ಕೊಡಿಗೇನಹಳ್ಳಿ: ಹೋಬಳಿಯ ಕಲಿದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಗಲ್ಲು ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸಲು ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ 2 ವರ್ಷಗಳ ಹಿಂದೆ ಪರಿಶಿಷ್ಟ ಪಂಗಡ ಕಾಲೊನಿಯಲ್ಲಿ ಚರಂಡಿ ನಿರ್ಮಿಸಿದ್ದು ಚರಂಡಿಯಿಂದ ನೀರು ಸರಾಗವಾಗಿ ಹರಿಯುವುದನ್ನು ಅದೇ ಗ್ರಾಮದ ಸತ್ಯವತಿ ಎಂಬುವರು ಮರಳಿನಿಂದ ಕಟ್ಟೆಯನ್ನು ನಿರ್ಮಿಸಿ ತಡೆದಿದ್ದಾರೆ. ಮೇಲಿನಿಂದ ಬಂದು ಶೇಖರಣೆಯಾದ ಕೊಚ್ಚೆ ನೀರಿನಿಂದ ಇಲ್ಲಿನ ಜನಗಳಿಗೆ ಸಾಂಕ್ರಾಮಿಕ ರೋಗಗಳ ಜೊತೆಗೆ ತೊಂದರೆಯಾಗಿದೆ. ನಿತ್ಯ ಅಕ್ಕಪಕ್ಕದವರೊಂದಿಗೆ ಜಗಳವಾಡುವಂತಾಗಿದೆ.
ಹಲವು ಬಾರಿ ಇದರ ಬಗ್ಗೆ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಈಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳು ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ ಎಂದು ಪ್ರತಿಭಟನೆಕಾರರು ದೂರಿದರು.
ಗ್ರಾಮದಲ್ಲಿ ಸರಿಯಾದ ವಿದ್ಯುತ್ ದೀಪಗಳ ನಿರ್ವಹಣೆ ಹಾಗೂ ಚರಂಡಿ ವ್ಯವಸ್ಥೆ ಸಮಸ್ಯೆ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ನಾಮಕಾವಸ್ತೆಗಾಗಿ ಭೇಟಿ ನೀಡಿ ಹೋಗುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಸುತ್ತಿಲ್ಲ. ಇವರ ಬೇಜವಾಬ್ದಾರಿಯಿಂದ 15 ಕುಟುಂಬ ನರಕ ಯಾತನೆ ಅನುಭವಿಸುವಂತಾಗಿದೆ. ಸಮಸ್ಯೆ ಬಗೆ ಹರಿಯುವವರೆಗೂ ಕಚೇರಿ ಬೀಗ ತೆಗೆಯುವುದಿಲ್ಲ ಎಂದು ನರಸಮ್ಮ, ಅಶ್ವತ್ಥಮ್ಮ, ಲಕ್ಷ್ಮಮ್ಮ, ಲಿಂಗಮ್ಮ, ಸುಮ, ಲಕ್ಷ್ಮಿನಾರಾಯಣ, ನರಸಿಂಹಮೂರ್ತಿ, ಸತೀಶ್, ಲೋಕೇಶ್, ತಿಮ್ಮಯ್ಯ, ಇತರರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರರೆಡ್ಡಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡ 2 ದಿನದೊಳಗೆ ನಿಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಕಾರರು ಪ್ರತಿಭಟನೆ ಹಿಂಪಡೆದರು.