ಬಂಗಾರಪೇಟೆ: ಫೆ.13 ಮತ್ತು 14ರಂದು 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ತೇ.ಸಿ.ಬದರೀನಾಥ್ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹುತಾತ್ಮ ಯೋಧರ ಮಹಾಧ್ವಾರ’ ‘ಅನ್ನದಾತರ ವೇದಿಕೆ’ಯಲ್ಲಿ ಎರಡು ದಿನಗಳು ನಡೆಯುವ ಸಮ್ಮೇಳನದ ಅಧ್ಯಕ್ಷತೆಯನ್ನು ಸರಿತಾ ಜ್ಞಾನಾನಂದ ವಹಿಸುವರು ಎಂದು ತಿಳಿಸಿದರು.
ಕಸಾಪ ಕಚೇರಿಯಿಂದ ಮೊದಲ ದಿನದ ಕಾರ್ಯಕ್ರಮ ಆರಂಭವಾಗಲಿದ್ದು, ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ಎಲ್.ಸತ್ಯಪ್ರಕಾಶ್ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ನಂತರ ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅವರಿಂದ ಕನ್ನಡ ಧ್ವಜರೋಹಣ ಹಾಗೂ ತಾಲ್ಲೂಕು ಘಟಕ ಅಧ್ಯಕ್ಷ ತೇ.ಸಿ.ಬದರೀನಾಥ್ ಅವರಿಂದ ಪರಿಷತ್ತಿನ ಧ್ವಜರೋಹಣ ನಡೆಯಲಿದೆ ಎಂದು ತಿಳಿಸಿದರು.
ಬೆಳಿಗ್ಗೆ 9.30ಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾರ್ಯಕ್ರಮದ ಉದ್ಘಾಟಿಸುವರು. ಎರಡು ದಿನಗಳ ಕಾಲ ಕವಿ ಗೋಷ್ಠಿ, ಸಂವಾದಗಳು, ವಿಷಯಮಂಡನೆ, ವಿಚಾರ ಮಂಥನ, ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷವಾಗಿ ಮುದುಕನ ಮದುವೆ ಸಾಮಾಜಿಕ ನಾಟಕ ಆಯೋಜಿಸಲಾಗಿದೆ ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಮುಖರನ್ನು ಸನ್ಮಾನಿಸಲಾಗುವುದು, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ತಾಲ್ಲೂಕು ಘಟಕ ಗೌರವಾಧ್ಯಕ್ಷ ವಿ.ಎಚ್.ಬಾಲಕೃಷ್ಣೇಗೌಡ, ಆರ್.ಸಂಜೀವಪ್ಪ, ಎಲ್.ಎ.ವಿಜಯಕುಮಾರ್, ಬ.ನ.ಶಿವಕುಮಾರ್, ಎಚ್.ಎಲ್.ನಾಗರಾಜ್, ಇತರರಿದ್ದರು.