ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಸಿಡಿದ ಪನ್ನೀರ್‌

Last Updated 11 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಮೇಲೆ ಪ್ರಭಾವ ಬೀರುವಂತಹ ವರ್ಚಸ್ಸು ಕಾಣುತ್ತಿಲ್ಲ. ಇಡೀ ರಾಜ್ಯದಲ್ಲಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಮೋಹಕ ವ್ಯಕ್ತಿತ್ವವೂ ಇಲ್ಲ. ವಾಗ್ಮಿಯೂ ಅಲ್ಲ, ದಾಳಗಳನ್ನು ಹಾಕಿ, ಪಟ್ಟು ಹಾಕುವ ರಾಜಕೀಯ ಚತುರಮತಿಯೂ ಅಲ್ಲ. ಆದರೂ ಮೂರು ಬಾರಿ ಮುಖ್ಯಮಂತ್ರಿ! ಇದು ತಮಿಳುನಾಡಿನ ಒಟ್ಟಕ್ಕಾರ ಪನ್ನೀರ್‌ ಸೆಲ್ವಂ ಅವರ ಬಗ್ಗೆ ಹೇಳಬಹುದಾದ ಕಿರು ಪರಿಚಯ.

ಓ.ಪನ್ನೀರ್‌ ಸೆಲ್ವಂ ಅಂದ ಕೂಡಲೇ ಥಟ್ಟನೆ ಕಣ್ಣಮುಂದೆ ಬರುವ ಒಂದು ಚಿತ್ರವಿದೆ. ಹಣೆಯ ಮೇಲೆ ಎದ್ದುಕಾಣುವ ವಿಭೂತಿ, ಕುಂಕುಮ, ಕೈಮುಗಿದ ಭಂಗಿಯಲ್ಲಿ ಸದಾ ಜಯಲಲಿತಾ ಅವರ ಮುಂದೆ ಬಾಗಿ ನಿಂತಿರುವ ವಿಧೇಯ ವ್ಯಕ್ತಿ. ಸಮಾರಂಭಗಳಲ್ಲಿ, ಪೋಯಸ್‌ ಗಾರ್ಡನ್‌ನಲ್ಲಿ ಕುರ್ಚಿಯ ಮೇಲೆ ಕುಳಿತಿರುವ ಜಯಾ ಪಾದಗಳಿಗೆ ದೀರ್ಘದಂಡ ಹಾಕುತ್ತಿರುವ ವ್ಯಕ್ತಿ! ಹೀಗೆ ಬೆನ್ನುಬಾಗಿ ನಮಸ್ಕರಿಸಿ, ಹಿನ್ನಡಿಗೆಯಿಂದಲೇ ದೂರ ಸರಿಯುವ ವ್ಯಕ್ತಿ.

ರಾಜರಾಜಚೋಳನ್, ಚೇರನ್, ಪಾಂಡಿಯನ್ ಸಾಮ್ರಾಜ್ಯದ ರಾಜಪರಂಪರೆಯ  ಸಮುದಾಯದವರೆಂದು ಎದೆತಟ್ಟಿ ಹೇಳಿಕೊಳ್ಳುವ ವರ್ಗದಿಂದ ಬಂದ ವ್ಯಕ್ತಿಯ ಸಾರ್ವಜನಿಕ ನಡೆ ಇದುವರೆಗೆ ಈ ರೀತಿ ಇತ್ತು. ಪನ್ನೀರ್‌ ಅವರ ‘ರಾಜಭಕ್ತಿ’ ಎಷ್ಟಿತ್ತೆಂದರೆ ಒಮ್ಮೆ ಜಯಲಲಿತಾ ಅವರು ಬರುತ್ತಿದ್ದ ಹೆಲಿಕಾಪ್ಟರ್ ನೆಲ ಸ್ಪರ್ಶಿಸುವ ಮುನ್ನವೇ ಇವರು ನೆಲದ ಮೇಲೆ ದೀರ್ಘದಂಡ ಹಾಕಿದ್ದರು!

ಏನೇ ಆಗಲಿ, 66 ವರ್ಷದ ಪನ್ನೀರ್‌ ಸೆಲ್ವಂ ವ್ಯಕ್ತಿನಿಷ್ಠೆಗೆ ಒಂದು ಮಾದರಿ. ‘ನಂಬಿಕಸ್ತ’ ಎನ್ನುವ ಪದಕ್ಕೆ ಮತ್ತೊಂದು ಹೆಸರು. ಜಯಲಲಿತಾ ಅವರಿಗೆ ಬೋದಿನಾಯಕನೂರು ಕ್ಷೇತ್ರ ಬಿಟ್ಟುಕೊಡಲೂ ಸಿದ್ಧ, ಕುರ್ಚಿ ಬಿಟ್ಟು ಕೊಡಲೂ ತಯಾರು. ಸದಾ ‘ತ್ಯಾಗಜೀವಿ’ಯಾಗ ಬಯಸುವ ನಂಬಿಕೆಯ ಭಂಟ. ತಾನ್ಸಿ ಭೂ ಹಗರಣದಲ್ಲಿ ಜಯಲಲಿತಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಅವರ ಆಯ್ಕೆ ಪನ್ನೀರ್‌ ಸೆಲ್ವಂ ಆಗಿತ್ತು.

ತಮಿಳುನಾಡಿನ 13ನೇ ಮುಖ್ಯಮಂತ್ರಿಯಾದ ಪನ್ನೀರ್‌, ಈ ಹಂತಕ್ಕೆ ತಮ್ಮನ್ನು ಏರಿಸಿದ ಅಧಿನಾಯಕಿ ಜಯಲಲಿತಾ ಅವರು ಕುಳಿತ ಕುರ್ಚಿಯಲ್ಲೇ ‘ದೈವತ್ವ’ವನ್ನು ಕಂಡರು. ಮುಖ್ಯಮಂತ್ರಿ ಕುರ್ಚಿಯ ಪಕ್ಕ ಮತ್ತೊಂದು ಕುರ್ಚಿ ಹಾಕಿಕೊಂಡು ಕೆಲಸ ನಿರ್ವಹಿಸಿದರು.

ಜಯಲಲಿತಾರ ಕೈಗೊಂಬೆ ಎಂದೇ ಟೀಕಾಸ್ತ್ರಗಳ ಸುರಿಮಳೆಯಾದರೂ ಯಾವುದಕ್ಕೂ ಜಗ್ಗಲಿಲ್ಲ. ಜತನದಿಂದ ಕಾಪಾಡಿದ ಮುಖ್ಯಮಂತ್ರಿ ಪೀಠವನ್ನು ಆರೇ ತಿಂಗಳಿಗೆ ‘ಅಮ್ಮ’ನಿಗೆ ಒಪ್ಪಿಸಿ, ಸಂಪುಟದಲ್ಲಿ ಲೋಕೋಪಯೋಗಿ, ಅಬಕಾರಿ ಮತ್ತು ಕಂದಾಯ ಸಚಿವರಾದರು.

ಪನ್ನೀರ್‌ ಸೆಲ್ವಂ ರಾಜಕೀಯ ಹಾದಿಯಲ್ಲಿ 2014- 15ರಲ್ಲಿ ಮತ್ತೆ ಅದೇ ಘಟನೆ ಪುನರಾವರ್ತನೆಯಾಯಿತು. ಅಕ್ರಮ ಸಂಪತ್ತು ಸಂಗ್ರಹ ಮೊಕದ್ದಮೆಯಲ್ಲಿ ಜಯಲಲಿತಾ ಬಂಧನದಿಂದಾಗಿ ರಾಜೀನಾಮೆ ಕೊಡಬೇಕಾಯಿತು. ಮತ್ತೆ ಮುಖ್ಯಮಂತ್ರಿ ಪಟ್ಟ ಪನ್ನೀರ್‌ ಅವರನ್ನೇ ಹುಡುಕಿಕೊಂಡು ಬಂದಿತು. ಆಗಲೂ ವಿನೀತರಾದ ಅವರು ಜಯಲಲಿತಾ ಪುನರಾಗಮನಕ್ಕಾಗಿ ತಮ್ಮ ಕುರ್ಚಿಯನ್ನು ಖಾಲಿ ಇಟ್ಟು ಪಕ್ಕದಲ್ಲಿ ಕುಳಿತು ಕಾದರು.

ಶರಟಿನ ಜೇಬಿನಲ್ಲಿ ‘ಅಮ್ಮ’ ಅವರ ಭಾವಚಿತ್ರ ಎದ್ದುಕಾಣುವಂತೆ ಇಟ್ಟುಕೊಂಡೇ ಓಡಾಡುವ ಅವರು, ಜಯಾ ಖುಲಾಸೆಯಾಗಿ ಮೇ ತಿಂಗಳಲ್ಲಿ ವಾಪಸು ಬಂದ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ‘ಅಮ್ಮ’ ಅವರಿಗೆ ದಾರಿಬಿಟ್ಟು, ನಾನು ಈ ಕಾಲದ ‘ಭರತ’ ಎಂಬುದನ್ನು ನಿರೂಪಿಸಿದರು.

ಜಯಲಲಿತಾ ನಿಧನರಾದ ನಂತರ ಮತ್ತೆ ಪನ್ನೀರ್‌ ಮುಖ್ಯಮಂತ್ರಿ. ಈ ಬಾರಿ ಜಯಲಲಿತಾ ಅವರ ದೊಡ್ಡ ಭಾವಚಿತ್ರವೊಂದನ್ನು ಟೇಬಲ್ ಮೇಲೆ ಇಟ್ಟುಕೊಂಡೇ ಭಕ್ತಿಯ ಪರಾಕಾಷ್ಠೆ ಮೆರೆದಿದ್ದಾರೆ. ಪನ್ನೀರ್‌ ಸೆಲ್ವಂ ಎಂದರೆ ತಾತ್ಕಾಲಿಕವಾಗಿ ಬಂದು ಹೋಗುವ ಬದಲೀ ಆಟಗಾರ ಎಂದೇ ಎಲ್ಲರೂ ಭಾವಿಸಲು ಮೂರು ಬಾರಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಏರಿ, ಏರಿ ಇಳಿದಿರುವುದೇ ಕಾರಣ. 2006ರ ಚುನಾವಣೆಯಲ್ಲಿ ಎಐಎಡಿಎಂಕೆ ಸೋತಿತು.

ಡಿಎಂಕೆ ಮೇಲಿನ ಸಿಟ್ಟಿನಿಂದಾಗಿ ವಿಧಾನಸಭಾ ಕಲಾಪಕ್ಕೆ ಎಂದೂ ಹಾಜರಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಜಯಲಲಿತಾ, ಪ್ರತಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿದ್ದು ಪನ್ನೀರ್‌ ಅವರನ್ನೇ. ವಿಧಾನಸಭೆಯಲ್ಲಿ ಒಮ್ಮೆ ಗದ್ದಲವಾಗಿ, ಎಐಎಡಿಎಂಕೆಗೆ ಸೇರಿದ ಎಲ್ಲ ಸದಸ್ಯರನ್ನೂ ಸ್ಪೀಕರ್ ಅಮಾನತು ಮಾಡಿದ ನಂತರದ ಬೆಳವಣಿಗೆಯಲ್ಲಿ ಜಯಾ ವಾಪಸು ಅಖಾಡಕ್ಕೆ ಮರಳಿದರು. ಪ್ರತಿಪಕ್ಷದ ನಾಯಕಿಯಾದರು.

