ಮಂಡ್ಯ: ಸಮಾಜಕ್ಕೆ ಸಂದೇಶ ಸಾರುವಂತಹ ಪಾತ್ರಗಳು ‘ಪೌರಾಣಿಕ’ ನಾಟಕಗಳಲ್ಲಿವೆ ಎಂದು ಯುವ ಮುಖಂಡ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ನಗರದ ಕಲಾಮಂದಿರದಲ್ಲಿ ಕಲಾಜ್ಯೋತಿ ಸ್ತ್ರೀ ನಾಟಕ ಮಂಡಳಿ ವತಿಯಿಂದ ಭಾನುವಾರ ನಡೆದ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಭಾರತ, ರಾಮಾಯಣ ಸೇರಿದಂತೆ ಹಲವು ಭಕ್ತಿ ಪ್ರಧಾನ ನಾಟಕಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿವೆ. ಕುರುಕ್ಷೇತ್ರದಲ್ಲಿನ ಕೃಷ್ಣನ ಸಂದೇಶವು ಎಲ್ಲರಿಗೂ ಸ್ಫೂರ್ತಿದಾಯಕವಾದುದು. ಜತೆಗೆ ಸರಿ–ತಪ್ಪುಗಳನ್ನು ಅವಲೋಕಿಸುವ ಸನ್ಮಾರ್ಗದ ದಾರಿಯನ್ನು ಕಾಣಬಹುದು ಎಂದು ಹೇಳಿದರು.
ನಾಟಕದಲ್ಲಿ ಬರುವಂತಹ ಒಳ್ಳೆಯ ಪಾತ್ರಗಳನ್ನು ಎಲ್ಲರೂ ಅನುಸರಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲೆ ಉಳಿವಿಗೆ ಯುವ ಸಮೂಹ ದುಡಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಮೂಲಕ ಪೌರಾಣಿಕ ನಾಟಕಗಳಲ್ಲಿ ಆಸಕ್ತಿ ತೋರಬೇಕು ಎಂದು ಸಲಹೆ ಮಾಡಿದರು.
ಹೊಸಹಳ್ಳಿ ಗುರುಮಠದ ರೇವಣ್ಣ ಸ್ವಾಮೀಜಿ, ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ, ವಕೀಲ ಗುರುಪ್ರಸಾದ್, ರಂಗಭೂಮಿ ಕಲಾವಿದೆ ನಾಗರತ್ನಮ್ಮ ಉಪಸ್ಥಿತರಿದ್ದರು.
ಏಳು ದಿನಗಳಿಂದ ನಡೆಯುತ್ತಿರುವ ನಾಟಕೋತ್ಸವದಲ್ಲಿ ನಾಲ್ಕನೇ ದಿನವಾದ ಭಾನುವಾರ ರೇವಣ್ಣ ಸಿದ್ದೇಶ್ವರ ಕಲಾ ಸಂಘದ ಕಲಾವಿದರು ‘ಕುರುಕ್ಷೇತ್ರ’ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದರು.