ಬೆಳಗಾವಿ: ಗ್ರಾಮೀಣ ಜನರು ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದರೂ, ಅಧಿಕಾರಿಗಳು ಉದ್ಯೋಗ ಸೃಷ್ಟಿಸುತ್ತಿಲ್ಲ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸದಸ್ಯರು ಆರೋಪಿಸಿದರು.
ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಮಂಗಳವಾರ ಜಮಾಯಿಸಿದ ಸಂಘಟನೆಯ ನೂರಾರು ಕಾರ್ಮಿಕರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬೆಳಗಾವಿ ತಾಲ್ಲೂಕಿನ ನರೇಗಾ ಯೋಜನೆ ಅಧಿಕಾರಿಗಳು ದೂರದ ಊರಿನಲ್ಲಿ ಕಾಮಗಾರಿ ಹಮ್ಮಿಕೊಂಡು, ಅಲ್ಲಿಗೆ ತೆರಳುವಂತೆ ಗ್ರಾಮಸ್ಥರನ್ನು ಪ್ರೇರೇಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ತಾಲ್ಲೂಕಿನ ಬಂಬರಗಾ, ಹೊನಗಾ, ಹಂದಿಗನೂರು, ಕೇದನೂರು, ಅಗಸಗಾ, ದೇವಗಿರಿ, ಜಾಫರವಾಡಿ, ಕಡೋಲಿ, ವಂಟಮೂರಿ, ಸುತಗಟ್ಟಿ ಗ್ರಾಮದ ಕಾರ್ಮಿಕರನ್ನು 40–60 ಕಿ.ಮೀ ದೂರದ ಬಡಾಲ ಅಂಕಲಗಿ ಸೇರಿ ಇತರ ಊರುಗಳಿಗೆ ದುಡಿಯಲು ಕಳಿಸುತ್ತಿರು ವುದು ಸರ್ಕಾರದ ಅಧಿಕೃತ ವಲಸೆ ಯಾಗಿದೆ ಎಂದು ಅವರು ಆರೋಪಿಸಿದರು.
ನರೇಗಾ ಯೋಜನೆಯಲ್ಲಿ ಕೆಲಸ ಕೊಡುತ್ತಿಲ್ಲ, ಕಾರ್ಮಿಕರು ಮಾಡಿದ ಕೆಲಸವನ್ನು ಅಧಿಕಾರಿಗಳು ನಿತ್ಯ ಬಂದು ಪರಿಶೀಲಿಸಿ ಅಳತೆ ಮಾಡುವುದಿಲ್ಲ. ಬೇಕಾಬಿಟ್ಟಿ ಅಳತೆ ಮಾಡುತ್ತಿರುವು ದರಿಂದ ಕಾರ್ಮಿಕರಿಗೆ ಅನ್ಯಾಯವಾಗು ತ್ತಿದೆ. ಕಡಿಮೆ ಕೂಲಿ ಹಣ ಹಾಕುತ್ತಿದ್ದಾರೆ. ಇತರ ಕಡೆ ವೇತನ ಕೂಡ ನೀಡುತ್ತಿಲ್ಲ. ಬಂಬರಗಾದಲ್ಲಿ ಕೆಲಸ ಮಾಡಿದರೂ ಎರಡು ತಿಂಗಳಿಂದ ಕೆಲಸದ ಅಳತೆ ಮಾಡಲು ಎಂಜಿನಿಯರ್ಗಳು ಬಂದಿಲ್ಲ ಎಂದು ದೂರಿದರು.
ಯಾವ ಕಾರ್ಮಿಕನಿಗೂ ಸರ್ಕಾರದ ನಿಯಮದಂತೆ ನಿತ್ಯ ₹ 203.60 ವೇತನ ಕೊಡುತ್ತಿಲ್ಲ. ಗ್ರಾಮ ಪಂಚಾಯ್ತಿಯವರು ವರ್ಷಕ್ಕೆ 150 ದಿನದ ಬದಲು ಕೇವಲ 100 ದಿನ ಉದ್ಯೋಗ ಕೊಡುತ್ತಿದ್ದಾರೆ ಎಂದು ದೂರಿದರು. ಇಂಥ ಅನೇಕ ಆವಾಂತರಗಳಿಂದ ಉದ್ಯೋಗ ಖಾತ್ರಿ ಯೋಜನೆ ನಿರುಪ ಯೋಗವಾಗಿದೆ. ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.