ಹಾಸನ: ದಡಾರ ಮತ್ತು ರುಬೆಲ್ಲಾ ಲಸಿಕೆಯನ್ನು 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ಹಾಕಿಸುವ ಮೂಲಕ ಜಿಲ್ಲೆಯನ್ನು ದಡಾರ ಮತ್ತು ರುಬೆಲ್ಲಾ ಮುಕ್ತ ಮಾಡಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ವಿ.ಚೈತ್ರಾ ಕೋರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಗರದ ವಾಣಿವಿಲಾಸ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಈ ಲಸಿಕೆ ಹಾಕಿಸುವುದರಿಂದ ಮಕ್ಕಳ ಅರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ. ಜನ ವದಂತಿಗೆ ಅವಕಾಶ ಕೊಡದೆ ತಮ್ಮ ಮಕ್ಕಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಮನವಿ ಮಾಡಿದರು.
ಪೋಲಿಯೊ ಮುಕ್ತ ಭಾರತ ಮಾಡಿದಂತೆ ದಡಾರ ಮತ್ತು ರುಬೆಲ್ಲಾ ಮುಕ್ತ ಭಾರತ ಮಾಡಲು ಸಹಕರಿಸಬೇಕು. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಪೋಷಕರು, ಸಮಾಜದ ಜವಾಬ್ದಾರಿ ಇದೆ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟೇಶ್ ಕುಮಾರ್, ಜಿಲ್ಲೆಯಲ್ಲಿ 3,72,687 ಮಕ್ಕಳಿಗೆ ಲಸಿಕೆಯನ್ನು ನಿಗದಿತ ಸ್ಥಳಗಳಲ್ಲಿ ನೀಡಲಾಗುತ್ತದೆ ಎಂದರು.
ದಡರಾ, ರುಬೆಲ್ಲಾ ಯಶಸ್ಸಿಗೆ ಶಾಲಾ ಶಿಕ್ಷಕರು ಮತ್ತು ಅಂಗನವಾಡಿ ಶಿಕ್ಷಕರ ಸಹಕಾರ ಬಹುಮುಖ್ಯ. ಶೇಕಡಾ ನೂರರಷ್ಟು ಪ್ರಗತಿ ಸಾಧಿಸಲು ಎಲ್ಲರು ಸಹಕಾರ ನೀಡಬೇಕು ಎಂದು ಅವರು ಕೋರಿದರು..
ಜಿಲ್ಲೆಗೆ ವಲಸೆ ಬಂದ ಕುಟುಂಬದ ಮಕ್ಕಳಿಗೆ ಲಸಿಕೆ ತಪ್ಪಿ ಹೋಗದಂತೆ ನಿಗಾವಹಿಸಿ ಲಸಿಕೆ ನೀಡಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಡಾ.ಎಚ್.ಎಸ್. ಅನಿಲ್ ಕುಮಾರ್, ಪೋಲಿಯೊ ಮುಕ್ತ ಭಾರತ