಾನ್ಸರ್‌ಗಳಿಗಗೆ ಕಾರಣವಾಗಬಹುದೆಂದು ತಿಳಿಹೇಳುವ ಅಗತ್ಯವಿದೆ. ಜೀವನಶೈಲಿ ಹಾಗೂ ಕ್ಯಾನ್ಸರ್ ಇರುವ ಸಂಬಂಧಗಳನ್ನು ಮನದಟ್ಟುಮಾಡಿಸಿ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಶೇ. 30–35ರಷ್ಟು ಕ್ಯಾನ್ಸರ್‌ನನ್ನು ತಡೆಗಟ್ಟಬಹುದೆಂಬ ಎಚ್ಚರಿಕೆಯನ್ನೂ ಮೂಡಿಸಬೇಕು.

ಕಾರ್ಯಸ್ಥಳದಲ್ಲಿ, ಶಾಲಾ-ಕಾಲೇಜುಗಳಲ್ಲಿ, ಪ್ರತಿಶತ ನೂರರಷ್ಟು ಧೂಮಪಾನ ನಿಷೇಧವನ್ನು ಪಾಲಿಸಬೇಕು. ಅಪ್ರಾಪ್ತವಯಸ್ಸಿನವರಿಗೆ ತಂಬಾಕು ಉತ್ಪನ್ನಗಳ ಸರಬರಾಜಿಗೆ ಕಡಿವಾಣ ಬೀಳಬೇಕು.

ಲಭ್ಯವಿರುವ ವ್ಯಾಕ್ಸಿನ್‌ಗಳಬಗ್ಗೆ ಅರಿವು ಮೂಡಿಸಬೇಕು (ಎಚ್.ಪಿ.ವಿ., ಹೆಪಟೈಟಿಸ್ ಬಿ ವ್ಯಾಕ್ಸಿನ್)
ಕ್ಯಾನ್ಸರನ್ನು ಬೇಗನೆಪತ್ತೆಹಚ್ಚಿದರೆ ಉಂಟಾಗುವ ಲಾಭಗಳಬಗ್ಗೆ ಜನರಿಗೆ ತಿಳಿಸಬೇಕು. ಈ ಬಗ್ಗೆ ವೈದ್ಯರು, ಪ್ರಾಥಮಿಕ ಆರೋಗ್ಯ ಕಾರ್ಯಕರ್ತರು, ಆರೋಗ್ಯಸಹಾಯಕರು, ತಿಳಿವಳಿಕೆಯುಳ್ಳ ಸಾಮಾಜಿಕ ಕಾರ್ಯಕರ್ತರು ಎಲ್ಲರನ್ನೊಳಗೊಂಡ ಕಾರ್ಯಪಡೆಯೊಂದು ರೂಪಿಸಬೇಕು. ಕಾಯಿಲೆಯನ್ನು ಬೇಗನೆ ಪತ್ತೆಹಚ್ಚುವುದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಬೇಕು. ಕ್ಯಾನ್ಸರ್‌ ಎಂದರೆ ಸಾವು ಖಚಿತ – ಎಂಬ ಭಯ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಲಭ್ಯವಿರುವ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣಚಿಕಿತ್ಸೆ, ಉಪಶಮನ ಆರೈಕೆ, ಒತ್ತಡ ನಿರ್ವಹಣೆಯ ಬಗ್ಗೆ ಈ ತಂಡಕ್ಕೆ ಜ್ಞಾನ ಹಾಗೂ ಸಾಮರ್ಥ್ಯವಿದ್ದರೆ ಕ್ಯಾನ್ಸರ್ ನಿರ್ವಹಣೆ ಸುಲಭ.

ಧೂಮಪಾನ, ತಂಬಾಕು ಸೇವನೆಯನ್ನು ಪ್ರಚೋದಿಸುವ ಜಾಹಿರಾತುಗಳಿಗೆ ಕಡಿವಾಣ ಹಾಕಲೇಬೇಕು. ಕ್ಯಾನ್ಸರ್ ಔಷಧಗಳ ಲಭ್ಯತೆಯ ಬಗ್ಗೆ, ಚಿಕಿತ್ಸೆಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ನೀತಿ–ನಿಯಮಗಳನ್ನು ರೂಪಿಸಬೇಕು.

ನಾನು ವೈಯಕ್ತಿಕವಾಗಿ ಏನೆಲ್ಲಾ ಮಾಡಬಹುದು?
ಉತ್ತಮ ಪೌಷ್ಟಿಕಾಂಶಗಳುಳ್ಳ ನಾರಿನಾಂಶಗಳುಳ್ಳ ಪ್ರಕೃತಿದತ್ತ ಆಹಾರಸೇವನೆ (ಅಂದರೆ ಹಣ್ಣು, ಸೊಪ್ಪು, ತರಕಾರಿ ಮೊಳಕೆಕಾಳುಗಳುಳ್ಳ), ಜೊತೆಗೆ ದಿನಾಲು ಒಂದೆರಡು ಗಂಟೆ ದೈಹಿಕ ಚಟುವಟಿಕೆ, ಕನಿಷ್ಠ  6–8 ತಾಸುಗಳ ನಿದ್ರೆ – ಇವುಗಳಿಂದ ಸಮತೂಕ ಕಾಯ್ದುಕೊಂಡು ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಧೂಮಪಾನ, ಮದ್ಯಪಾನದಂಥ ದುಶ್ಚಟಗಳಿಂದ ದೂರವಿದ್ದರೆ ಶೇ. 35ರಷ್ಟು ಕ್ಯಾನ್ಸರ್‌ನಿಯಂತ್ರಣ ಸಾಧ್ಯವಿರುವಾಗ ಅದನ್ನು ಅನುಸರಿಸಲು ನಾನು ಪಣತೊಡಬೇಕಲ್ಲವೇ?

ನಾನು ಮಹಿಳೆಯಾಗಿದ್ದರೆ ನಿಯಮಿತ ಸ್ತನ–ತಪಾಸಣೆ, ಅಗತ್ಯವಿದ್ದರೆ ಮಾತ್ರ ಮ್ಯಾಮೋಗ್ರಾಂ, ಲೈಂಗಿಕವಾಗಿ ಸಕ್ರಿಯವಾಗಿದ್ದರೆ ಪ್ಯಾಪ್‌ಸ್ಮಿಯರ್ ಪರೀಕ್ಷೆ ನಿಯಮಿತವಾಗಿ ಮಾಡಿಸಿಕೊಂಡು, ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಸೂಕ್ತಮಾರ್ಗದರ್ಶನ ಪಡೆಯಬಹುದಲ್ಲವೇ?
ನಾನು ಏನಾದರೂ ಕ್ಯಾನ್ಸರ್ ಎಚ್ಚರಿಕೆಯ ಚಿಹ್ನೆಗಳಿದ್ದರೆ ನಿರ್ಲಕ್ಷಿಸದೆ ತಪಾಸಣೆಗೊಳಗಾಗಬಹುದಲ್ಲವೇ?

