ನಾಪೋಕ್ಲು: ಕಾವೇರಿ ನದಿ ನೀರನ್ನು ಶುದ್ಧೀಕರಿಸಿ ಪಟ್ಟಣಕ್ಕೆ ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆ ಕೊರತೆಯಿಂದ ಜಲಮೂಲ ಗಳು ಬತ್ತುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗು ತ್ತಿದೆ. ಶುದ್ಧೀಕರಿಸದ ನೀರು ಸರಬರಾಜು ಆಗುತ್ತಿರುವುದರಿಂದ ಅದನ್ನು ಕುಡಿದವರಲ್ಲಿ ಅನೇಕರು ಕಾಮಲೆ ರೋಗ ಸೇರಿದಂತೆ ವಿವಿಧ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಇಂದಿರಾ ನಗರದ ನಿವಾಸಿಗಳು ಆರೋಪಿಸಿದ್ದಾರೆ.
ಪಟ್ಟಣಕ್ಕೆ ಪೂರೈಕೆ ಮಾಡುತ್ತಿರುವ ನೀರನ್ನು ಸಮೀಪದ ಕಾವೇರಿ ನದಿ ಯಿಂದ ನೇರವಾಗಿ, ಇಂದಿರಾನಗರದಲ್ಲಿರುವ 50 ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕ್ ಹಾಗೂ 1.50 ಲಕ್ಷ ಲೀಟರ್ ಸಾಮರ್ಥ್ಯದ ಒಂದು ಟ್ಯಾಂಕ್ಗೆ ಪೂರೈಕೆ ಮಾಡಿ ಅಲ್ಲಿಂದ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಎಲ್ಲ ಟ್ಯಾಂಕ್ಗಳಿಗೆ ಕಲುಷಿತ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಹಿಂದೆ ನಲ್ಲಿ ನೀರಿನಲ್ಲಿ ಮೀನಿನ ಮರಿಗಳು ಪತ್ತೆಯಾಗಿದ್ದವು. ಈಗ ಕಾಯಿಲೆ ವ್ಯಾಪಿಸಿದೆ. ಪಟ್ಟಣಕ್ಕೆ ಪೂರೈಸಲಾಗುತ್ತಿರುವ ಕುಡಿಯುವ ನೀರನ್ನು ಶುದ್ಧೀಕರಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕ್ರಮಕೈಗೊಳ್ಳಬೇಕು ಎಂದು ಪಟ್ಟಣದ ನಿವಾಸಿ ಮನ್ಸೂರ್ ಆಲಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಮಳೆ ಸುರಿದಿದ್ದ ಕಾರಣ, ನಲ್ಲಿಗಳಲ್ಲಿ ನಾಲ್ಕೈದು ದಿನ ಕೆಸರು ಮಿಶ್ರಿತ ನೀರನ್ನೇ ಪೂರೈಸಲಾಗಿದೆ. ಪಟ್ಟಣದಲ್ಲಿ ನೀರು ಶುದ್ಧೀಕರಣದ ನೂತನ ಘಟಕ ಸ್ಥಾಪಿಸುವ ಮೂಲಕ ಸಾರ್ವಜನಿಕರ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸುವಂತಾಗಬೇಕು ಎಂದು ಇಂದಿರಾನಗರದ ಮಹಿಳೆ ಡೇರಿನಾ ಲೂಯಿಸ್ ಒತ್ತಾಯಿಸಿದರು.