ಮಾನವ ಅಲೆಮಾರಿ ಸ್ಥಿತಿಯಿಂದ ಸ್ಥಿರವಾಗಿ ನಿಲ್ಲುವವರೆಗೂ ನಡೆಯುತ್ತಲೇ ಇದ್ದಾನೆ. ಅಂಬೆಗಾಲಿನಿಂದ ಆರಂಭವಾಗುವ ಮುನ್ನಡೆಯು ಮುಪ್ಪಿನ ಕೋಲುನಡಿಗೆಯವರೆಗೂ ಮುಂದುವರೆಯುತ್ತದೆ.
ಮೊದಮೊದಲು ಪಾದರಕ್ಷೆಗಳನ್ನು ಬಳಸಲು ಗೊತ್ತಿರದ ಕಾಲ ಇತ್ತು. ಆದರೆ ಈಗ ಆಧುನಿಕತೆಯ ಪ್ರಭಾವದಿಂದಾಗಿ ಚಿಕ್ಕಮಕ್ಕಳಿಂದ ಹಿಡಿದು ಮುಪ್ಪಾನು ಮುಪ್ಪು ಕಾಲುಗಳು ಚಪ್ಪಲಿಯಿಲ್ಲದೆ ಕಾಲು ಎತ್ತಲಾರವು. ಇನ್ನೂ ಹೇಳಬೇಕೆಂದರೆ ನಗರಗಳ ಅಡುಗೆಮನೆಯಲ್ಲೂ ಚಪ್ಪಲಿಗಳ ಸದ್ದು. ಮಹಿಳೆಯರು ವಿವಿಧ ವಿನ್ಯಾಸದ ಹಾಗೂ ಉಡುಪುಗಳಿಗೆ ಮ್ಯಾಚ್ ಆಗುವ ಪಾದರಕ್ಷೆ ಹಾಕುವುದು ಸಾಮಾನ್ಯ.
ಈ ವ್ಯಾಪಕ ಬಳಕೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಜಗತ್ತು ಮತ್ತೆ ಬರಿಗಾಲ ನಡಿಗೆಗೆ ಮರಳುತ್ತಿದೆ. ಅನೇಕ ಸಂಶೋಧನೆಗಳು ಬರಿಗಾಲ ನಡಿಗೆಯ ಮಹತ್ವ ಮತ್ತು ಉತ್ತಮ ಆರೋಗ್ಯಕ್ಕೆ ಅದರ ಅಗತ್ಯವನ್ನು ಸಾರಿ ಹೇಳುತ್ತಿವೆ.
ಖರ್ಚಿಲ್ಲದ ಚಿಕಿತ್ಸೆ
*ಬರಿಗಾಲಿನಲ್ಲಿ ನಡೆಯುವುದರಿಂದ ದೇಹದ ಸಮತೋಲನ ಹೆಚ್ಚುತ್ತದೆ.
*ಪಾದಗಳು ಗಟ್ಟಿಗೊಳ್ಳುತ್ತವೆ. ಮಾಂಸಖಂಡಗಳು ಬಲಿಷ್ಠವಾಗುತ್ತವೆ.
*ಬರಿಗಾಲಿನಲ್ಲಿ ನಡೆಯುವುದರಿಂದ ಕೀಲುನೋವು ದೂರವಾಗುತ್ತದೆ.
*ಬೆನ್ನುನೋವಿಗೆ ಇದು ರಾಮಬಾಣ.
*ರಕ್ತಸಂಚಾರ ಸುಗಮವಾಗಿ ಹೃದಯದ ತೊಂದರೆಯೂ ಬರುವುದಿಲ್ಲ.
*ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ಆಯಸ್ಸು ಹೆಚ್ಚುತ್ತದೆ.
*ದೇಹದ ಎಲ್ಲಾ ಅವಯವಗಳಿಗೂ ಶಕ್ತಿಹಂಚಿಕೆಯಾಗಿ ಬಲಿಷ್ಠವಾಗುತ್ತವೆ.
ಬಹುಪಯೋಗಿ ಬರಿಗಾಲ ನಡಿಗೆಗೆ ಸ್ವಚ್ಛವಾದ ರಸ್ತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹುಲ್ಲಿನ ಮೈದಾನದಲ್ಲಿ ನಡೆಯುವುದು ಉತ್ತಮ.
–ಸೋಮು ಕುದರಿಹಾಳ