ಸುರಪುರ: ‘ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಿಗೆ ವಕ್ಫ್ ಮಂಡಳಿಯಿಂದ ಮಸೀದಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಅನುದಾನ ಸಮರ್ಪಕವಾಗಿ ಬಳಸದಿದ್ದಲ್ಲಿ ಅಥವಾ ಕಾಮಗಾರಿಯನ್ನು ಸರಿಯಾಗಿ ಕೈಗೊಳ್ಳದಿದ್ದಲ್ಲಿ ಅನುದಾನವನ್ನು ಹಿಂಪಡೆಯಲಾಗುವುದು’ ಎಂದು ವಕ್ಫ್ ಮಂಡಳಿಯ ಜಿಲ್ಲಾ ಅನುಷ್ಠಾನಾಧಿಕಾರಿ ಆಯೆಶಾ ಅಂಜುಮ್ ತಿಳಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಕ್ಫ್ ಮಂಡಳಿಯ ಅನುದಾನದಲ್ಲಿ ನಡೆದಿರುವ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿ ಮಾತನಾಡಿದರು.
ಜಾಲಿಬೆಂಚಿ ಗ್ರಾಮದ ಮಸೀದಿ ಕಾಮಗಾರಿಯನ್ನು ವೀಕ್ಷಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಮ ಪಂಚಾಯತಿ ಸದಸ್ಯ ಮಾಸುಮಸಾಬ ತಿಂಥಣಿ ಮಾತನಾಡಿ, ‘ನಮ್ಮ ಗ್ರಾಮದಲ್ಲಿದ್ದ ಮಸೀದಿ ಸಂಪೂರ್ಣ ಹಾಳಾಗಿತ್ತು,ಇದರ ನಿರ್ಮಾಣಕ್ಕೆ ಶಾಸಕ ರಾಜಾ ವೆಂಕಟಪ್ಪ ವಕ್ಫ್ ಮಂಡಳಿಯಿಂದ ₹2ಲಕ್ಷ ಮಂಜೂರು ಮಾಡಿಸಿದ್ದರು. ಆ ಹಣದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇನ್ನಷ್ಟು ಅನುದಾನದ ಅವಶ್ಯಕತೆ ಇದೆ. ವಕ್ಫ್ ಅಧಿಕಾರಿಗಳು ಮಂಜೂರು ಮಾಡಿಸಬೇಕೆಂದು’ ವಿನಂತಿಸಿದರು.
ಮಂಡಳಿಯ ಇನ್ನೊಬ್ಬ ಅಧಿಕಾರಿ ಶಾಜಿಯಾ ಉಪಸ್ಥಿತರಿದ್ದರು.