ಸೋಮವಾರಪೇಟೆ: ವಿದ್ಯಾರ್ಥಿಗಳು ಭಯ, ಸೋಮಾರಿತನ, ಅಶಿಸ್ತಿನಿಂದ ದೂರವಿರಬೇಕು. ಆತ್ಮವಿಶ್ವಾಸ, ಶಿಸ್ತು, ಕಲಿಕೆಯೊಂದಿಗೆ ಸಿದ್ಧತೆ ಮಾಡಿಕೊಂಡಲ್ಲಿ ಯಾವುದೇ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಹುದು ಎಂದು ಮೂಡಬಿದಿರೆ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಯುವರಾಜ್ ಹೇಳಿದರು.
ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ, ಮಂಗಳವಾರ ಪಟ್ಟಣದ ವಿವಿಧ ಶಾಲೆಗಳ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪರೀಕ್ಷೆಗೆ ಸಿದ್ಧತೆ’ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಗಣಿತ, ಇಂಗ್ಲಿಷ್ ಸೇರಿದಂತೆ ಎಲ್ಲ ವಿಷಯಗಳನ್ನು ವಿದ್ಯಾರ್ಥಿಗಳು ಕಲಿಕೆಗೆ ಮುಂದಾಗಬೇಕು. ಅಸಾಧ್ಯ ಎಂಬ ಪದವನ್ನು ವಿದ್ಯಾರ್ಥಿಗಳು ತಮ್ಮ ಮನಸ್ಸಿನಿಂದ ಹೊರಗಿಡಬೇಕು. ವಿದ್ಯಾರ್ಥಿಗಳ ಸಮಸ್ಯೆಗೆ ಉಪಯುಕ್ತ ಸಲಹೆಗಳನ್ನು ಶಿಕ್ಷಕರು ನೀಡಲು ಸಾಧ್ಯ. ವಿದ್ಯಾರ್ಥಿಗಳಿಗೆ 6ಗಂಟೆಗಳ ನಿದ್ರೆ ಆರೋಗ್ಯಕರ, ಬೆಳಗ್ಗಿನ ಕಲಿಕೆ ಉತ್ತಮ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಪದಾಧಿಕಾರಿಗಳಾದ ಲಿಂಗರಾಜು, ರೇಣುಕ, ನಂದಕುಮಾರ್, ಪ್ರಕಾಶ್, ಶಿಕ್ಷಣ ಇಲಾಖೆಯ ರಾಮಚಂದ್ರ ಮೂರ್ತಿ, ಬಿಟಿಸಿಜಿ ಪಿಯು ಕಾಲೇಜಿನ ಪಾಂಶುಪಾಲ ಬಾಲಕೃಷ್ಣ, ಮುಖ್ಯ ಶಿಕ್ಷಕಿ ಮಿಲ್ಗ್ರೆಡ್ ಗೋನ್ಸಾಲ್ವೆಸ್ ಇದ್ದರು.