ಬೀದರ್: ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆದ ‘ವಚನ ವಿಜಯೋತ್ಸವ’`ದ ನಿಮಿತ್ತ ಶನಿವಾರ ನಗರದಲ್ಲಿ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಿತು.
ಸೊಲ್ಲಾಪುರದ ನಂದಿಕೋಲು, ಹೊಸೂರಿನ ಝಾಂಜ್ಮೇಳ, ಮಂಡ್ಯದ ಪೂಜಾ ಕುಣಿತ–ತಮಟೆ ತಂಡ, ಬರೂರಿನ ಚಿಟಕಿ ಭಜನೆ–ಹಲಗೆ ತಂಡ, ಗದಗಿನ ಜಾನಪದ ಕಲಾ ತಂಡ, ಸ್ಥಳೀಯ ಕೋಲಾಟ, ವಿದ್ಯಾರ್ಥಿನಿಯರ ಲೇಜಿಮ್, ಭಜನಾ ತಂಡಗಳು, ವಚನ ಉಡುಪು, ಛತ್ರಚಾಮರ, ಕೇಸರಿ ಧ್ವಜ, ಗೊಂಬೆಗಳು, ವೀರಗಾಸೆ, ಮರಗಾಲು ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಮೆರವಣಿಗೆಯಲ್ಲಿ ವಚನ ಸಾಹಿತ್ಯ, ವಿವಿಧೆಡೆಯಿಂದ ಬಂದಿದ್ದ ಬಸವ ಜ್ಯೋತಿ ತಂಡಗಳು, ತಲೆಯ ಮೇಲೆ ವಚನ ಸಾಹಿತ್ಯ ಹೊತ್ತ ನೂರಾರು ಶರಣ, ಶರಣೆಯರು ಭಕ್ತಿ ಭಕ್ತಿಭಾವ ಮೆರೆದರು. ಡಾಲ್ಬಿಗಳಲ್ಲಿ ಮೂಡಿ ಬರುತ್ತಿದ್ದ ‘ಅಂಗದ ಮೇಲೆ ಲಿಂಗವ ಕೊಟ್ಟ.....’, ‘ವಿಜಯೋತ್ಸವ, ವಚನ ವಿಜಯೋತ್ಸವ....’ ಹಾಡಿಗೆ ಮಹಿಳೆಯರು ಹೆಜ್ಜೆ ಹಾಕಿದರೆ, ಯುವಕರು ಕುಣಿದು ಕುಪ್ಪಳಿಸಿದರು.
ಕುದುರೆ ಮೇಲೆ ಕುಳಿತಿದ್ದ ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ ಹಾಗೂ ಶರಣರ ವೇಷ ಧರಿಸಿದ್ದ ಮಕ್ಕಳು ಗಮನ ಸೆಳೆದರು. ಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ಹಾಗೂ ವೃದ್ಧರೂ ಸಹ ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.