‘ರಂಗಭೂಮಿ ಒಂದು ಬಾಸ್ಟರ್ಡ್ ಆರ್ಟ್’.
ಹೀಗೆಂದು ಹೇಳಿದವರು ಯಾರೋ ರಂಗದ್ವೇಷಿಯಲ್ಲ. ಅದು ರಂಗಭೂಮಿಯನ್ನು ತೆಗಳಲು ಬಳಸಿದ ಬೈಗುಳವೂ ಅಲ್ಲ. ಕನ್ನಡದ ಖ್ಯಾತ ರಂಗಕರ್ಮಿ ಬಿ.ವಿ. ಕಾರಂತರು ರಂಗಭೂಮಿಯನ್ನು ಹೀಗೆ ವ್ಯಾಖ್ಯಾನಿಸಿದ್ದರು. ಅವರ ಈ ವ್ಯಾಖ್ಯಾನಕ್ಕೆ ತಕ್ಕ ಸಮರ್ಥನೆಯೂ ಇತ್ತು.
ಜಗತ್ತಿನ ಎಲ್ಲ ನಾಗರಿಕತೆಗಳಿಗೂ ಅವುಗಳದ್ದೇ ಆದ ಸಂಗೀತ, ನಾಟ್ಯ, ವೇಷಾಲಂಕಾರ ಕಲೆಗಳ ಸುದೀರ್ಘ ಪರಂಪರೆಯೇ ಇರುತ್ತದೆ. ನಾಗರಿಕತೆಯ ಜೊತೆಜೊತೆಗೆ ಅವೂ ಬದಲಾಗುತ್ತ ಬೆಳೆಯುತ್ತ ಭಿನ್ನ ರೂಪ ತಾಳುತ್ತ ಬಂದಿರುತ್ತವೆ. ಆದರೆ, ಇಂಥ ಹಲವು ಕಲೆಗಳ ಅನೈತಿಕ (ರೂಢಿಬದ್ಧವಲ್ಲದ ಎಂಬ ಅರ್ಥದಲ್ಲಿ) ಸಂಯೋಗದಿಂದ ಹುಟ್ಟಿದ ಪ್ರದರ್ಶನ ಕಲೆ ನಾಟಕ. ಹೀಗೆ ಹಲವು ಕಲೆಗಳು ಸೇರಿ ರೂಪುಗೊಂಡಿರುವ – ಎಲ್ಲವನ್ನೂ ಒಳಗೊಳ್ಳುವ ಮುಕ್ತಛಂದದ ಸ್ವಭಾವದಿಂದಲೇ ಅದು ಎಂಥ ಸಂದಿಗ್ಧಗಳನ್ನೆಲ್ಲ ಹಾದು ಇಂದಿಗೂ ಜೀವಂತ ಮತ್ತು ಜನಪ್ರಿಯವಾಗಿಯೇ ಉಳಿದುಕೊಂಡು ಬಂದಿದೆ. ರೇಡಿಯೊ, ಸಿನಿಮಾ, ಟೀವಿ, ಅಂತರ್ಜಾಲ ಹೀಗೆ ಹೊಸ ಹೊಸ ಆಕರ್ಷಕ ಮಾಧ್ಯಮಗಳು ಬಂದ ಮೇಲೂ ರಂಗಭೂಮಿ ನಶಿಸಿಹೋಗಲಿಲ್ಲ. ಹಿನ್ನೆಲೆಗೆ ಸರಿಯಲಿಲ್ಲ. ಬದಲಿಗೆ ಆ ಮಾಧ್ಯಮಗಳನ್ನೇ ತನ್ನ ವಿಸ್ತಾರಕ್ಕೆ ವೇದಿಕೆಯಾಗಿ ಬಳಸಿಕೊಂಡು ಬೆಳೆದು ಇನ್ನಷ್ಟು ಸಮೃದ್ಧವಾಗಿದೆ.
