ಉಡುಪಿ: ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರ ಮಾಸಿಕ ಗೌರವ ಧನವನ್ನು ಹೆಚ್ಚಳ ಮಾಡದಿ ರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿ ಯರ ಸಂಘದ ಸದಸ್ಯರು ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
2011–12ನೇ ಸಾಲಿನ ಬಜೆಟ್ನಲ್ಲಿ ಅಂದಿನ ಯುಪಿಎ ಸರ್ಕಾರ ಅಂಗವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರ ಗೌರವ ಧನವನ್ನು ₹1500 ಹಾಗೂ ₹750 ಹೆಚ್ಚಳ ಮಾಡಿತ್ತು. ಅಲ್ಲಿಂದ ಇಲ್ಲಿಯ ವರೆಗೂ ಗೌರವ ಧನವನ್ನು ಕೇಂದ್ರ ಸರ್ಕಾರ ಹೆಚ್ಚು ಮಾಡಿಲ್ಲ. ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಪರಿಸ್ಥಿತಿ ಇದ್ದು ಸಂಕಷ್ಟ ಎದುರಿಸುವಂತಾಗಿದೆ. ನಮ್ಮ ಬಗ್ಗೆ ಸರ್ಕಾರ ಕಾಳಜಿ ವಹಿಸದಿರುವುದು ಖಂಡನೀಯ ಎಂದು ಪ್ರತಿಭಟನಾ ಕಾರರು ಹೇಳಿದರು.
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಲೀಲಾವತಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ ನಡೆ ಯುವ ಕಾರ್ಯಕ್ರಮ ಇದಾಗಿದೆ. ವಿವಿಧ ಕಾರ್ಯಕ್ರಮಗಳಿಗೆ ನಮ್ಮ ಸೇವೆ ಪಡೆ ಯುವ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ರಾಜ್ಯ ಸರ್ಕಾರವೂ ನಮ್ಮ ಬೇಡಿಕೆಗಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಹಲವು ಭಾಗ್ಯಗಳನ್ನು ಕರುಣಿಸಿರುವ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆ ಯರ ಬೇಡಿಕೆಗಳಿಗೆ ಸ್ಪಂದಿಸದಿರುವುದು ಖೇದಕರ ಎಂದರು.
ಕನಿಷ್ಠ ₹18 ಸಾವಿರ ವೇತನ ಜಾರಿ ಮಾಡಬೇಕು, ₹3 ಸಾವಿರ ಪಿಂಚಣಿ ನೀಡಬೇಕು, ಇಎಸ್ಐಪಿಎಫ್ ಹಾಗೂ ಗ್ರಾಚ್ಯುಯಿಟಿ ಯೋಜನೆಯನ್ನು ಜಾರಿ ಮಾಡಬೇಕು, ಅನಾರೋಗ್ಯಕ್ಕೀಡಾದ ವರಿಗೆ ಒಂದು ತಿಂಗಳ ಗೌರವ ಧನ ಸಹಿತ ರಜೆ ನೀಡಬೇಕು, ಪ್ರಭಾರ ಭತ್ಯೆ ಹಾಗೂ ಸೇವಾ ಹಿರಿಯತವನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಉಡುಪಿ ತಾಲ್ಲೂಕು ಘಟಕದ ಅಧ್ಯಕ್ಷೆ ಲೀಲಾ, ಕಾರ್ಯದರ್ಶಿ ಜಯಂತಿ, ಉಪಾಧ್ಯಕ್ಷೆ ಶಶಿಕಲಾ, ಜಂಟಿ ಕಾರ್ಯದರ್ಶಿ ಶಕುಂತಲಾ, ಕೋಶಾಧಿಕಾರಿ ಗೀತಾ ಇದ್ದರು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಕಾರ್ಕಳ: ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದಿದೆ. ಈ ಬಾರಿಯ ಬಜೆಟ್ ನಲ್ಲೂ ಅಂಗನವಾಡಿ ಕಾರ್ಯಕರ್ತೆ ಯರ ಗೌರವ ಧನ ಹೆಚ್ಚಳ ಮಾಡಿಲ್ಲ ಎಂದು ಆರೋಪಿಸಿ ಕಾರ್ಕಳದಲ್ಲಿ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಮುಂದಿನ ದಿನಗಳಲ್ಲಿ ಗೌರವ ಧನ ಹೆಚ್ಚಳ ಮಾಡುವುದರ ಜತೆಗೆ ಇನ್ನಿತರ ಬೇಡಿಕೆಗಳಾದ ತುರ್ತಾಗಿ ಕನಿಷ್ಠ ವೇತನ ₹ 18 ಸಾವಿರ ಜಾರಿ ಮಾಡುವುದು, ₹ 3ಸಾವಿರದ ಮಾಸಿಕ ಪಿಂಚಣಿ ಯೋಜನೆ ರೂಪಿಸುವುದು, ಇ.ಎಸ್.ಐ., ಪಿ.ಎಫ್ ಗ್ರಾಚ್ಯುಟಿ ಯೋಜನೆಗಳನ್ನು ಜಾರಿಗೊಳಿಸುವುದು.
ತುರ್ತಾಗಿ ಇ.ಎಸ್.ಐ ಜಾರಿ, ಅನಾರೋಗ್ಯಕ್ಕೆ ಒಳಗಾದವರಿಗೆ ಕನಿಷ್ಠ ಒಂದು ತಿಂಗಳ ಗೌರವ ಧನ ಸಹಿತ ರಜೆ ನೀಡುವುದು. ಪ್ರಭಾರ ಭತ್ಯೆ, ಡಿ.ಎ ಸೇವಾ ಹಿರಿತನವನ್ನು ಪರಿಗಣಿಸುವುದು ಸೇರಿದಂತೆ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾರ್ಯಕರ್ತೆಯರು ತಹಶೀಲ್ದಾರ್ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.
ಕಾರ್ಯರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಪದ್ಮಾವತಿ, ಕಾರ್ಯದರ್ಶಿ ಮಲ್ಲಿಕಾ, ಜತೆ ಕಾರ್ಯದರ್ಶಿ ಶಾಲಿನಿ ಸೇರಿ ದಂತೆ ನೂರಾರು ಕಾರ್ಯಕರ್ತೆ ಯರು ಭಾಗವಹಿಸಿದ್ದರು.
*
ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಅಂಗನವಾಡಿ ಕೇಂದ್ರ ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಲೀಲಾವತಿ,
ಸಂಘಟನೆಯ ರಾಜ್ಯ ಉಪಾಧ್ಯಕ್ಷೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.