ಗಂಗಾವತಿ: ಸ್ವಾತಂತ್ರ್ಯ ಸಿಕ್ಕು ಏಳು ದಶಕ ಕಂಡರೂ ಸಾರಿಗೆ ವಾಹನದ ಮುಖವೇ ಕಾಣದ ನಗರಕ್ಕೆ ಸಮೀಪ ಇರುವ ಸಿದ್ದಿಕೇರಿ ಗ್ರಾಮಕ್ಕೆ ಇತ್ತೀಚೆಗೆ ನಗರ ಸಾರಿಗೆ ಆರಂಭಿಸಲಾಗಿತ್ತು. ಸೇವೆ ಆರಂಭವಾಗಿ ಒಂದು ಎರಡು ವಾರ ಕಳೆಯುವುದರೊಳಗೆ ಸ್ಥಗಿತವಾಗುವ ಮೂಲಕ ಜನರಿಗೆ ನಿರಾಸೆ ಉಂಟು ಮಾಡಿದೆ.
ನಗರದ ಪಂಪಾನಗರ ವೃತ್ತದಿಂದ ಕೊಟ್ಟೂರೇಶ್ವರ ಸಂಸ್ಥೆಯ ಕಾಲೇಜು, ವಾಲ್ಮೀಕಿ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಕೈಗೊಂಡಿರುವುದು ಸಿದ್ಧಿಕೇರಿಗೆ ಹೋಗಲು ಪರ್ಯಾಯ ಮಾರ್ಗವಿಲ್ಲದೇ ಕಳೆದ ಹತ್ತು ದಿನಗಳಿಂದ ಸಾರಿಗೆ ವಾಹನ ಓಡಾಟ ಸ್ಥಗಿತವಾಗಿದೆ.
ಜೆನರ್ಮ್್ ನಗರ ಸಾರಿಗೆ ಯೋಜನೆಯಿಂದ ಮಂಜೂರಾಗಿದ್ದ ಒಂದು ಬಸ್ ಸಿದ್ದಿಕೇರಿಗೆ ಸಂಚಾರ ನಡೆಸುತ್ತಿತ್ತು. ಸುಲಭ ಸಂಚಾರಕ್ಕೆ ಸಾಧ್ಯವಿಲ್ಲದ ರಸ್ತೆ, ಪ್ರಯಾಣಿಕರ ಕೊರತೆ, ಆದಾಯ ಕೊರತೆ ಸಮಸ್ಯೆಯ ಮಧ್ಯೆಯೂ ಸಾರಿಗೆ ಇಲಾಖೆ, ಎರಡು ವಾರ ದಿನಕ್ಕೆ ಮೂರು ಬಾರಿ ವಾಹನ ಓಡಿಸುವ ಮೂಲಕ ಸೇವೆ ನೀಡಿದ್ದರಿಂದ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರಿಗೆ ಅನುಕೂಲವಾಗಿತ್ತು.
‘ಚರಂಡಿ ನಿರ್ಮಾಣದ ನೆಪದಲ್ಲಿ ವಾಹನ ಸೇವೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ರಸ್ತೆಯ ಮೇಲ್ಮೈಯಿಂದ ಸುಮಾರು ಎರಡು ಅಡಿ ಎತ್ತರಕ್ಕೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದು ವಾಹನ ಓಡಾಟಕ್ಕೆ ತೊಂದರೆಯಾಗಿದೆ’ ಎಂದು ಪ್ರಯಾಣಿಕರಾದ ದೇವಪ್ಪ ತಾಳದ, ಸುಂಕೀರಪ್ಪ ನಾಯಕ ದೂರಿದ್ದಾರೆ.