ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸ್ಮರಿಸುವ ‘ಸುರಪುರ ವಿಜಯೋತ್ಸವ’

ಭೀಮರಾಯನಗುಡಿಯ ಸಂಶೋಧನಾ ಕೇಂದ್ರದಿಂದ ಕಾರ್ಯಕ್ರಮ ಆಯೋಜನೆ
Last Updated 8 ಫೆಬ್ರುವರಿ 2017, 7:39 IST
ಅಕ್ಷರ ಗಾತ್ರ

ಶಹಾಪುರ: ಸುರಪುರ ಸಂಸ್ಥಾನವು ಎರಡು ಕಾರಣಕ್ಕಾಗಿ ದೇಶದ ಭೂಪಟದಲ್ಲಿ ಗಮನ ಸೆಳೆದಿದೆ. ಮೊದನೆಯದು ದೆಹಲಿ ಸಾಮ್ರಾಟ್ ಔರಂಗಜೇಬನನ್ನು ಕ್ರಿ.ಶ 1705ರಲ್ಲಿ ಸುರಪುರದ ಮೇಲೆ ದಾಳಿ ಮಾಡಿದಾಗ ಅಂದಿನ ರಾಜಾ ಪಿತಂಬರಿ ಬಹರಿ ಪಿಡ್ಡ ನಾಯಕ ಯುದ್ಧದಲ್ಲಿ ಸೋಲಿಸಿದ್ದು. ಎರಡನೇಯದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವವನ್ನು ರಾಜಾ ವೆಂಕಟಪ್ಪ ನಾಯಕ ವಹಿಸಿ ಬ್ರಿಟಿಷರ ವಿರುದ್ಧ ತಾಯಿನಾಡಿಗಾಗಿ ಹೋರಾಟ ನಡೆಸಿದ್ದು.

ಹೋರಾಟದ ರೋಚಕ ಕಥನದ ಭಾಗವಾಗಿ ಗತಕಾಲದ ನೆನಪಿನಲ್ಲಿ ವರ್ತಮಾನದ ರೂಪದಲ್ಲಿ ಭವಿಷ್ಯದ ಹೆಜ್ಜೆ ಇಡುವ ಉದ್ದೇಶದಿಂದ ದಶಕ ದಿಂದ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರವು ‘ಸುರಪುರ ವಿಜಯೋತ್ಸವ ಕಾರ್ಯಕ್ರಮ’ ಹಮ್ಮಿಕೊಳ್ಳುತ್ತಾ ಬಂದಿದೆ.

ಸುರಪುರ ಸಂಸ್ಥಾನದಲ್ಲಿ 1656ರಿಂದ1858ರವರೆಗೆ ಅಂದರೆ 202ವರ್ಷಗಳ ಕಾಲ ಗೋಸಾಲ ವಂಶದ 13 ಮಹಾರಾಜರು ರಾಜ್ಯಭಾರ ಮಾಡಿದ್ದಾರೆ. ಸಂಸ್ಥಾನದ ಸಮಗ್ರ ಮಾಹಿತಿಯನ್ನು ಕಲೆ ಹಾಕುವ ಕಾರ್ಯವನ್ನು ಸಂಶೋಧನಾ ಕೇಂದ್ರವು ನಿರಂತರವಾಗಿ ಮಾಡುತ್ತಿದೆ. ಸಂಸ್ಥಾನಕ್ಕೆ ಸಂಬಂಧಿಸಿದ ಹೊರಬಂದ ಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ.

ಅವುಗಳಲ್ಲಿ ಮುಖ್ಯವಾಗಿ ಮೆಡೋಸ್ ಟೇಲರ್ ರಚಿಸಿದ ‘ಸ್ಟೋರಿ ಆಫ್ ಮೈ ಲೈಫ್’(1882), ವಿ.ಡಿ. ಸಾವರಕರ್ ಬರೆದ 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಜಾದುನಾಥ ಸರ್ಕಾರ ಬಿಡುಗಡೆ ಮಾಡಿದ ‘ಹಿಸ್ಟರಿ ಆಫ್ ಔರಂಗಜೇಬ’(1930), ವಿ.ಡಿ. ದೇವರಕರ್ ರಚಿಸಿದ ಸದರನ್ ಇಂಡಿಯಾ 1857(1993). ದೇಸಾಯಿ ಪಾಂಡುರಂಗ ಬರೆದ ‘ಮದಗಜ ಮಲ್ಲ’ (1948),

ಶಿವರಾಮ ಬರೆದ ಕನ್ನಡದ ಕಲಿಗಳು(1967), ರೇವಣಸಿದ್ದಯ್ಯ ರುದ್ರಸ್ವಾಮಿ ಮಠ ಅವರು ರಚಿಸಿದ ‘ಸುರಪುರದ ಸಂಗೊಳ್ಳಿ ರಾಯಣ್ಣ’ (1975), ಜಯತೀರ್ಥ ರಾಜಪುರೋಹಿತ ಬರೆದ ಸುರಪುರದ ಶೂರ ನಾಯಕರು, ಕಪಟರಾಳ ಕೃಷ್ಣರಾವ್ ಬರೆದ ‘ಸುರಪುರ ಸಂಸ್ಥಾನ’,

