ಕಲಬುರ್ಗಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಬೇಕು. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಮುಖ ಪಾತ್ರವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಲಿಂಗರಾಜ ಬಿರಾದಾರ ತಿಳಿಸಿದರು.
ತಾಲ್ಲೂಕಿನ ಶಾಹಬಾದನಲ್ಲಿ ಶನಿವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಲಬುರ್ಗಿ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತಗೊಳಿಸುವುದು ಮುಖ್ಯ ಗುರಿಯಾಗಬೇಕು ಎಂದರು.
ಮುಖಂಡರಾದ ಶಾಮಪ್ರಸಾದ ಮುಖರ್ಜಿ, ಪಂಡಿತ್ ದೀನ್ದಯಾಳ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ನಾನಾಜಿ ದೇಶಮುಖ, ಸುಂದರ ಸಿಂಗ್ ಭಂಡಾರಿಯವರು ಕಷ್ಟಪಟ್ಟು ಬಿಜೆಪಿ ಬೆಳೆಸಿದ್ದಾರೆ. ಅವರ ಆಶಯದಂತೆ ಪಕ್ಷ ಮುನ್ನಡೆಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.