ಕುಶಾಲನಗರ: ಕುಶಾಲನಗರ ಯೋಜನಾ ಪ್ರಾಧಿಕಾರ ವ್ಯಾಪ್ತಿ ಕಾವೇರಿ ನದಿ ಪಾತ್ರದಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ನದಿ ಕಲುಷಿತಗೊಳಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂದು ಕೂಡಾ ಅಧ್ಯಕ್ಷ ಮಂಜುನಾಥ್ ಗುಂಡೂರಾವ್ ಹೇಳಿದರು.
ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ನಿಸರ್ಗಧಾಮ ಹಾಗೂ ಅಸುಪಾಸಿನ ಕಾವೇರಿ ದಂಡೆಗಳಿಗೆ ಮಂಗಳವಾರ ಕೂಡಾ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಭೇಟಿ ಪರಿಶೀಲನೆ ನಡೆಸಿದರು.
ಬೊಳ್ಳೂರು ಕಡೆಯಿಂದ ಕಲುಷಿತ ನೀರು ಹರಿದು ಬರುತ್ತಿರುವುದನ್ನು ಪರಿಶೀಲಿಸಿದ ಅವರು ಕಲುಷಿತ ನೀರು ನೇರವಾಗಿ ನದಿ ಸೇರದಂತೆ ಸಂಬಂಧಪಟ್ಟ ಹೋಟೆಲ್ ಮಾಲೀಕರಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕಾವೇರಿ ಸಂರಕ್ಷಣೆ ಬಗ್ಗೆ ಎಲ್ಲರಿಗೂ ಜಾಗೃತಿ ಬಂದಿದೆ. ಈ ಹಿನ್ನೆಲೆಯಲ್ಲಿ ನದಿ ನೀರನ್ನು ಕಲ್ಮಷಗೊಳಿಸುವಂತೆ ಘಟನೆಗಳು ಕಡಿಮೆಯಾಗುತ್ತಿವೆ.
ಮುಂದಿನ ಬೇಸಿಗೆಯಲ್ಲಿ ಕಾವೇರಿ ನೀರು ಕ್ಷೀಣಿಸುವುರಿಂದ ಯಾವುದೇ ಕಾರಣಕ್ಕೂ ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ತ್ಯಾಜ್ಯ ಹಾಗೂ ಕಲುಷಿತ ನೀರನ್ನು ನೇರವಾಗಿ ಹಾಕದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಪ.ಪಂ.ಮಾಜಿ ಸದಸ್ಯ ಬಿ.ಎ.ಅಬ್ದುಲ್ ಖಾದರ್, ಕೂಡಾ ಕಾರ್ಯದರ್ಶಿ ರಾಜಶೇಖರ್, ಕಂದಾಯ ಅಧಿಕಾರಿ ನಂದಕುಮಾರ್ ಇತರರು ಹಾಜರಿದ್ದರು.