ಕಾರಂತರು ರಂಗಭೂಮಿಯನ್ನು ‘ಬಾಸ್ಟರ್ಡ್ ಆರ್ಟ್’ ಎಂದು ಹೇಳಿದ್ದು ಇದೇ ಅರ್ಥದಲ್ಲಿ. ಆದರೆ ಇದಕ್ಕೆ ಇನ್ನೊಂದು ಆಯಾಮವೂ ಇದೆ. ಆ ಶಬ್ದದಲ್ಲಿನ ಆಶ್ಲೀಲತೆಗೂ ಜನರು ನಾಟಕ ಮತ್ತು ನಾಟಕದ ಜನರನ್ನು ನೋಡುವ ದೃಷ್ಟಿಕೋನಕ್ಕೂ ಇರುವ ಸಂಬಂಧವನ್ನು ಗಮನಿಸಿದರೆ ಅದರ ಇನ್ನೊಂದು ಆಯಾಮ ತೆರೆದುಕೊಳ್ಳುತ್ತದೆ.
ಕೆಲವು ದಶಕಗಳ ಹಿಂದೆ ನಾಟಕ ಮಾಡುವುದು ಎಂದರೆ ಹಳ್ಳಿಗಳಲ್ಲಿ ಜೂಜು, ಮದ್ಯಸೇವನೆಯಂಥದ್ದೇ ಇನ್ನೊಂದು ವ್ಯಸನ ಎಂಬಂತೆ ನೋಡಲಾಗುತ್ತಿತ್ತು. ಹಳ್ಳಿ ನಾಟಕಗಳಲ್ಲಿಯಂತೂ ದೂರದೂರುಗಳಿಂದ ನಟಿಯರನ್ನು ಕರೆಸುವುದೇ ಪಡ್ಡೆ ಹುಡುಗರನ್ನು ಆಕರ್ಷಿಸುವುದಕ್ಕಾಗಿ ಮತ್ತು ಪಾತ್ರಧಾರಿಗಳ ಸಂತೃಪ್ತಿಗಾಗಿ. ರಂಗಭೂಮಿಯಲ್ಲಿರುವ ಹೆಣ್ಣುಮಕ್ಕಳನ್ನಂತೂ ಶೀಲಗೆಟ್ಟವರು ಎಂದೇ ನೋಡುತ್ತಿದ್ದರು. ‘ನಾಟಕ ಮಾಡ್ತಾನೆ’ ಎಂದರೆ ಇರುವ ವ್ಯಂಗ್ಯಾರ್ಥಕ್ಕಿಂತ ತುಚ್ಛವಾಗಿ ನಾಟಕ ಮಾಡುವವರನ್ನು ನೋಡುತ್ತಿದ್ದರು.
ತಮ್ಮ ಮಗ/ಮಗಳು ರಂಗಭೂಮಿ ನಟನಾಗಲಿ ಎಂದು ತಂದೆ ತಾಯಿ ಬಯಸುವ ವಾತಾವರಣವೇ ಇರಲಿಲ್ಲ. ಅದು ಈಗಲೂ ಇಲ್ಲ. ಇದಕ್ಕೆ ಇನ್ನೊಂದು ಆರ್ಥಿಕ ಆಯಾಮವೂ ಇದೆ.
ರಂಗಭೂಮಿ ಹಣಗಳಿಕೆಯ ಮಾಧ್ಯಮವಲ್ಲ. ಅದು ಯಾವತ್ತಿಗೂ ಅರೆಹೊಟ್ಟೆಯ ಕ್ಷೇತ್ರವೇ. ಸಿನಿಮಾ, ಕಿರುತೆರೆಗಳಿಗೆ ಹೋಲಿಸಿದರೆ ಅಲ್ಲಿ ಸಿಗುವ ಜನಪ್ರಿಯತೆಯೂ ಸೀಮಿತವಾದದ್ದು. ಜತೆಗೆ ಅದು ಅಪಾರ ಪರಿಶ್ರಮವನ್ನೂ ತಾಲೀಮನ್ನೂ ಶ್ರದ್ಧೆಯನ್ನೂ ಬೇಡುವ ಕಲೆ. ಸುಲಭಕ್ಕೆ ಒಲಿಯುವಂಥದ್ದಲ್ಲ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ವ್ಯಾವಹಾರಿಕವಾಗಿ ಸಾಗರದಷ್ಟು ಶ್ರಮ ಬೇಡಿ ಸಾಸಿವೆಯಷ್ಟು ಗಳಿಕೆ ನೀಡುವ ಬಡ ಮಾಧ್ಯಮ. ರಂಗಭೂಮಿಯ ಜೀವಂತಿಕೆಯ ಶಕ್ತಿ–ಮಿತಿ ಮತ್ತು ಗುಟ್ಟು ಇರುವುದು ಇಲ್ಲಿಯೇ.
