ಉಡುಪಿ: ಜಿಲ್ಲೆಯ ಕೊರಗ ಜನಾಂಗ ದವರ ಕಂದಾಯ ದಾಖಲೆಗಳಲ್ಲಿರುವ ದೋಷಗಳನ್ನು ತಿದ್ದುಪಡಿ ಮಾಡಿ ಸರಿಪಡಿಸಿಕೊಡಲು ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದ್ದಾರೆ.
ಉಡುಪಿ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಉಡುಪಿ ಹೋಬಳಿಯ ಕೊರಗ ಜನಾಂಗದವರ ಕಂದಾಯ ದಾಖಲೆ ತಿದ್ದುಪಡಿ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಸರ್ಕಾರದ ನಿರ್ದೇಶನದ ಮೇರೆಗೆ ಈ ವಿಶೇಷ ತಿದ್ದುಪಡಿ ಕಾರ್ಯ ನಡೆಸಲಾಗುತ್ತಿದೆ.
ಕೊರಗ ಜನಾಂಗದವರಿಗೆ ಸರ್ಕಾರ ದಿಂದ ಮಂಜೂರಾಗಿರುವ ಭೂಮಿಯ ಒಡೆತನವು ಅವರ ಪೂರ್ವಜರ ಹೆಸರಿನ ಲ್ಲಿಯೇ ಇದ್ದು, ಅದನ್ನು ಸರಿಪಡಿಸಿಲ್ಲದ ಕಾರಣ ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಇದನ್ನು ಸರಿಪಡಿಸಬೇಕಿದೆ.
ಇಲಾಖೆಯ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರು ಪ್ರತಿ ಮನೆ ಮನೆಗೆ ಭೇಟಿ ನೀಡಿ, ದಾಖಲೆಗಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದು, ನಂತರ ಸಂಬಂಧಪಟ್ಟ ಗ್ರಾಮಗಳಿಗೆ ತೆರಳಿ ಸ್ಥಳದಲ್ಲಿಯೇ ಪರಿಶೀಲನೆ ಮಾಡಿ ದಾಖಲೆಗಳನ್ನು ಸೂಕ್ತ ತಿದ್ದುಪಡಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಉಡುಪಿ ಹೋಬಳಿ ಮಟ್ಟದ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ದಾಖಲೆಗಳಲ್ಲಿದ್ದ ದೋಷಗಳನ್ನು ಸರಿ ಪಡಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.