ನಾನೇನಾದರೂ ಕ್ಯಾನ್ಸರ್ ಪೀಡಿತರಾಗಿದ್ದರೂ ಕೂಡ ಅಂತರ್ಮುಖಿಯಾಗಿ ಖಿನ್ನತೆಯಿಂದ ಬಳಲುವುದರ ಬದಲು ಸಾಮಾಜಿಕ ನೆರವನ್ನು ಬಯಸಿ, ಕುಟುಂಬದವರೊಂದಿಗೆ, ಬಾಳಸಂಗಾತಿಯೊಂದಿಗೆ ಸಹದ್ಯೋಗಿಗಳೊಂದಿಗೆ, ಆಪ್ತಸಮಾಲೋಚಕರೊಂದಿಗೆ, ಚರ್ಚಿಸುತ್ತಾ ನನ್ನ ಕಹಿಭಾವನೆಗಳನ್ನು ಹೊರಹಾಕಿ ನಿರಾಳತೆಯನ್ನು ಹೊಂದಲು ಅವಕಾಶವಾಗುವುದಾದರೆ ಅದು ಕಾಯಿಲೆ ಗುಣಮುಖವಾಗಲು ಧನಾತ್ಮಕ ಪರಿಣಾಮವನ್ನೇ ಬೀರುತ್ತದೆಯಲ್ಲವೇ? ಜೊತೆಗೆ ನಮ್ಮ ಅನುಭವಗಳನ್ನು ಇತರ ಕ್ಯಾನ್ಸರ್‌ಪೀಡಿತರೊಂದಿಗೆ ಹಂಚಿಕೊಂಡಾಗ ಅದು ಧನಾತ್ಮಕ ಪರಿಣಾಮವನ್ನೇ ಬೀರುತ್ತದೆ.  ಅಂಡಾಶಯಕ್ಯಾನ್ಸರ್ ಗೆದ್ದು ಮರುಜನ್ಮಗಳಿಸಿ ಹಲವು ಕ್ಯಾನ್ಸರ್ ಪೀಡಿತರಿಗೆ ಮಾರ್ಗದರ್ಶನ ಕೊಡುತ್ತಿರುವ ಮಾಯಾ ತಿವಾರಿ, ಜೊತೆಗೆ ಇತ್ತೀಚಿಗೆ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿರುವ ಮನಿಷಾ ಕೊಯಿರಾಲ, ಯುವರಾಜ್ ಸಿಂಗ್ ಮುಂತಾದವರ ಅನುಭವಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸೂಕ್ತಬದಲಾವಣಾ ಕ್ರಮಗಳನ್ನು ಅನುಸರಿಸಿ ರೋಗದ ಭಯಾನಕತೆಯಿಂದ ಬಿಡುಗಡೆ ಪಡೆಯಬಹುದಲ್ಲವೇ?

ಹೀಗೆ ನಾನು ವೈಯಕ್ತಿಕವಾಗಿ ಹಾಗೂ ನಾವೆಲ್ಲರೂ ಸಾಮೂಹಿಕವಾಗಿ ಅಳವಡಿಸಿಕೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನ–ಮಂಥನ ನಡೆಸಿ ಸಾರ್ವತ್ರಿಕ ಅರಿವನ್ನು ಮೂಡಿಸುವ ನಿರ್ಣಯವನ್ನು ವಿಶ್ವಕ್ಯಾನ್ಸರ್ ದಿನದಂದು ತೆಗೆದುಕೊಳ್ಳುವ ಅನಿವಾರ್ಯತೆ ಹಾಗೂ ಅಗತ್ಯ ರೋಗಿಯಿಂದ ಹಿಡಿದು ವೈದ್ಯಜಗತ್ತಿನವರಿಗೆಲ್ಲರಿಗೂ ಇದೆ. ಜೊತೆಗೆ ಕೇವಲ ರೋಗಿಗೆ ಹಾಗೂ ರೋಗಕ್ಕಷ್ಟೇ ಚಿಕಿತ್ಸೆ ಕೊಡದೆ, ಬುದ್ಧಿ ಮತ್ತು ಮನಸ್ಸಿಗೂ ಶಕ್ತಿನೀಡಬೇಕು. ಮನೋದಾರ್ಢ್ಯತೆ ಹೆಚ್ಚಿಸುವ ಯೋಗ, ಪ್ರಾಣಾಯಾಮ, ಪ್ರಕೃತಿಚಿಕಿತ್ಸೆ, ಆಯುರ್ವೇದ ಇನ್ನಿತರ ಉಪಶಮನ ಚಿಕಿತ್ಸಾಪದ್ಧತಿಗಳನ್ನೊಳಗೊಂಡ ಸಮನ್ವಯಿತ ವೈದ್ಯಪದ್ಧತಿಯನ್ನು ಅನುಸರಿಸುವುದು ಕ್ಯಾನ್ಸರ್‌ಚಿಕಿತ್ಸೆಯಲ್ಲಿ ಉತ್ತಮ ಹೆಜ್ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT