ಚನ್ನರಾಯಪಟ್ಟಣ: ನಾಟಕಗಳು ನೈತಿಕ ಶಿಕ್ಷಣ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನೆರವಾಗಲಿವೆ ಎಂದು ಕಲಾವಿದ ನಂಜುಂಡ ಮೈಮ್ ಸೋಮವಾರ ಹೇಳಿದರು.
ಪಟ್ಟಣದಲ್ಲಿ ನಿರಂತರ ಕಲಾವಿದರ ತಂಡದ ಏರ್ಪಡಿಸಿದ್ದ ‘ರಂಗಹಬ್ಬ’ದಲ್ಲಿ ಅವರು, ‘ರಂಗಭೂಮಿ ನಾಯಕತ್ವ ಗುಣ ಬೆಳೆಸಲಿದೆ. ನಾಟಕಗಳು ಸಮಾಜದಲ್ಲಿನ ಅಂಕುಡೊಂಕು ತಿದ್ದುವ ಶಕ್ತಿ ಪಡೆದಿವೆ’ ಎಂದು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಬಯಲುರಂಗಮಂದಿರ ನಿರ್ಮಾಣ ಕಾಮಗಾರಿ ಕುಂಠಿತವಾಗಿದೆ. 3–4 ತಿಂಗಳಲ್ಲಿ ಕಾಮಗಾರಿ ಮುಗಿದರೆ ಅನುಕೂಲ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಕೋರಿದರು.
ಸ್ಥಳೀಯ ಕಲಾವಿದರು ಆಯೋಜಿಸುವ ನಾಟಕೋತ್ಸವಕ್ಕೆ ಪುರಸಭೆ ಆರ್ಥಿಕ ನೆರವು ನೀಡಿ ಉತ್ತೇಜನ ನೀಡಬೇಕು ಎಂದು ಆಗ್ರಹ ಪಡಿಸಿದರು.
ರಾಜ್ಯ ನಾಟಕ ಅಕಾಡೆಮಿ ಮಾಜಿ ಸದಸ್ಯ ಡಾ. ಚಂದ್ರುಕಾಳೇನಹಳ್ಳಿ, ಕಲಾವಿದ ಎಚ್.ಎನ್. ಲಕ್ಷ್ಮಿ ನರಸಿಂಹ ಮೂರ್ತಿ ಮಾತನಾಡಿದರು.
ಸನ್ಮಾನ: ಕಲಾವಿದರಾದ ಮೋಹನ್ ಮಟ್ಟನವಿಲೆ, ಎಚ್.ಎನ್. ಲಕ್ಷ್ಮೀನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಹರೀಶ್ ಛಲವಾದಿ, ಎ.ಎಂ. ಜಯರಾಂ ಇದ್ದರು.
ಎ.ಜಿ. ರಾಜು ಸ್ವಾಗತಿಸಿದರೆ, ಜಿ.ಆರ್. ಮೋಹನ್ ವಂದಿಸಿದರು. ಪ್ರತಿಮಾ ಟ್ರಸ್ಟ್ ಕಲಾವಿದರು ಗೀತಗಾಯನ ನಡೆಸಿಕೊಟ್ಟರು. ನೀನಾಸಂ ತಿರುಗಾಟ ಕಲಾವಿದರು ‘ಕಾಲಂದುಗೆಯ ಕಥೆ’ ನಾಟಕ ಅಭಿನಯಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.