ಪೋಪರ ನೆರವಿಗೆ ಹೊಚಿಮಿನ್ ಅವರ ಮನವಿ
ಹಾಂಕಾಂಗ್, ಫೆ. 13– ವಿಯಟ್ನಾಂ ಯುದ್ಧವನ್ನು ಅಂತ್ಯಗೊಳಿಸಲು ನೆರವಾಗಬೇಕೆಂದು ಉತ್ತರ ವಿಯಟ್ನಾಂನ ಅಧ್ಯಕ್ಷ ಹೊಚಿಮಿನ್ರವರು ಪೋಪ್ ಪಾಲ್ರವರಿಗೆ ಮನವಿ ಮಾಡಿಕೊಂಡಿದ್ದಾರೆಂದು ಹಾನಾಯ್ ರೇಡಿಯೋ ಇಂದು ವರದಿ ಮಾಡಿದೆ.
ಅಮೆರಿಕವು ಎಲ್ಲಕ್ಕಿಂತ ಮೊದಲು ಉತ್ತರ ವಿಯಟ್ನಾಂ ಮೇಲೆ ತನ್ನ ಬಾಂಬ್ ದಾಳಿಗಳನ್ನು ಮತ್ತು ಇತರ ಯುದ್ಧ ಕಾರ್ಯಾಚರಣೆಗಳನ್ನೂ ನಿಲ್ಲಿಸಬೇಕು ಎಂದು ಅಧ್ಯಕ್ಷರು ಪೋಪ್ರವರಿಗೆ ಕಳುಹಿಸಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆಂದು ಆ ರೇಡಿಯೋ ವರದಿ ಮಾಡಿದೆ.
***
‘ಮುಂದಿನ ರಾಷ್ಟ್ರಪತಿ ಮುಸ್ಲಿಮ್?’
ಮುಂಬೈ, ಫೆ. 13– ಮುಸ್ಲಿಂ ನಾಯಕರೊಬ್ಬರು ಭಾರತದ ಮುಂದಿನ ರಾಷ್ಟ್ರಪತಿಯಾಗುವ ಸಾಧ್ಯತೆ ಇದೆಯೆಂದು ಕೇಂದ್ರ ರೈಲ್ವೆ ಸಚಿವ ಶ್ರೀ ಎಸ್.ಕೆ. ಪಾಟೀಲ್ ನಿನ್ನೆ ಇಲ್ಲಿ ನುಡಿದರು.
ಇಲ್ಲಿನ ಮುಸ್ಲಿಂ ಜನವಸತಿ ಹೆಚ್ಚಿರುವ ಕ್ಷೇತ್ರವೊಂದರಲ್ಲಿ ನಿನ್ನೆ ರಾತ್ರಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.
ಈಗಾಗಲೇ ಭಾರತದ ಉಪರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟಿನ ಅನೇಕ ನ್ಯಾಯಾಧೀಶರ ಸ್ಥಾನಗಳಲ್ಲಿ ಮುಸಲ್ಮಾನರಿದ್ದಾರೆ. ಕಾಂಗ್ರೆಸ್ನ ಜಾತ್ಯತೀತ ನೀತಿಯೇ ಇದಕ್ಕೆಲ್ಲ ಕಾರಣವಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ಅವರು ನುಡಿದರು.
**
ಚತುರ್ಥ ಯೋಜನೆಯಲ್ಲಿ ಹಳ್ಳಿಗಳ ಪ್ರತಿಯೊಂದುಮನೆಗೂ ವಿದ್ಯುಚ್ಛಕ್ತಿ
ಬಳ್ಳಾರಿ, ಫೆ. 13– ನಾಲ್ಕನೆಯ ಯೋಜನೆಯ ಅವಧಿಯಲ್ಲಿ ಗ್ರಾಮಾಂತರ ವಿದ್ಯುದೀಕರಣಕ್ಕಾಗಿ ಯೋಜನಾ ಆಯೋಗವು 210 ಕೋಟಿ ರೂ.ಗಳ ವೆಚ್ಚವನ್ನು ಗೊತ್ತು ಮಾಡಿದೆ ಎಂದು ಯೋಜನಾ ಆಯೋಗದ ಮಾಜಿ ಸದಸ್ಯ ಡಾ. ವಿ.ಕೆ.ಆರ್.ವಿ. ರಾವ್ ಅವರು ನೆನ್ನೆ ಇಲ್ಲಿ ತಿಳಿಸಿದರು.
ಗ್ರಾಮದಲ್ಲಿನ ಪ್ರತಿಯೊಂದು ಮನೆಗೆ ಮತ್ತು ನೀರಾವರಿ ಬಾವಿಗೆ ವಿದ್ಯುಚ್ಛಕ್ತಿಯನ್ನು ಒದಗಿಸಬೇಕೆಂದು ಈ ಯೋಜನೆಯಲ್ಲಿ ಯೋಚಿಸಲಾಗಿದೆ ಎಂದೂ ಡಾ. ರಾವ್ ನುಡಿದರು.