ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಗಳಲ್ಲಿ ಮತ್ತು ಕುರುಚಲು ಕಾಡುಗಳತ್ತ ಈಗ ಕಣ್ಣು ಹಾಯಿಸಿದರೆ ಮುತ್ತುಗದ ಹೂವುಗಳ ಸಂಭ್ರಮ. ಹೌದು, ಕಾಡು ಮತ್ತು ತೋಟದ ಸಾಲುಗಳಲ್ಲಿ ಮುತ್ತುಗದ ಹೂವುಗಳು ಆಕರ್ಷಕವಾಗಿ ಕಾಣುತ್ತಿವೆ. ಮುತ್ತುಗದ ಹೂವನ್ನು ಕಾಡಿನ ಬೆಂಕಿ ಹೂ ಎಂದು ಕರೆಯಲಾಗುತ್ತದೆ.
ಹತ್ತಿರಕ್ಕೆ ಹೋದಂತೆ ಅದರ ಸೌಂದರ್ಯ ಅನಾವರಣ ಗೊಳ್ಳುತ್ತದೆ. ಎಲೆ ಉದುರಿದ ಮರದಲ್ಲಿ ಹೂವಷ್ಟೇ ಕಾಣಿಸುತ್ತದೆ. ಮರ ಸಮೀಪಿಸುತ್ತಿದ್ದಂತೆ ಜೇನು ನೊಣಗಳ ಝೇಂಕಾರ. ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಹಕ್ಕಿ, ಜೇನುಗಳು ಹೂವಿನ ಮೇಲೆ ಹಾರುತ್ತಾ, ಮಧು ಪಾತ್ರೆಗೆ ಲಗ್ಗೆ ಹಾಕುತ್ತವೆ. ಎಂದಿನಂತೆ ಈ ಬಾರಿಯೂ ಜೇನ್ನೊಣಗಳು ವಲಸೆ ಬಂದಿವೆ. ಪುಟ್ಟ ಹಕ್ಕಿಗಳು ಕಾಣಿಸಿಕೊಂಡಿವೆ.
ಹಮ್ಮಿಂಗ್ ಬರ್ಡ್ನಂಥ ಪುಟ್ಟ ಹಕ್ಕಿಗಳು ತಮ್ಮ ಉದ್ದವಾದ ಕೊಕ್ಕಿನಿಂದ ಮಧು ಹೀರುವ ದೃಶ್ಯಗಳನ್ನು ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ನೋಡಿ ಆನಂದಿಸಬೇಕು. ಮುತ್ತುಗ ಕೇವಲ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ.
ಇದರ ಎಲೆಯನ್ನು ಊಟದ ಎಲೆ ತಯಾರಿಕೆಯಲ್ಲಿ ಬಳಸುತ್ತಾರೆ. ಮುತ್ತು ಗದ ಎಲೆಯಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ಮುತ್ತುಗದ ಎಲೆಗೆ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬೇಡಿಕೆ ಇದೆ. ಮುತ್ತುಗ ಔಷಧಯುಕ್ತ ಮರವೂ ಹೌದು. ಇದರ ಬೀಜದಿಂದ ನಾಟಿ ವೈದ್ಯರು ಔಷಧ ತಯಾರಿಸುವರು. ನಾರಿನಿಂದ ಹಗ್ಗ ಹೆಣಿಯುವರು. ಕೆಲವರು ವಿಶೇಷ ಸಂದರ್ಭಗಳಲ್ಲಿ ಇದರ ಗೊಂಬೆಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ.
* ಮುತ್ತುಗದ ಮರದಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಜನ ಉರುವಲಿಗಾಗಿ ಕಡಿಯುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದೊಂದು ದಿನ ಮುತ್ತುಗದ ಹೂವ ಚಿತ್ರದಲ್ಲಿ ನೋಡಬೇ ಕಾದೀತು.
-ಆರ್.ಚೌಡರೆಡ್ಡಿ
ಕೆರೆ, ತೋಟಗಳಲ್ಲಿ...
ಮುತ್ತುಗ ನೈಸರ್ಗಿಕವಾಗಿ ಬೆಳೆಯುವ ಮರ. ಕಾಡು ಸಮೃದ್ಧವಾಗಿದ್ದ ಕಾಲದಲ್ಲಿ, ಮುತ್ತಗದ ಮರಗಳು ಕಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದವು. ಕಾಡುಗಳು ಕಣ್ಮರೆಯಾದ ಮೇಲೆ, ಮುತ್ತುಗ ರಸ್ತೆ ಬದಿ, ಮಾವಿನ ತೋಟಗಳ ಬೇಲಿ, ಕೆರೆ ಏರಿಗೆ ಮಾತ್ರ ಸೀಮಿತವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.