ಎರಡೇ ವಾರಗಳಲ್ಲಿ ಪನ್ನೀರ್‌ ಪ್ರತಿಪಕ್ಷದ ನಾಯಕನ ಸ್ಥಾನವನ್ನು ತ್ಯಜಿಸಬೇಕಾಯಿತು. 2016ರ ಡಿಸೆಂಬರ್‌ನಲ್ಲಿ ಮತ್ತೆ ಮೂರನೇ ಬಾರಿ ಮುಖ್ಯಮಂತ್ರಿಯಾದ ಪನ್ನೀರ್‌ ಜನವರಿಯಲ್ಲಿ ‘ಚಿನ್ನಮ್ಮ’ನ ಒತ್ತಡಕ್ಕೆ ಬಾಗಿ, ರಾಜೀನಾಮೆ ಕೊಡಬೇಕಾಯಿತು. ಹೀಗೆ ಅಲ್ಪಕಾಲದ ಅರಸೊತ್ತಿಗೆಯನ್ನು ಅನುಭವಿಸುವ ಭಾಗ್ಯವನ್ನು ಹುಟ್ಟುವಾಗಲೇ ಬರೆಸಿಕೊಂಡು ಬಂದಂತೆ ಕಾಣುವ ಪನ್ನೀರ್‌ ಸೆಲ್ವಂ, ಇದೇ ಮೊದಲ ಬಾರಿಗೆ ‘ಕಣ್ಣೀರ್‌ ಸೆಲ್ವಂ’ ಆಗಿದ್ದಾರೆ.

‘ಅಮ್ಮ’ನಿಗೆ ತೋರಿಸುತ್ತಿದ್ದ ಸ್ವಾಮಿಭಕ್ತಿಯನ್ನು ‘ಚಿನ್ನಮ್ಮ’ನಿಗೂ ವಿಸ್ತರಿಸಲು ಸಾಧ್ಯವೇ? 47 ವರ್ಷಗಳ ಕಾಲ ರಾಜಕೀಯರಂಗದಲ್ಲಿ ಪಳಗಿದ ಅವರು ಕೊನೆಗೂ ಸಿಡಿದೆದ್ದಿದ್ದಾರೆ. ಪನ್ನೀರ್‌ ಸೆಲ್ವಂ ಬದಲಾಗುವುದೇ ಇಲ್ಲ ಎಂದೇ ಭಾವಿಸಿದ್ದ ಜನರಿಗೆ ಅಚ್ಚರಿ ಕಾದಿತ್ತು. ಜಯಲಲಿತಾ ಸಮಾಧಿ ಮುಂದೆ ಕೂತು ಗಳಗಳನೆ ಕಣ್ಣೀರು ಸುರಿಸಿದ ಅವರು, ‘ಬಲವಂತವಾಗಿ ನನ್ನ ರಾಜೀನಾಮೆ ಪಡೆಯಲಾಗಿದೆ.

ಶಶಿಕಲಾ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವದ ಕೊಲೆಯಾಗುತ್ತದೆ’ ಎಂದು ಹೇಳುವ ಮೂಲಕ ತಮಿಳುನಾಡಿನಲ್ಲಿ ಅಚ್ಚರಿಯ ಅಲೆ ಮೂಡಿಸಿದ್ದರು. ಅದಕ್ಕೂ ಮುನ್ನ ಜಲ್ಲಿಕಟ್ಟು ಭುಗಿಲನ್ನು ಎಚ್ಚರಿಕೆಯಿಂದ ನಿರ್ವಹಿಸಿ ಒಳ್ಳೆಯ ಹೆಸರು ಗಳಿಸಿದ್ದರು. ಪನ್ನೀರ್ ಸಿಡಿದೆದ್ದ ಕೂಡಲೇ ಅವರ ಇದುವರೆಗಿನ ಗುಲಾಮೀಗುಣವನ್ನು ಕ್ಷಣಮಾತ್ರದಲ್ಲಿ ಮರೆತ ಜನ, ಅವರಲ್ಲಿ ಹೊಸ ನಾಯಕನ ಉದಯವನ್ನೇ ಕಂಡದ್ದು ರಾಜಕೀಯ ಕ್ಷೇತ್ರದ ಜಾದೂ ಎಂದೇ ಹೇಳಬಹುದು.

