ಕೆಜಿಎಫ್: ಗುಟ್ಟಹಳ್ಳಿ ( ಬಂಗಾರುತಿರುಪತಿ) ಯ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಶುಕ್ರವಾರ ವೈಭವಯುತವಾಗಿ ನಡೆಯಿತು.
ಮಧ್ಯಾಹ್ನ 1.40 ರ ಸಮಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಾಳೆ ಹಣ್ಣು ಮತ್ತು ದವನವನ್ನು ರಥದ ಕಳಸಕ್ಕೆ ಭಕ್ತರು ಎಸೆಯುತ್ತಿದ್ದಂತೆಯೇ ಗೋವಿಂದ ಗೋವಿಂದ ಎಂದು ಭಕ್ತರು ರಥವನ್ನು ಎಳೆದರು.
ಗುರುವಾರದಿಂದಲೇ ಸುತ್ತಮುತ್ತಲಿನ ಪ್ರದೇಶದಿಂದ ಎತ್ತಿನ ಬಂಡಿ ಮತ್ತಿತರ ವಾಹನಗಳಲ್ಲಿ ಬಂದಿದ್ದ ಸಾವಿರಾರು ಕುಟುಂಬಗಳು ಗುಟ್ಟಹಳ್ಳಿ ದೇವಾಲಯದ ಸುತ್ತಮುತ್ತಲಿನ ಜಾಗದಲ್ಲಿ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿಕೊಂಡಿದ್ದರು. ಬಂಧು ಬಳಗದ ಜತೆಯಲ್ಲಿ ಪೂಜೆ ಸಲ್ಲಿಸಿ, ನಂತರ ಸಾಮೂಹಿಕ ಭೋಜನ ನಡೆಸಿದರು.
ದೇವಾಲಯದಲ್ಲಿ ಕೃಷ್ಣಯ್ಯ ಶೆಟ್ಟಿ ಕುಟುಂಬ ಮತ್ತು ಜಿಲ್ಲಾ ಪಂಚಾಯತಿ ಸದಸ್ಯೆ ನಿರ್ಮಲಾ ಅಂಬರೀಶ್ ಕುಟುಂಬದವರಿಂದ ಭಕ್ತರಿಗೆ ಊಟ,ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಶಾಸಕಿ ವೈ.ರಾಮಕ್ಕ, ಅರುಣ್ಪ್ರಸಾದ್, ಅಶೋಕ್ ಕೃಷ್ಣಪ್ಪ, ಹುಲ್ಕೂರು ಹರಿಕುಮಾರ್, ತಹಶೀಲ್ದಾರ್ ಸತ್ಯಪ್ರಕಾಶ್, ಪೇಷ್ಕಾರ್ ಮರಿರಾಜು ಮತ್ತಿತರರು ಹಾಜರಿದ್ದರು.