ಬಳ್ಳಾರಿ: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಅಂಗವಾಗಿ ಫೆ.10ರಂದು ಜಿಲ್ಲೆಯದ್ಯಾಂತ 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬಂಡಜೋಲ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂಗನವಾಡಿ ಹಾಗೂ ಶಾಲೆ ಕಾಲೇಜುಗಳಲ್ಲಿ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು. ಅಂದು ಮಾತ್ರೆ ಪಡೆಯದ ಮಕ್ಕಳಿಗೆ 16ರಂದು ತಪ್ಪದೆ ನುಂಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ರಮೇಶಬಾಬು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 2,314 ಅಂಗನವಾಡಿ ಕೇಂದ್ರಗಳು, 1,503 ಪ್ರಾಥಮಿಕ ಶಾಲೆಗಳು, 292 ಪ್ರೌಢ ಶಾಲೆಗಳು ಹಾಗೂ 63 ಪದವಿಪೂರ್ವ ಕಾಲೇಜುಗಳಲ್ಲಿ ಏಕಕಾಲಕ್ಕೆ ಮಾತ್ರೆ ವಿತರಿಸ ಲಾಗುವುದು ಎಂದು ಹೇಳಿದ್ದಾರೆ.
ಜಂತುಹುಳುವಿನಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಹಸಿವು ಅಗದಿರುವುದು. ನಿಶ್ಯಕ್ತಿ, ಹೊಟ್ಟೆ ನೋವು, ವಾಂತಿ ಭೇದಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವ ಸಮಸ್ಯೆಗಳು ಕಂಡು ಬರುತ್ತವೆ. ಮಾತ್ರೆಯನ್ನು ನುಂಗುವುದರಿಂದ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದಿದ್ದಾರೆ.
ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು. ಆಹಾರ ಪದಾರ್ಥ ಮುಚ್ಚಿಡಬೇಕು. ಬಯಲು ಶೌಚಾಲಯ ಪದ್ಧತಿಯನ್ನು ಬಿಡಬೇಕು ಎಂದು ಸಲಹೆ ನೀಡಿದ್ದಾರೆ.