ಈ ವ್ಯಾವಹಾರಿಕ ಮಿತಿಗಳನ್ನೇ ಮುಂದಿಟ್ಟುಕೊಂಡು ‘ರಂಗಭೂಮಿ ನಶಿಸಿಹೋಗುತ್ತಿದೆ. ಹೊಸತನ ಕಾಣುತ್ತಿಲ್ಲ. ಅದು ಕಿರುತೆರೆ ಮತ್ತು ಹಿರಿತೆರೆಗಳಿಗೆ ಹೋಗಲು ಇರುವ ಚಿಮ್ಮುಹಲಗೆಯಾಗಿ ಮಾತ್ರ ಅಸ್ತಿತ್ವದಲ್ಲಿದೆ’ ಎಂದೆಲ್ಲ ಹುಯಿಲೆಬ್ಬಿಸುತ್ತಿರುವವರ ಸಂಖ್ಯೆ ಕಮ್ಮಿಯೇನೂ ಇಲ್ಲ. ಆದರೆ ಇಂದಿನ ಕನ್ನಡ ರಂಗಭೂಮಿಯತ್ತ ಸುಮ್ಮನೇ ಒಮ್ಮೆ ಕಣ್ಣಾಡಿಸಿದರೂ ಸಾಕು, ಇಂಥ ಅನಿಸಿಕೆ ಎಷ್ಟು ಸುಳ್ಳು ಎಂಬುದು ಮನವರಿಕೆಯಾಗುತ್ತದೆ.
ಹಿಂದೆಂದಿಗಿಂತಲೂ ಈಗ ಹೊಸಬರು ರಂಗಭೂಮಿಯ ತೆಕ್ಕೆಯನ್ನರಸಿ ಬರುತ್ತಿದ್ದಾರೆ. ಕರ್ನಾಟಕ ರಂಗಭೂಮಿಯ ಹೊಸಅಲೆಯ ಸುವರ್ಣಯುಗ ಎಂದು ಗುರ್ತಿಸುವ ಕಾಲದಲ್ಲಿ ತಯಾರಾದ ನಾಟಕಗಳಿಗಿಂತ ಹಲವು ಪಟ್ಟು ಹೆಚ್ಚು ನಾಟಕಗಳು ಈಗ ತಯಾರಾಗುತ್ತಿವೆ.
ಪ್ರದರ್ಶನದ ವಿಷಯದಲ್ಲಿಯೂ ಅಷ್ಟೆ. ಹೊಸ ಅಲೆಯ ನಾಟಕ ಮರುಪ್ರದರ್ಶನಗೊಳ್ಳುವುದೇ ದೊಡ್ಡ ಸಾಹಸವಾಗಿತ್ತು. ಆದರೀಗ ನಾಟಕವೊಂದು ನೂರು ಪ್ರಯೋಗ ಕಾಣುವುದು ದೊಡ್ಡ ವಿಷಯವೇ ಅಲ್ಲ. ಅದರರ್ಥ, ರಂಗಭೂಮಿಗೆ ಪ್ರೇಕ್ಷಕರೂ ಹೆಚ್ಚಿದ್ದಾರೆ ಅಂತಲೇ ಅಲ್ಲವೇ?
