ನವದೆಹಲಿ: ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರೊಂದಿಗೆ ವಿನಯ ಮತ್ತು ಗೌರವದಿಂದ ನಡೆದುಕೊಳ್ಳಿ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುಶೀಲ್ ಚಂದ್ರ ಅವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ನೋಟು ರದ್ದತಿ ಬಳಿಕ ಕಪ್ಪುಹಣದ ಮಾಹಿತಿ ಕಲೆಹಾಕಲು ಅಧಿಕಾರಿಗಳು ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡಬಹುದು ಎನ್ನುವ ಆತಂಕ ಜನರಲ್ಲಿ ಮೂಡಿದೆ. ಈ ಕುರಿತು ತೆರಿಗೆ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ‘ತೆರಿಗೆ ಸಂಗ್ರಹಿಸುವುದು ನಮ್ಮ ಪ್ರಮುಖ ಕರ್ತವ್ಯ. ಆದರ ನಡುವೆಯೂ ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಗೌರವ ಮತ್ತು ವಿನಯದಿಂದ ನಡೆಸಿಕೊಳ್ಳಬೇಕು.
ಈ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿರುವ ಭರವಸೆ ಉಳಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ. ತೆರಿಗೆದಾರ ಸ್ನೇಹಿ ಸೇವೆಗಳನ್ನೂ ನೀಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.