ಏನೇ ಆಗಲಿ ಇತ್ತೀಚಿನ ಕೆಲ ವರ್ಷಗಳಿಂದ ಚಹಾ ಮಾರುವವರಿಗೆಲ್ಲಾ ‘ಅಧಿಕಾರ ಯೋಗ’ ಬಂದಂತಿದೆ. ತೇನಿ ಜಿಲ್ಲೆಯ ಪೆರಿಯಾಕುಲಂ ಗ್ರಾಮದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ಪನ್ನೀರ್‌ ಅವರಿಗೆ ಅದೇ ಗ್ರಾಮದಲ್ಲಿ ಕೃಷಿ ಭೂಮಿಯೂ ಇದೆ. ಹಿಂದುಳಿದ ವರ್ಗವಾದ ಮಾರವರ್ (ತೇವರ್ ಸಮುದಾಯದ ಉಪಜಾತಿ) ಆದ ಪನ್ನೀರ್‌ ಬಿ.ಎ ಪದವೀಧರ. ಪನ್ನೀರ್‌ ಸ್ಟಾಲ್‌ನಲ್ಲಿ ಅಂದಿನಿಂದಲೂ ಟೀ ಬೆಲೆ ಸ್ವಲ್ಪ ಜಾಸ್ತಿಯೇ.

ಹತ್ತು ರೂಪಾಯಿಗೆ ಒಂದು ಗ್ಲಾಸ್ ಆದರೂ ಜನ ಹುಡುಕಿಕೊಂಡು ಬಂದು ಕುಡಿದೇ ಹೋಗುತ್ತಿದ್ದರು. ಈಗ ಈ ಟೀ ಅಂಗಡಿಯನ್ನು ಅವರ ತಮ್ಮ ನೋಡಿಕೊಳ್ಳುತ್ತಿದ್ದಾರೆ. ಹದಿನೆಂಟು ರೂಪಾಯಿಗೆ ಒಂದು ಕಪ್ ಟೀ. ಟೀ ಅಂಗಡಿ ವ್ಯಾಪಾರ ಮಾಡಿಕೊಂಡೇ ಅವಿಭಜಿತ ಡಿಎಂಕೆ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿದ ಪನ್ನೀರ್‌ಗೆ ಆಗ 18 ವರ್ಷ.

ಬೂತ್ ಮಟ್ಟದಲ್ಲಿ ಕೆಲಸ ಆರಂಭಿಸಿ ಪುರಸಭೆ, ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತನಾಗಿ ದುಡಿದವರು ಅವರು. 1973ರಲ್ಲಿ ಖಜಾಂಚಿಯಾಗಿದ್ದ ಎಂ.ಜಿ.ರಾಮಚಂದ್ರನ್ ಅವರನ್ನು ಡಿಎಂಕೆ ಪಕ್ಷದಿಂದ ಹೊರಹಾಕಲಾಯಿತು. (ಈಗ ಎಐಎಡಿಎಂಕೆ ಖಜಾಂಚಿ ಸ್ಥಾನದಲ್ಲಿದ್ದ ಪನ್ನೀರ್‌ ಅವರನ್ನು ಶಶಿಕಲಾ ಆ ಸ್ಥಾನದಿಂದ ಹೊರಹಾಕಿದ್ದಾರೆ.) ಆಗ ಎಂಜಿಆರ್ ಸ್ಥಾಪಿಸಿದ ಅಣ್ಣಾಡಿಎಂಕೆ ಪಕ್ಷಕ್ಕೆ ಪನ್ನೀರ್‌  ಸೇರಿಕೊಂಡರು.

ಎಂಜಿಆರ್ ನಿಧನಾನಂತರ ಜಯಲಲಿತಾರ ಕಟ್ಟಾ ಅಭಿಮಾನಿಯಾಗಿ ಅಂದಿನಿಂದಲೂ ಅವರ ಸೇವಕನಾಗಿಯೇ ಉಳಿದುಕೊಂಡರು. ಇದರ ಫಲವಾಗಿ 1996ರಿಂದ 2001ರವರೆಗೆ ಪೆರಿಯಾಕುಲಂ ಪುರಸಭೆ ಅಧ್ಯಕ್ಷರಾದರು. ತೇನಿ ಜಿಲ್ಲೆಯ ಬೋದಿನಾಯಕನೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ದ್ರಾವಿಡ ಪಕ್ಷದಲ್ಲಿದ್ದರೂ ದ್ರಾವಿಡ ಸಿದ್ಧಾಂತ ಮೈಗೂಡಿಸಿಕೊಂಡಿಲ್ಲ.