ಇಂದಿನ ರಂಗಭೂಮಿಯಲ್ಲಿ ‘ಮಾಸ್ಟರ್ ಪೀಸ್’ಗಳು ನಿರ್ಮಾಣವಾಗುತ್ತಿಲ್ಲ ಎಂಬ ಆರೋಪವೂ ಇದೆ. ಹೀಗೆ ಹೇಳುವವರ ಮನಸಲ್ಲಿ ‘ಗೋಕುಲ ನಿರ್ಗಮನ’, ‘ತುಘಲಕ್’, ‘ಸಂಕ್ರಾಂತಿ’ಯಂಥ ಕೆಲವು ರಂಗಕೃತಿಗಳು ಮನಸ್ಸಿನಲ್ಲಿರುತ್ತವೆ. ಇದು ಕೆಲಮಟ್ಟಿಗೆ ನಿಜವೂ ಹೌದು. ಬಿ.ವಿ. ಕಾರಂತರವನ್ನು ಸರಿಗಟ್ಟಬಲ್ಲ ಇನ್ನೊಬ್ಬ ರಂಗನಿರ್ದೇಶಕ; ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರರನ್ನು ಹಿಂದಿಕ್ಕಬಲ್ಲ ಮತ್ತೊಬ್ಬ ನಾಟಕ ರಚನೆಕಾರ ನಮ್ಮ ನಡುವೆ ಹುಟ್ಟಿಕೊಳ್ಳುತ್ತಿಲ್ಲ. ಆದರೆ ಈ ‘ಮಾಸ್ಟರ್ ಪೀಸ್’ ಮಹತ್ವಾಕಾಂಕ್ಷೆ ಬಿಟ್ಟು ನೋಡಿದರೆ ಆ ಮಹಾವೃಕ್ಷದ ಅಡಿಯಲ್ಲಿಯೇ ಚಿಗುರಿ ನಿಂತಿರುವ ನೂರಾರು ಸಸಿಗಳು ರಂಗನೆಲವನ್ನು ವಿಸ್ತರಿಸಿ ಹಸಿರುಗೊಳಿಸಿರುವುದು ಕಣ್ಣಿಗೆ ರಾಚುತ್ತದೆ. ಇದೇನು ಕಡಿಮೆ ಮಹತ್ವದ್ದಲ್ಲ.
ಇಂದಿನ ಕನ್ನಡ ರಂಗಭೂಮಿಯಲ್ಲಿ ಹೊಸ ನೀರು ಹರಿಯುತ್ತಿರುವುದಂತೂ ನಿಜ. ಮತ್ತು ಆ ಹರಿವಿನ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದೂ ಅಷ್ಟೇ ನಿಜ. ಆ ದೃಷ್ಟಿಕೋನದಿಂದ ನೋಡಿದರೆ ಇದೊಂದು ರೀತಿಯಲ್ಲಿ ರಂಗ ಜಾತ್ರೆಯ ಕಾಲ ಎಂದು ಹೇಳಬಹುದು.
ಈ ಜಾತ್ರೆಯಲ್ಲಿ ಹೊಳೆಯುತ್ತ ಆಕರ್ಷಿಸುವ ಎಲ್ಲವೂ ಅಸಲಿಗಳಲ್ಲ, ಹಾಗಿರಬೇಕು ಎಂದು ಬಯಸುವುದೂ ಸರಿಯಲ್ಲವೇನೋ. ಹೊಲದ ಪೈರಂತೂ ದಟ್ಟವಾಗಿ ಬೆಳೆದಿದೆ. ಅದರಲ್ಲಿ ಕೊಂಚ ಜೊಳ್ಳಿರಬಹುದು. ಆ ಜೊಳ್ಳುತನದ ಕಾರಣಗಳನ್ನು ಹುಡುಕಿಕೊಳ್ಳಬೇಕಾದದ್ದೂ ಅವಶ್ಯವೇ. ಆದರೆ ಅದರ ಜತೆಗೇ ಇಂದಿನ ಈ ಹೊಸತನದ ಹುರುಪಿನ ಮೂಲ ಸೆಳೆಗಳನ್ನು ಕಂಡುಕೊಳ್ಳಲು ಯತ್ನಿಸುವುದು ಹೆಚ್ಚು ಸಮಂಜಸವವಾದೀತು.