ನವದೆಹಲಿ (ಪಿಟಿಐ): ನೋಟು ರದ್ದತಿ ನಂತರ ಭಾರತದ ಅರ್ಥ ವ್ಯವಸ್ಥೆ ‘ನಗದುರಹಿತ’ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅಮೆರಿಕದ ಖ್ಯಾತ ಅರ್ಥ ಶಾಸ್ತ್ರಜ್ಞ ಸ್ಟೀವ್ ಎಚ್. ಹಾಂಕ್ ಹೇಳಿದ್ದಾರೆ.
‘ನೋಟು ರದ್ದತಿಯೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಬೇಕಾದರೆ ಭಾರತದ ಆರ್ಥಿಕ ಸ್ಥಿತಿ ನೋಡಿ. ಪರಿಣಾಮ ಏನು ಎಂದು ಗೊತ್ತಾಗುತ್ತದೆ ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ನಗದುರಹಿತ ವ್ಯವಸ್ಥೆಗೆ ಭಾರತ ಇನ್ನೂ ಸಜ್ಜಾಗಿಲ್ಲ. ಅಗತ್ಯ ಬೇಕಾದ ಮೂಲಸೌಕರ್ಯಗಳು ಅಲ್ಲಿಲ್ಲ. ಈ ಅರಿವು ಮೋದಿ ಅವರಿಗೆ ಇರಬೇಕಿತ್ತು’ ಹಾಂಕ್ ಅಭಿಪ್ರಾಯಪಟ್ಟಿದ್ದಾರೆ.
‘ನೋಟು ರದ್ದತಿ ನಿರ್ಧಾರ ದೇಶವನ್ನು ಎಲ್ಲಿಗೆ ಕರೆದೊಯ್ದು ನಿಲ್ಲಿಸುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಅಷ್ಟೇ ಏಕೆ ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿಲ್ಲ’ ಎಂದು ಅವರು ಈ ಮೊದಲು ಟೀಕಿಸಿದ್ದರು. ಮೇರಿಲ್ಯಾಂಡ್ ಬಾಲ್ಟಿಮೋರ್ ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ವಿಶ್ವವಿದ್ಯಾಲಯದಲ್ಲಿ ಹಾಂಕ್ ಅವರು ಆನ್ವಯಿಕ ಅರ್ಥಶಾಶ್ತ್ರಜ್ಞರಾಗಿದ್ದಾರೆ.