ಚಿತ್ರದುರ್ಗ: ‘ಸವಿತಾ ಸಮಾಜದ ಅಭಿವೃದ್ಧಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.
ತಾಲ್ಲೂಕಿನ ಮಾಳಪ್ಪನಹಟ್ಟಿಯ ಕಾಳಿದಾಸ ಬೀದಿಯಲ್ಲಿ ಶುಕ್ರವಾರ ಸವಿತಾ ಮಹರ್ಷಿ ಜಯಂತ್ಯುತ್ಸವ ಹಾಗೂ ಸವಿತಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.
ಸವಿತಾ ಸಮಾಜದವರ ಸೇವೆ, ಪೌರಕಾರ್ಮಿಕರ ಸೇವೆ ತುಂಬಾ ಆದರ್ಶವಾದದು. ಈ ರೀತಿ ಕಷ್ಟಪಡುವ ಸಮುದಾಯಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಕಾಳಜಿ ಹೊಂದಿದ್ದು, ಈಗಾಗಲೇ ಅನೇಕ ಯೋಜನೆಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಸವಿತಾ ಸಮಾಜದ ಸಮುದಾಯ ಭವನದ ಅಭಿವೃದ್ಧಿಗೆ ₹ 1 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ ಸಚಿವರು, ‘ನಿಮ್ಮಲ್ಲಿ ನಾನೂ ಒಬ್ಬನಾಗಿ ಸವಿತಾ ಭವನ ನಿರ್ಮಾಣಕ್ಕೆ ಸಹಕಾರ ನೀಡುತ್ತೇನೆ’ ಎಂದರು.
ಪ್ರಸ್ತುತ ಬಜೆಟ್ನಲ್ಲಿ ಸವಿತಾ ಸಮಾಜದ ಯುವಕ ಯುವತಿಯರಿಗಾಗಿ ಕೌಶಲ ತರಬೇತಿ ಕಾರ್ಯಕ್ರಮಗಳನ್ನು, ಶೇ 40ರಷ್ಟು ಸಬ್ಸಿಡಿ ಸಾಲ, ವಿದ್ಯಾರ್ಥಿಗಳಿಗೆ ನೆರವು ಸೇರಿದಂತೆ ಸಮಾಜದ ಸಮಗ್ರ ಅಭಿವೃದ್ಧಿಗೆ ಎಲ್ಲಾ ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಸ್ತುತ ಸರ್ಕಾರದಲ್ಲಿ ದೇವರಾಜ್ ಅರಸು ಅಭಿವೃದ್ಧಿ ನಿಗಮದಿಂದ ಹೆಚ್ಚಿನ ನೆರವು ಸವಿತಾ ಸಮಾಜಕ್ಕೆ ದೊರೆಯುತ್ತಿಲ್ಲ. ಸರ್ಕಾರ ಹೆಚ್ಚಿನ ನೆರವು ಕಲ್ಪಿಸಬೇಕಾಗಿದೆ. ಸಂಘಟನೆಯಿಂದ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಿದೆ. ಈ ಮೂಲಕ ಸವಿತಾ ಸಮಾಜ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಕೊಳೆ ತೊಳೆಯುವ, ಕ್ಷೌರ ಮಾಡುವ ಜನಾಂಗ ಸಂಘಟನೆ ಆಗುತ್ತಿರುವುದು ಸಂತೋಷದ ವಿಷಯ. ತೀರಾ ಹಿಂದುಳಿದ ಸವಿತಾ ಸಮಾಜ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರ್ಪಡೆಯಾಗಬೇಕು. ಅದಕ್ಕಾಗಿ ತಾವುಗಳೂ ಸಮಾಜದ ಪರವಾಗಿ ಹೋರಾಟ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮುದಾಯದ ಕೆಲವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ, ಸಮುದಾಯದ ಮುಖಂಡರಾದ ಎ.ಲಕ್ಷ್ಮಿನಾರಾಯಣಪ್ಪ, ಮಾರಣ್ಣ, ಜಿ.ಜಿ.ಸಾಯಿನಾಥ, ಆರ್.
ಶ್ರೀನಿವಾಸ್, ಆರ್.ಎನ್.ಹನುಮಂತಪ್ಪ, ಎ.ವೇಣುಗೋಪಾಲ, ಶ್ರೀನಿವಾಸ್, ವೆಂಕಟೇಶ್, ಆರ್.ಎಚ್.ಕಿರಣ್ ಕುಮಾರ್, ಘನಶ್ಯಾಂ, ನಾಗರಾಜ್, ವರದರಾಜು ಸೇರಿದಂತೆ ಇತರರು ಇದ್ದರು.
ಎನ್.ಡಿ.ಕುಮಾರ್ ಸ್ವಾಗತಿಸಿದರು. ಟಿ.ತಿಪ್ಪೇಸ್ವಾಮಿ ಸಂಪಿಗೆ ಪ್ರಾಸ್ತವಿಕವಾಗಿ ಮಾತನಾಡಿದರು. ಮದಕರಿಪುರ ಹನುಮಂತಪ್ಪ ವಂದಿಸಿದರು.
**
ಸವಿತಾ ಸಮಾಜದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕು.
-ಎಚ್.ಆಂಜನೇಯ
ಜಿಲ್ಲಾ ಉಸ್ತುವಾರಿ ಸಚಿವ