ಅತಿ ದೊಡ್ಡ ಇತಿಹಾಸ ಹೊಂದಿರುವ ಮುಕುಳತ್ತೂರು/ತೇವರ್ ಜನಾಂಗ ತಮಿಳುನಾಡಿನಲ್ಲಿ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯವೇ ಜಯಲಲಿತಾ ಅವರಿಗೆ ಬೆನ್ನೆಲುಬಾಗಿತ್ತು. ಹೀಗೆ ಪನ್ನೀರ್‌ ಸೆಲ್ವಂ ರಾಜಕೀಯವಾಗಿ ತೇವರ್ ಸಮುದಾಯದ ಭರವಸೆಯ ನಾಯಕನಾಗಿ ಬೆಳೆಯುತ್ತಿದ್ದಾಗಲೇ, ಶಶಿಕಲಾ ಅವರ ಪರಿಚಯವಾಯಿತು.

1999ರಲ್ಲಿ ಪೆರಿಯಾಕುಲಂ ಲೋಕಸಭಾ ಕ್ಷೇತ್ರದಲ್ಲಿ ಟಿ.ಟಿ.ವಿ. ದಿನಕರನ್ ಎಐಎಡಿಎಂಕೆ ಅಭ್ಯರ್ಥಿ. ದಿನಕರನ್, ಶಶಿಕಲಾ ಅವರ ಸಂಬಂಧಿ. ಆದಾಗಲೇ ಈ ಭಾಗದಲ್ಲಿ ಜನಪ್ರಿಯವಾಗಿದ್ದ ಟೀವಾಲಾ ಪನ್ನೀರ್‌ ಸಹಾಯ ಶಶಿಕಲಾಗೆ ಬೇಕಾಯಿತು. ಅಂದಿನಿಂದ ಈ ಏಣಿಯನ್ನೇರಿ ಶಶಿಕಲಾ ಪೋಯಸ್‌ ಗಾರ್ಡನ್‌ಗೆ ಬಂದು ಇಳಿದದ್ದು, ಅಲ್ಲೇ ತಳ ಊರಿದ್ದು ಇತಿಹಾಸ.

ಶಶಿಕಲಾ ಅವರ ಅಧಿಕಾರದ ಆಸೆಯ ವಿರುದ್ಧ ಬಂಡೇಳುವ ಮುನ್ನ ಇದ್ದ ಪನ್ನೀರ್‌ ಅವರ ವ್ಯಕ್ತಿತ್ವವೇ ಬೇರೆ. ಆದರೆ ಸಹನೆಗೂ ಒಂದು ಮಿತಿ ಇರುತ್ತದೆ ಅಲ್ಲವೇ? ಡೊಗ್ಗುಸಲಾಮು ಹಾಕಿಕೊಂಡೇ ರಾಜಕೀಯ ಆಟವಾಡುವವರನ್ನು ಮತದಾರರು ಸಹಿಸುವುದಿಲ್ಲ. ಶಶಿಕಲಾ ವಿರುದ್ಧ ಬಂಡಾಯದ ಬಾವುಟ ಹಾರಿಸಿದ ನಂತರ ತಮಗೆ ಸಿಕ್ಕ ಬೆಂಬಲ, ಮೆಚ್ಚುಗೆ ಹಾಗೂ ವಿವಿಧ ರಾಜಕೀಯ ಪಕ್ಷಗಳ ಅಪ್ಪುಗೆ ಎಲ್ಲವನ್ನೂ ಕಂಡು ಪನ್ನೀರ್‌ ಅವರಿಗೆ ಈಗ ತಮ್ಮ ಶಕ್ತಿಯ ಅರಿವಾಗಿರಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT