‘ಒಂದೊಂದೇ ಮರೆಯಾಗುತ್ತಿವೆ ಕನ್ನಡ ಶಾಲೆಗಳು’ ಸುದ್ದಿಗೆ ಸಂಬಂಧಿಸಿದ ಅಂಕಿ ಅಂಶಗಳು (ಪ್ರ.ವಾ., ಫೆ. 13) ದಿಗಿಲು ಬೀಳಿಸುತ್ತವೆ. ಇದಕ್ಕೆ ಪೋಷಕರಾದ ನಾವು ಕಾರಣ. ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರಷ್ಟೇ ಉದ್ಯೋಗ ಹಾಗೂ ಕೈತುಂಬ ಹಣ ಗಳಿಸುವುದು ಸಾಧ್ಯ ಎನ್ನುವ ನಂಬಿಕೆ ನಮ್ಮದು. ಖಾಸಗಿ ಶಾಲೆಗಳು ಈ ನಂಬಿಕೆಯನ್ನೇ ಹಣದ ರೂಪಕ್ಕೆ ಪರಿವರ್ತಿಸುವಲ್ಲಿ ಯಶಸ್ಸು ಸಾಧಿಸಿವೆ. ನಿಯಮಗಳನ್ನು ರೂಪಿಸುವ ನಮ್ಮ ಶಾಸಕರು ಹಾಗೂ ಸಂಸದರಲ್ಲಿ ಎಷ್ಟು ಮಂದಿಗೆ ಶಿಕ್ಷಣ ವಿಷಯದಲ್ಲಿ ಕಾಳಜಿ ಇದೆ?
ಶಿಕ್ಷಣ ಕ್ಷೇತ್ರ ಹಣ ಗಳಿಕೆಯ ಕೇಂದ್ರವಾಗಿರುವುದು ಸಾಮಾನ್ಯ ಸಂಗತಿಯಾಗಿದೆ. ಖಾಸಗಿ ಶಾಲೆಗಳಿರುವುದೇ ಹಣವುಳ್ಳವರಿಗೆ ಎಂಬಂತಾಗಿದೆ. ತನ್ನ ಶಾಲೆಗಳ ಬಗೆಗೆ ಸರ್ಕಾರಕ್ಕೇ ಕಾಳಜಿ ಇಲ್ಲ. ನಮ್ಮ ನ್ಯಾಯಾಲಯಗಳು ಶಿಕ್ಷಣ ನೀಡಿಕೆ ಮತ್ತು ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಮೂಲಭೂತ ಹಕ್ಕಿನ ನೆಲೆಯಲ್ಲಿ ಪರಿಗಣಿಸಿದವೇ ಹೊರತು ಶಿಕ್ಷಣ ತಜ್ಞರು ಮಾತ್ರ ನಿರ್ಧರಿಸಬೇಕಾದ ಗಂಭೀರ ವಿಷಯವೆಂದು ಪರಿಗಣಿಸಲಿಲ್ಲ. ಶಿಕ್ಷಣ ತಜ್ಞರ ವರದಿಯಾಧರಿಸಿ ತೀರ್ಪು ನೀಡಿದ್ದರಾಗುತ್ತಿತ್ತು. ಹೋಗಲಿ, ಮಾತೃಭಾಷಾ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಲು ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕ ಎಂದಾದರೆ ರಾಜ್ಯಗಳಿಂದ ಒತ್ತಡ ಬರುತ್ತಿಲ್ಲ, ಕೇಂದ್ರ ಈ ಕಾರ್ಯಕ್ಕೆ ಇನ್ನೂ ಮುಂದಾಗಿಲ್ಲ. ಪ್ರಾಥಮಿಕ ಹಂತದಲ್ಲಿ ಮಾತೃಭಾಷಾ ಮಾಧ್ಯಮ ಶಿಕ್ಷಣವೆನ್ನುವುದು ವೇದಿಕೆ ಮೇಲಿನ ಚರ್ಚೆ, ಘೋಷಣೆಗಷ್ಟೇ ಸೀಮಿತವಾಗಿದೆ.
-ಸಾಮಗ ದತ್ತಾತ್ರಿ, ಬೆಂಗಳೂರು