ಭಾಸ್ಕರ ರಾವ್ ಬರೆದ ‘ಮರೆತುಹೋದ ಸುರಪುರದ ಇತಿಹಾಸ’, ಖ್ಯಾತ ನಾಟಕಕಾರ ಎಲ್‌ಬಿಕೆ ಆಲ್ದಾಳರು ಬರೆದ ‘ಸುರಪುರ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ರಾಜಾ ವೆಂಕಟಪ್ಪ ನಾಯಕ’ ಹೀಗೆ ಹಲವಾರು ಮಹತ್ವ ಕೃತಿಗಳು ಸಂಗ್ರಹಿಸಲಾಗಿದೆ

‘ಇನ್ನೂ ಸಂಶೋಧನೆಯ ವಿವಿಧ ಮಗ್ಗಲುಗಳ ಶೋಧ ನಡೆದಿವೆ’ ಎನ್ನುತ್ತಾರೆ ಸಂಶೋಧನಾ ಕೇಂದ್ರ ಸಂಚಾಲಕ ಭಾಸ್ಕರರಾವ ಮುಡಬೂಳ.
ಆಸ್ಟ್ರೇಲಿಯಾದ ಪರ್ಥ್‌ ವಿಶ್ವವಿ ದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಪ್ರತಿಕ ಮುಖರ್ಜಿ ನೇತೃತ್ವದಲ್ಲಿ ಸುರಪುರ ಸಂಸ್ಥಾನ ಹಾಗೂ ಕಲೆ ಬಗ್ಗೆ ಎರಡು ಸಾಕ್ಷ್ಯಚಿತ್ರಗಳು ಬಂದಿವೆ. ಬ್ರಿಟಿಷ್ ಅಧಿಕಾರಿ ಮೆಡೋಸ್ ಟೇಲರ್ ಮರಿಮೊಮ್ಮಗ ಅಲ್ಬರ್ಟೋ ಟೇಲರ್ 2012ರಲ್ಲಿ ಸುರಪುರ ಸಂಸ್ಥಾನಕ್ಕೆ ಭೇಟಿ ನೀಡಿದ್ದರು.

ಸುರಪುರ ಸಂಸ್ಥಾನದ ಆಳ್ವಿಕೆಯಲ್ಲಿ ಜಾತಿ, ಧರ್ಮದ ಬಗ್ಗೆ ಕಿಂಚತ್ತು ಭೇದ ಭಾವ ಇರಲಿಲ್ಲ. 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ್ ವಿರುದ್ಧ ಹಿಂದೂ– ಮುಸ್ಲಿಮರು ಜೊತೆಗೂಡಿ ಹೋರಾಟ ನಡೆಸಿ ಅಪ್ರತಿಮ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.

ಇದಕ್ಕೆ ನಿದರ್ಶನ ಎನ್ನುವಂತೆ 300ವರ್ಷಗಳಿಂದ ಮುಸ್ಲಿಂ ಸಮುದಾ ಯದವರು ರಂಜಾನ್ ಹಾಗೂ ಬಕ್ರೀದ್ ಹಬ್ಬದಂದು ಪ್ರಾರ್ಥನೆ ಮಾಡಲು ದರ್ಗಾಕ್ಕೆ ತೆರಳುವಾಗ ಸಂಸ್ಥಾನದ ಅರಮನೆಯಿಂದ ಪಲ್ಲಕ್ಕಿಯಲ್ಲಿ ಪಟ್ಟಗತ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಬರುವ ಸಂಪ್ರದಾಯವಿದೆ. ಈ ಸಂಪ್ರದಾಯ ಹಿಂದೂ ಮುಸ್ಲಿಂರ ಭಾವೈಕ್ಯದ ಸಂಕೇತ ಎನ್ನುತ್ತಾರೆ ಭಾಸ್ಕರರಾವ ಮುಡಬೂಳ.

ನಾವು ಯುವಕರಿಗೆ ಸುರಪುರ ಸಂಸ್ಥಾನದ ಇತಿಹಾಸದ ಪರಿಚಯದ ಜತೆಗೆ ಹುತಾತ್ಮರಿಗೆ ಗೌರವ ಸೂಚಿಸುವ ಹೊಣೆಯು ನಮ್ಮ ಮೇಲಿದೆ ಎನ್ನುತ್ತಾರೆ ಸಂಸ್ಥಾನದ ಅಭಿಮಾನಿಗಳು.
-ಟಿ.ನಾಗೇಂದ್ರ

*
1857ರ ಸಂಗ್ರಾಮದಲ್ಲಿ ವಿವಿಧ ಸಂಸ್ಥಾನಗಳ ರಾಜರು ಹೋರಾಟ ನಡೆಸಿದ್ದ 12 ಸಂಸ್ಥಾನಗಳ ವಂಶಜರನ್ನು 2012ರಲ್ಲಿ ಒಂದೇ ವೇದಿಕೆಯಲ್ಲಿ ಗೌರವಿಸಿದ್ದೆವು.
-ಭಾಸ್ಕರರಾವ ಮುಡಬೂಳ, ಸಂಶೋಧನಾ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT